ಗದಗ: ಗದಗ (Gadag) ಕ್ಷೇತ್ರದ ಶಾಸಕ ಹೆಚ್.ಕೆ. ಪಾಟೀಲರಿಗೆ (HK Patil) ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಗದಗ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಹೆಚ್.ಕೆ. ಪಾಟೀಲರನ್ನು ಉಪ ಮುಖ್ಯಮಂತ್ರಿ (DCM) ಮಾಡಬೇಕು. ಇಲ್ಲವೇ ಪ್ರಮುಖ ಸಚಿವ ಸ್ಥಾನ ನೀಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು.
ಗದಗ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಿಂದ ಮುಳಗುಂದ ನಾಕಾ ವರೆಗೆ ಭಾರೀ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಜಾನಪದ ಕಲಾತಂಡಗಳು, ಎತ್ತಿನ ಚಕ್ಕಡಿ, ಆಟೋ ಮತ್ತು ಬೈಕ್ ರ್ಯಾಲಿ ಮೂಲಕ ಪ್ರತಿಭಟನೆಗೆ ವಿಭಿನ್ನ ಮೆರುಗು ನೀಡಲಾಯಿತು. ವಿವಿಧ ಸಮುದಾಯಗಳ ಸಾಂಪ್ರದಾಯಿಕ ವೇಷಭೂಷಣಗಳು ಕೂಡ ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿದ್ದವು.
ಮೆರವಣಿಗೆ ಮುಳಗುಂದ ನಾಕಾ ತಲುಪಿದ ಬಳಿಕ ಕಾರ್ಯಕರ್ತರು ಟಯರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಟಯರ್ ಕಸಿದುಕೊಳ್ಳಲು ಪೊಲೀಸರು ಮುಂದಾದರು. ಇದರಿಂದ ಕೆಲಕಾಲ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ನೂಕಾಟ ನಡೆಯಿತು. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.ಇದನ್ನೂ ಓದಿ: ಡ್ರಗ್ಸ್ ನೀಡಿ ಮಹಿಳೆ ಮೇಲೆ ಅತ್ಯಾಚಾರ, ಬಲವಂತದ ಮತಾಂತರ; ಇಬ್ಬರು ಅರೆಸ್ಟ್
ಪ್ರತಿಭಟನಾಕಾರರು ಹೆಚ್.ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಕಾಂಗ್ರೆಸ್ ಹೈಕಮಾಂಡ್ಗೆ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದರು. ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಹೆಚ್.ಕೆ. ಪಾಟೀಲರಿಗೆ ಸ್ಥಾನ ನೀಡದಿದ್ದರೆ, ಗದಗ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.ಇದನ್ನೂ ಓದಿ: ಟೈರ್ ಬ್ಲಾಸ್ಟ್ ಆಗಿ ಬಸ್ಸಿಗೆ ಟಿಪ್ಪರ್ ಡಿಕ್ಕಿ – ಮೂವರು ದುರ್ಮರಣ, 10 ಮಂದಿಗೆ ಗಾಯ
