ಹಾಸನ: ಇಲ್ಲಿನ (Hassan) ವಿದ್ಯಾನಗರದಲ್ಲಿರುವ ನಟ ಯಶ್ (Actor Yash) ತಾಯಿ ಮಾಲೀಕತ್ವದ ಶೆಡ್, ಕಾಂಪೌಂಡ್ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹಾಸನ ಎಸ್ಪಿ ಶುಭನ್ವಿತಾ ಅವರನ್ನು ಭೇಟಿಯಾಗಲು ಕಚೇರಿಗೆ ರಾಕಿಂಗ್ಸ್ಟಾರ್ ಯಶ್ ತಾಯಿ ಪುಷ್ಪ (Pushpa Arunkumar) ಆಗಮಿಸಿದ್ದರು.
ಮೂರು ದಿನಗಳ ಹಿಂದೆ ಪೊಲೀಸ್ ಮಹಾ ನಿರ್ದೇಶಕರನ್ನ ಭೇಟಿಯಾಗಿದ್ದ ಪುಷ್ಪ, ಸುಮಾರು 24 ಲಕ್ಷ ರೂ. ಮೊತ್ತದ ವಸ್ತುಗಳು ಹಾನಿಯಾಗಿದೆ. ಘಟನೆ ಸಂಬಂಧ ದೇವರಾಜ್ ಹಾಗೂ ಧರ್ಮ ಸೇರಿ ಹಲವರ ವಿರುದ್ಧ ದೂರು ನೀಡಿದರೂ ಕೇಸ್ ದಾಖಲು ಮಾಡದೆ ಎನ್ಸಿಆರ್ ದಾಖಲು ಮಾಡಿದ್ದಾರೆ ಎಂದು ಹಾಸನ ಬಡಾವಣೆ ಠಾಣೆ ಪೊಲೀಸರ ವಿರುದ್ಧ ಆರೋಪಿಸಿದ್ದಾರೆ. ಇದನ್ನೂ ಓದಿ: ಯಶ್ ತಾಯಿ ಸೈಟ್ ಜಟಾಪಟಿ – ಒಂದೇ ಜಾಗಕ್ಕೆ ಎರಡೆರಡು ದಾಖಲೆ ನೀಡಿ ಅಧಿಕಾರಿಗಳ ಯಡವಟ್ಟು?

ಇದುವರೆಗೂ ಎಫ್ಐಆರ್ ದಾಖಲು ಮಾಡದ ಹಿನ್ನೆಲೆಯಲ್ಲಿ ಡಿಜಿಟಲ್ ಸಾಕ್ಷಿಗಳ ಜೊತೆ ಹಾಸನದ ಜೆಎಂಎಫ್ಸಿ ಕೋರ್ಟ್ಗೆ ಪುಷ್ಪಾ ಸಂಬಂಧಿ ದುರ್ಗಾಪ್ರಸಾದ್ ಖಾಸಗಿ ದೂರು ದಾಖಲಿಸಿದ್ದಾರೆ. ದೂರು ಆಧರಿಸಿ ಪ್ರಕರಣ ಸಂಬಂಧ ಎಸ್ಪಿ ಭೇಟಿಗೆ ಕೋರ್ಟ್ ನಿರ್ದೇಶನ ನೀಡಿದ್ದು ಕೋರ್ಟ್ ಸೂಚನೆಯಂತೆ ಇಂದು ಎಸ್ಪಿ ಭೇಟಿಗೆ ಅವರು ಆಗಮಿಸಿದ್ದರು.
ಸುಮಾರು ಒಂದು ಗಂಟೆಗೂ ಅಧಿಕ ಸಮಯ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಕಾಯ್ದರು. ಎಸ್ಪಿ ಸಕಲೇಶಪುರಕ್ಕೆ ತೆರಳಿರುವ ಹಿನ್ನೆಲೆಯಲ್ಲಿ ವಾಪಸ್ಸಾದರು. ಇದನ್ನೂ ಓದಿ: ಯಶ್ ತಾಯಿ ಸೈಟ್ ವಿವಾದ – ಏಕಪಕ್ಷೀಯ ತೀರ್ಪಿಗೆ ಕೋರ್ಟ್ ತಾತ್ಕಾಲಿಕ ತಡೆ
