ಹೈದರಾಬಾದ್: ತೆಲಂಗಾಣ (Telangana) ಮೂಲದ ಇಬ್ಬರು ತೃತೀಯಲಿಂಗಿಗಳು (Transgenders) ತಮ್ಮ ಜೀವನದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿ, ವಿದ್ಯಾಭ್ಯಾಸ ಪೂರ್ಣಗೊಳಿಸಿ ಸರ್ಕಾರಿ ವೈದ್ಯರಾಗುವ (Doctors) ಮೂಲಕ ಹೊಸ ಇತಿಹಾಸವನ್ನೇ ಬರೆದಿದ್ದಾರೆ.
ಪ್ರಾಚಿ ರಾಥೋಡ್ ಮತ್ತು ರುತ್ ಜಾನ್ ಪಾಲ್ ಇತ್ತೀಚೆಗೆ ಸರ್ಕಾರಿ ಉಸ್ಮಾನಿಯಾ ಜನರಲ್ ಹಾಸ್ಪಿಟಲ್ (ಒಜಿಹೆಚ್)ನಲ್ಲಿ ವೈದ್ಯಕೀಯ ಅಧಿಕಾರಿಗಳಾಗಿ ಸೇರ್ಪಡೆಗೊಂಡಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ರಾಥೋಡ್ ಮಾತನಾಡಿ, ತಮ್ಮ ಬಾಲ್ಯದಿಂದಲೂ ಸಹಿಸಿಕೊಂಡು ಬಂದ ಸಾಮಾಜಿಕ ಕಳಂಕ ಹಾಗೂ ತಾರತಮ್ಯವನ್ನು ಮೆಲುಕು ಹಾಕಿದ್ದಾರೆ.
ಚಿಕ್ಕ ವಯಸ್ಸಿನಿಂದಲೇ ವೈದ್ಯರಾಗಬೇಕೆಂದು ಕನಸು ಕಂಡಿದ್ದ ರಾಥೋಡ್ 11, 12ನೇ ತರಗತಿಯಲ್ಲಿ ತಮ್ಮ ಸಹಪಾಠಿಗಳಿಂದಲೇ ಕಿರುಕುಳ, ಬೆದರಿಕೆಗೆ ಒಳಗಾಗಿದ್ದರು. ನನ್ನ ಬಾಲ್ಯ ಅತ್ಯಂತ ಕೆಟ್ಟದಾಗಿದ್ದು, ವೈದ್ಯನಾಗುವ ಬಗ್ಗೆ ಯೋಚಿಸುವುದಕ್ಕಿಂತ ಹೆಚ್ಚಾಗಿ ಜೀವನದಲ್ಲಿ ಹೇಗೆ ಬದುಕಬೇಕು, ಹೇಗೆ ಜಯಿಸಬೇಕು ಎಂಬುದೇ ದೊಡ್ಡ ಸಮಸ್ಯೆಯಾಗಿತ್ತು ಎಂದಿದ್ದಾರೆ. ಇದನ್ನೂ ಓದಿ: ವಿಧಾನಸಭೆ ಚುನಾವಣೆ: ಮೋದಿ ಜನಪ್ರಿಯತೆಗೆ ಕಾರಣ ಏನು? – ಜನಮನ ಗೆದ್ದ ಗುಜರಾತ್ ಮಾಡೆಲ್ ಯೋಜನೆಗಳೇನು?
ರಾಥೋಡ್ ಅವರು ಸ್ನಾತಕೋತ್ತರ ಪದವಿ ಪಡೆಯಲು ದೆಹಲಿಗೆ ಹೋಗಿದ್ದರು ಆದರೆ ಪ್ರತಿಕೂಲ ವಾತಾವರಣದಿಂದಾಗಿ ಹೈದರಾಬಾದ್ಗೆ ಅವರು ಹಿಂತಿರುಗಬೇಕಾಯಿತು. ಬಳಿಕ ಅವರು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಲೇ ಎಮರ್ಜೆನ್ಸಿ ಮೆಡಿಸಿನ್ನಲ್ಲಿ (ತುರ್ತು ಔಷಧ) ಡಿಪ್ಲೊಮಾ ಮಾಡಿದ್ದಾರೆ. ಆದರೆ ತೃತೀಯ ಲಿಂಗಿಯಾಗಿದ್ದರಿಂದ 3 ವರ್ಷಗಳ ಕಾಲ ಕೆಲಸ ಮಾಡಿಕೊಂಡು ಬಂದಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಂದ ಅವರನ್ನು ತೆಗೆದುಹಾಕಲಾಗಿತ್ತು. ನನ್ನಿಂದಾಗಿ ಆಸ್ಪತ್ರೆಯಲ್ಲಿ ರೋಗಿಗಳ ಓಡಾಟಕ್ಕೆ ಅಡ್ಡಿಯಾಗುತ್ತಿದೆ ಎಂದು ದೂಷಿಸಲಾಗಿತ್ತು ಎಂದು ಹಳೆಯ ಕಹಿ ಕ್ಷಣಗಳನ್ನು ನೆನಪಿಸಿದ್ದಾರೆ.
ಇದೆಲ್ಲದರ ಬಳಿಕ ಸರ್ಕಾರೇತರಸಂಸ್ಥೆ (NGO) ನನ್ನ ರಕ್ಷಣೆಗೆ ಬಂದಿತ್ತು. ಎನ್ಜಿಒ ನಡೆಸುತ್ತಿದ್ದ ಕ್ಲಿನಿಕ್ನಲ್ಲಿ ಮೊದಲಿಗೆ ಕೆಲಸ ಮಾಡಿ ಬಳಿಕ ಒಜಿಹೆಚ್ನಲ್ಲಿ ಇದೀಗ ಕೆಲಸ ಪಡೆದಿರುವುದಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸರ್ಕಾರದಿಂದ ಪ್ರತ್ಯೇಕ ಮುಸ್ಲಿಂ ಕಾಲೇಜು ಸ್ಥಾಪನೆ ಇಲ್ಲ: ಶಶಿಕಲಾ ಜೊಲ್ಲೆ
ತೃತೀಯಲಿಂಗಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರತಿಬಿಂಬಿಸಿದ ರಾಥೋಡ್ ಉದ್ಯೋಗ ಹಾಗೂ ಶಿಕ್ಷಣದಲ್ಲಿ ತಮಗೂ ಸೂಕ್ತ ಮೀಸಲಾತಿಗಳನ್ನು ಒದಗಿಸಲು ಕೇಳಿಕೊಂಡಿದ್ದಾರೆ. ನಮ್ಮನ್ನು ತೃತೀಯಲಿಂಗಿಗಳು ಎಂದು ಪ್ರತ್ಯೇಕಿಸಿರುವ ವ್ಯಕ್ತಿಯನ್ನು ನಾನು ಪ್ರಶ್ನಿಸಲು ಬಯಸುತ್ತೇನೆ. ನಾವು ತೃತೀಯಲಿಂಗಿಗಳಾದರೆ ಮೊದಲ ಹಾಗೂ ದ್ವಿತೀಯ ಲಿಂಗಿಗಳು ಯಾರು ಎಂಬುದನ್ನು ಕೇಳಲು ಬಯಸುತ್ತೇನೆ ಎಂದು ಸವಾಲು ಹಾಕಿದ್ದಾರೆ.