ಹಾಸನ: ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಮೂವರು ಆಯುರ್ವೇದ ವೈದ್ಯರು ಹೆರಿಗೆ ಮಾಡಿಸಿರುವ ಅಪರೂಪದ ಘಟನೆ ಹಾಸನದಲ್ಲಿ (Hassan) ನಡೆದಿದೆ.
ಹಾಸನದ ನಗರದ ತಣ್ಣೀರುಹಳ್ಳದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಮಾನಸರೋಗ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿನಿಯರಾದ ಡಾ. ರಶ್ಮಿ ಬಿಳಗಿ, ಡಾ. ಲತಾಶ್ರೀ.ಎನ್. ಹಾಗೂ ಡಾ. ಶಾಹಿನ್.ಎಂ.ರವರು ರಾಷ್ಟ್ರೀಯ ಸಮ್ಮೇಳನವೊಂದರಲ್ಲಿ ಭಾಗವಹಿಸಲು ಹಾಸನದಿಂದ ವಾರಣಾಸಿಗೆ (Varanasi) ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಇದೇ ರೈಲಿನಲ್ಲಿ ಗರ್ಭಿಣಿ ಮಹಿಳೆ ಪ್ರಯಾಣಿಸುತ್ತಿದ್ದು, ಹೆರಿಗೆ ನೋವು ಕಾಣಿಸಿಕೊಂಡಿದೆ. ಇದನ್ನೂ ಓದಿ: ಹಿಂದಿನಂತೆ ಕಸದ ಬುಟ್ಟಿಗೆ ಹಾಕ್ಬೇಡಿ, ಮಧುಸೂದನ್ ನಾಯಕ್ ಸಮೀಕ್ಷಾ ವರದಿ ಅಧಿವೇಶನದಲ್ಲಿ ಮಂಡಿಸಿ: ಸುನಿಲ್ ಕುಮಾರ್ ಆಗ್ರಹ
ಆಸ್ಪತ್ರೆಗೆ ಹೋಗಲು ಸಮಯಾವಕಾಶ ಕಡಿಮೆಯಿದ್ದು, ಮಹಿಳೆ ಹಾಗೂ ಮಗುವಿನ ಜೀವಕ್ಕೆ ತೊಂದರೆ ಆಗುವ ಆತಂಕ ಎದುರಾಗಿದೆ. ಕೂಡಲೇ ಗರ್ಭಿಣಿ ಮಹಿಳೆ ಬಳಿ ಬಂದು ಮೂವರು ಆಯುರ್ವೇದ ವೈದ್ಯರು ಆರೋಗ್ಯ ತಪಾಸಣೆ ನಡೆಸಿದ್ದು, ಮಗುವಿನ ಕುತ್ತಿಗೆಗೆ ಬಳ್ಳಿ ಸುತ್ತಿಕೊಂಡಿರುವುದು ಗೊತ್ತಾಗಿದೆ. ಕೂಡಲೇ ಬಳ್ಳಿಯನ್ನು ಬಿಡಿಸಿ ಮಗುವನ್ನು ಸುರಕ್ಷಿತವಾಗಿ ಹೊರತೆಗೆಯುವ ಮೂಲಕ ರೈಲಿನಲ್ಲೇ ಯಶಸ್ವಿಯಾಗಿ ಹೆರಿಗೆ ಮಾಡಿಸಿ ಮಾನವೀಯತೆ ಹಾಗೂ ಸಮಯಪ್ರಜ್ಞೆ ಮೆರೆದಿದ್ದಾರೆ.
ತಾಯಿ ಮತ್ತು ಮಗವಿನ ಆರೋಗ್ಯ ಉತ್ತಮವಾಗಿದ್ದು, ಮೂವರು ಮಹಿಳಾ ವೈದ್ಯರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.ಇದನ್ನೂ ಓದಿ: ವಯನಾಡ್ ದುರಂತ | 2ನೇ ದಿನವೂ ಭರಾಟೆಯ ರಕ್ಷಣಾ ಕಾರ್ಯಾಚರಣೆ
