ಬೆಂಗಳೂರು: ರಾಜ್ಯದಲ್ಲಿ ಟಿಪ್ಪು ವರ್ಸಸ್ ಸಾವರ್ಕರ್ ವಿಚಾರದ ಬೆನ್ನಲ್ಲೇ ಇನ್ನೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ರಾಜ್ಯ ರಾಜಧಾನಿಯ ಮಾಣಿಕ್ ಷಾ ಪರೇಡ್ ಮೈದಾನದ 2 ದ್ವಾರಗಳ ಮೇಲಿದ್ದ ಹೋರಾಟಗಾರರ ಹೆಸರನ್ನು ತೆಗೆದು ಹಾಕಿದೆ.
ನಿನ್ನೆಯಷ್ಟೇ ದೇಶದಲ್ಲಿ ಅದ್ಧೂರಿ ಸ್ವಾತಂತ್ರ್ಯ ದಿನಾಚರಣೆ ಮುಗಿದಿದೆ. ಇತ್ತ ರಾಜ್ಯದಲ್ಲಿ ಟಿಪ್ಪು ವರ್ಸಸ್ ಸಾವರ್ಕರ್ ಹೆಸರಿನಲ್ಲಿ ಜಟಾಪಟಿ ಹೆಚ್ಚಾಗುತ್ತಿದೆ. ಈ ನಡುವೆ ಸರ್ಕಾರ ಸ್ವಾತಂತ್ರ್ಯ ದಿನಾಚರಣೆ ನಡೆದ ಜಾಗದಲ್ಲೇ ಹೋರಾಟಗಾರರ ಹೆಸರನ್ನು ಕೈಬಿಟ್ಟಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗುತ್ತಿದೆ.
ಎಂಜಿ ರೋಡ್ ಮೆಟ್ರೋ ನಿಲ್ದಾಣದ ಹಿಂಭಾಗ ಇರುವ ಮಾಣಿಕ್ ಷಾ ಮೈದಾನ ಎರಡು ದ್ವಾರಗಳ ಪೈಕಿ ಒಂದಕ್ಕೆ ರಾಣಿ ಚೆನ್ನಮ್ಮ, ಮತ್ತೊಂದಕ್ಕೆ ಟಿಪ್ಪು ಸುಲ್ತಾನ್ ದ್ವಾರ ಎಂದು ಹೆಸರಿಡಲಾಗಿತ್ತು. ಆದರೆ ಈ ಬಾರಿಯ ಕಾರ್ಯಕ್ರಮದ ಸಿದ್ಧತೆ ವೇಳೆ ಮೈದಾನಕ್ಕೆ ಬಣ್ಣ ಬಳಿಯುವಾಗ ಈ ಎರಡು ಹೆಸರಿಗೂ ಬಣ್ಣ ಬಳಿಯಲಾಗಿದೆ. ಪ್ರತಿವರ್ಷ ಈ ದ್ವಾರಗಳಿಗೆ ಬಣ್ಣ ಬಳೆಯುವುದರ ಜೊತೆಗೆ ಹೆಸರುಗಳನ್ನು ಸಿಂಗರಿಸಲಾಗುತ್ತಿತ್ತು. ಆದರೆ ಈ ಬಾರಿ ಹೆಸರುಗಳನ್ನು ಸಂಪೂರ್ಣವಾಗಿ ಅಳಿಸಲಾಗಿದೆ. ಇದನ್ನೂ ಓದಿ: ಪ್ರತಿ ಲೀಟರ್ಗೆ 2 ರೂಪಾಯಿ ದರ ಹೆಚ್ಚಿಸಿದ ಅಮುಲ್
ಇನ್ನೂ ಈ ವಿಚಾರವಾಗಿ ಹಲವರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಇತಿಹಾಸವನ್ನು ಬದಲಾಯಿಸಲು ಹೊರಟಿದೆ. ಇಬ್ಬರು ಮಹಾನ್ ಹೋರಾಟಗಾರರಿಗೆ ಸರ್ಕಾರ ಮಾಡುತ್ತಿರುವ ಅವಮಾನವಾಗಿದೆ. ಹೆಸರನ್ನು ಮುಚ್ಚಿ ಹಾಕುವುದರಿಂದ ಇತಿಹಾಸ ಮುಚ್ಚಿಡಲು ಸಾಧ್ಯವಿಲ್ಲ. ತಕ್ಷಣ ಸರ್ಕಾರ ಇದನ್ನ ಸರಿಪಡಿಸಬೇಕೆಂದು ಇಲ್ಲಿನ ಸ್ಥಳೀಯರು ಒತ್ತಾಯಿಸಿದ್ದಾರೆ. ಒಟ್ಟಾರೆ ಬೂದಿ ಮುಚ್ಚಿದ ಕೆಂಡದಂತಿರೋ ರಾಜ್ಯದ ಸದ್ಯದ ಪರಿಸ್ಥಿತಿ ನಡುವೆ ಮತ್ತೊಂದು ವಿವಾದ ಸರ್ಕಾರದ ಹೆಗಲೇರಿದೆ. ಇದನ್ನೂ ಓದಿ: SDPI ನವರು ಪಾಕಿಸ್ತಾನಕ್ಕೆ ಹೋಗಲಿ – ಶಾಸಕ ಬೋಪಯ್ಯ ಕಿಡಿ