ಮಂಗಳೂರು: ಹುಂಜವನ್ನು ನುಂಗಿ ಅರಗಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದ ಹೆಬ್ಬಾವನ್ನು ಉರಗಪ್ರೇಮಿಯೊಬ್ಬರು ರಕ್ಷಿಸಿದ ಘಟನೆ ಮಂಗಳೂರಿನ ಬಜಾಲ್ ನಲ್ಲಿ ನಡೆದಿದೆ.
ಬಜಾಲ್ ನ ಮನೆಯೊಂದರ ಕೋಳಿಗೂಡಿಗೆ ಹೆಬ್ಬಾವೊಂದು ನುಗ್ಗಿದೆ. ಕೋಳಿ ಗೂಡಿನಲ್ಲಿದ್ದ ದೈತ್ಯ ಹುಂಜವೊಂದನ್ನು ನುಂಗಿಬಿಟ್ಟಿದೆ. ಆದರೆ ಅದನ್ನು ಅರಗಿಸಿಕೊಳ್ಳಲಾಗದೆ ಗೂಡಿನ ಒಳಗೆಯೇ ಹೆಬ್ಬಾವು ಒದ್ದಾಡುತ್ತಿರೋದು ಮನೆಯವರ ಗಮನಕ್ಕೆ ಬಂದಿದೆ.
ಹುಂಜವನ್ನು ಹಗ್ಗದ ಸಮೇತವಾಗಿ ನುಂಗಿದ್ದ ಹೆಬ್ಬಾವು ಒದ್ದಾಡುತ್ತಿರೋದನ್ನು ಕಂಡು ಮನೆಯವರು ಗಾಬರಿಗೊಂಡಿದ್ದು, ತಕ್ಷಣ ಸ್ಥಳೀಯ ಉರಗಪ್ರೇಮಿ ಸ್ನೇಕ್ ಪಾಪು ಎಂಬುವವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ನಂತರ ಸ್ಥಳಕ್ಕೆ ಬಂದು ಸ್ನೇಕ್ ಪಾಪು ಹೆಬ್ಬಾವಿನ ಹೊಟ್ಟೆಯಲ್ಲಿದ್ದ ಹುಂಜವನ್ನು ಹೊರಗೆ ತೆಗೆದು ಹಾವನ್ನು ರಕ್ಷಣೆ ಮಾಡಿದ್ದಾರೆ.
ಹೆಬ್ಬಾವಿಗೆ ಬೇಟೆಯಾದ ಹುಂಜ ಸಾವನ್ನಪ್ಪಿದೆ. ಆದರೆ ಹೆಬ್ಬಾವಿಗೆ ಮಾತ್ರ ಬೇಟೆಯಾಡಿದ ಹುಂಜವೇ ಮೃತ್ಯುವಾಗಿ ಕಾಡಿದೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಹೆಬ್ಬಾವನ್ನು ರಕ್ಷಣೆ ಮಾಡಲಾಗಿದೆ.