ಆರೂರು ಜಗದೀಶ್ (Aroor jagadish) ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಕನ್ನಡದ ಹೆಸರಾಂತ ಧಾರಾವಾಹಿ (Serial) ‘ಜೊತೆ ಜೊತೆಯಲಿ’ (Jothe Jotheyali) ಈ ತಿಂಗಳು ಹೊತ್ತಿಗೆ ನಿಲ್ಲುತ್ತಾ? ಇಂಥದ್ದೊಂದು ಆಘಾತಕಾರಿ ಸುದ್ದಿ ಕಿರುತೆರೆ ವಲಯದಿಂದ ಬಂದಿದೆ. ಅನಿರುದ್ಧ ಕಾರಣಕ್ಕಾಗಿ ಸಾಕಷ್ಟು ಸುದ್ದಿಯಾಗಿದ್ದ ಈ ಧಾರಾವಾಹಿ ಮತ್ತೆ ಕಲಾವಿದರ ಕಾರಣದಿಂದಾಗಿಯೇ ಆಟ ನಿಲ್ಲಿಸುತ್ತಿದೆ (Ending) ಎನ್ನುವುದು ವಿಷಾದಕರ. ಧಾರಾವಾಹಿಯ ಪ್ರಮುಖ ಪಾತ್ರಧಾರಿ ಡೇಟ್ ಕೊಡದೇ ಇರುವ ಕಾರಣದಿಂದಾಗಿಯೇ ಸೀರಿಯಲ್ ನಿಲ್ಲಿಸುತ್ತಿರುವುದಾಗಿ ತಂಡದ ಸದಸ್ಯರು ಬಾಯ್ಬಿಟ್ಟಿದ್ದಾರೆ.
ಧಾರಾವಾಹಿಯ ಪ್ರಮುಖ ಮಹಿಳಾ ಪಾತ್ರಧಾರಿ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರಂತೆ. ಅವರು ಶೂಟಿಂಗ್ ಗೆ ಡೇಟ್ ಕೊಡಲು ಸಖತ್ ಕಿರಿಕ್ ಮಾಡುತ್ತಾರಂತೆ. ಈ ಧಾರಾವಾಹಿಯಿಂದಲೇ ಫೇಮಸ್ ಆಗಿರುವ ನಟಿ, ಅದೇ ಧಾರಾವಾಹಿಯನ್ನು ಮುಗಿಸುತ್ತಿರುವುದು ನಿಜಕ್ಕೂ ನೋವಿನ ಸಂಗತಿ ಎನ್ನುತ್ತಾರೆ ಜೊತೆ ಜೊತೆಯಲಿ ಧಾರಾವಾಹಿ ತಂಡದ ಸದಸ್ಯರು. ಇದನ್ನೂ ಓದಿ:ರಾಣಾ ದಗ್ಗುಭಾಟಿ ಪತ್ನಿ ಪ್ರೆಗ್ನೆಂಟ್? ಮಿಹಿಕಾ ಬಜಾಜ್ ಪ್ರತಿಕ್ರಿಯೆ
ಈ ಹಿಂದೆ ಅನಿರುದ್ಧ(Aniruddha) ಕೂಡ ಜೊತೆ ಜೊತೆಯಲಿ ಟೀಮ್ ಜೊತೆ ಅಸಹಕಾರ ತೋರಿದ್ದರು ಎನ್ನುವ ಕಾರಣಕ್ಕಾಗಿ ಟೆಲಿವಿಷನ್ ಅಸೋಸಿಯೇಷನ್ ನ ನಿರ್ಮಾಪಕರ ವಿಭಾಗ, ಅನಿರುದ್ಧ ವಿರುದ್ದ ಕಠಿಣ ಕ್ರಮ ತಗೆದುಕೊಂಡಿತ್ತು. ಆನಂತರ ಅದು ಸುಖಾಂತ್ಯವಾಗಿತ್ತು. ಇದೀಗ ಪ್ರಧಾನ ಪಾತ್ರಧಾರಿ ಕೂಡ ಅದೇ ಹಾದಿಯನ್ನೇ ಹಿಡಿದಿದ್ದಾರೆ ಎನ್ನುವುದು ಕಿರುತೆರೆ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.
ಪಬ್ಲಿಕ್ ಟಿವಿ ಡಿಜಟಲ್ ಜೊತೆ ಮಾತನಾಡಿದ ಜೊತೆ ಜೊತೆಯಲಿ ಟೀಮ್ ಮತ್ತೋರ್ವ ಸದಸ್ಯರೊಬ್ಬರು ಧಾರಾವಾಹಿ ನಿಲ್ಲಿಸುತ್ತಿರುವುದು ನಿಜ ಎಂದು ಒಪ್ಪಿಕೊಂಡರು. ಆದರೆ, ಉಳಿದ ವಿಚಾರದ ಬಗ್ಗೆ ಮಾತನಾಡಲು ಇಷ್ಟಪಡಲಿಲ್ಲ. ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದರು, ಹೆಚ್ಚು ಪ್ರೇಕ್ಷಕರನ್ನು ಹೊಂದಿದ್ದರೂ ಕಲಾವಿದರ ಅಸಹಕಾರ ಜೊತೆ ಜೊತೆಯಲಿ ಧಾರಾವಾಹಿಯನ್ನೇ ಬಲಿ ತಗೆದುಕೊಂಡಿತು ಎಂದು ಹೇಳುವುದನ್ನು ಅವರು ಮರೆಯಲಿಲ್ಲ.
ಅಂದಹಾಗೆ ಈ ಧಾರಾವಾಹಿಯ ಪ್ರಧಾನ ಪಾತ್ರಗಳಲ್ಲಿ ಹರೀಶ್ ರಾಜ್ (Harish Raj) ಹಾಗೂ ಮೇಘಾ ಶೆಟ್ಟಿ (Megha Shetty) ನಟಿಸುತ್ತಿದ್ದಾರೆ. ವಿಜಯಲಕ್ಷ್ಮಿ ಸಿಂಗ್ ಸೇರಿದಂತೆ ಹಲವರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.