– ಸಾವಿನ ಬಗ್ಗೆ ಕುಟುಂಬದಿಂದ ಅನುಮಾನ
ನವದೆಹಲಿ: ಫಿನ್ಲ್ಯಾಂಡ್ನಲ್ಲಿ (Finland) ಮೇ ತಿಂಗಳಿನಿಂದ ನಾಪತ್ತೆಯಾಗಿದ್ದ ತೆಲಂಗಾಣದ (Telangana) ಹೈದರಾಬಾದ್ (Hyderabad) ಮೂಲದ 18 ವರ್ಷದ ವಿದ್ಯಾರ್ಥಿ ಮನಿದೀಪ್ ರೆಡ್ಡಿ 2 ತಿಂಗಳ ಬಳಿಕ ಸಮುದ್ರದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹೆಲ್ಸಿಂಕಿ ನಗರದ ಸಮುದ್ರ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯ ವೇಳೆ ಮೃತದೇಹ ಪತ್ತೆಯಾಗಿದ್ದು, ಫಿನ್ಲ್ಯಾಂಡ್ ಪೊಲೀಸರು ಅವರ ಗುರುತನ್ನು ದೃಢಪಡಿಸಿದ್ದಾರೆ.
ಮನಿದೀಪ್ ರೆಡ್ಡಿ ಅವರು ಫಿನ್ಲ್ಯಾಂಡ್ನ ಯೂನಿವರ್ಸಿಟಿವೊಂದರಲ್ಲಿ ಸಾಫ್ಟ್ವೇರ್ ಮತ್ತು ಸಿಸ್ಟಮ್ಸ್ ಎಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದರು. ಮೇ 5ರಂದು ಲಾಹ್ತಿಯಿಂದ ಹೆಲ್ಸಿಂಕಿಗೆ ರೈಲಿನಲ್ಲಿ ತೆರಳಿದ್ದ ಅವರು ಸಂಜೆ 5 ಗಂಟೆ ಸುಮಾರಿಗೆ ಹೆಲ್ಸಿಂಕಿ ತಲುಪಿದ್ದರು. ಬಳಿಕ ರಾತ್ರಿ 8 ಗಂಟೆ ವೇಳೆಗೆ ಕ್ರೂನುವುಒರೆನ್ರಾಂಟಾ ಪ್ರದೇಶದ ಕೆ-ಮಾರ್ಕೆಟ್ ಸೂಪರ್ಮಾರ್ಕೆಟ್ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.
ಜುಲೈ 9ರಂದು ಕ್ರೂನುವುಒರೆನ್ರಾಂಟಾ ಸಮುದ್ರ ಪ್ರದೇಶದಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಪತ್ತೆಯಾದ ಮೃತದೇಹವೇ ಮನಿದೀಪ್ ರೆಡ್ಡಿಯದ್ದು ಎಂದು ಫಿನ್ಲ್ಯಾಂಡ್ ಪೊಲೀಸರು ಅಧಿಕೃತವಾಗಿ ತಿಳಿಸಿದ್ದಾರೆ. ಮೃತದೇಹದ ಬಳಿ ದೊರೆತಿದ್ದ ಫಿನ್ಲ್ಯಾಂಡ್ ಗುರುತಿನ ಚೀಟಿ, ತಾಯಿಯ ಬ್ಯಾಂಕ್ ಕಾರ್ಡ್, ಭಾರತೀಯ ಕರೆನ್ಸಿ ಹಾಗೂ ಪರ್ಸ್ನಲ್ಲಿದ್ದ ಇತರೆ ದಾಖಲೆಗಳ ಆಧಾರದ ಮೇಲೆ ಗುರುತು ದೃಢಪಡಿಸಲಾಗಿದೆ. ಸದ್ಯ ಸಾವಿನ ನಿಖರ ಕಾರಣವನ್ನು ಫಿನ್ಲ್ಯಾಂಡ್ನ ರಾಷ್ಟ್ರೀಯ ತನಿಖಾ ದಳ ತನಿಖೆ ನಡೆಸುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಅಪರಾಧದ ಸುಳಿವು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದು ಸಹಜ ಸಾವು ಅಲ್ಲ, ಅನುಮಾನಾಸ್ಪದ ಪ್ರಕರಣ ಎಂದ ಕುಟುಂಬ:
ಇನ್ನೊಂದೆಡೆ, ಮನಿದೀಪ್ ರೆಡ್ಡಿ ಕುಟುಂಬವು ಈ ಸಾವಿನ ಬಗ್ಗೆ ಗಂಭೀರ ಅನುಮಾನ ವ್ಯಕ್ತಪಡಿಸಿದೆ. ಕುಟುಂಬದ ಪರ ವಕೀಲ ಕೆಎಲ್ಬಿ ಕುಮಾರ್ ಮಾತನಾಡಿ, ಇದು ಸಹಜ ಸಾವು ಅಲ್ಲ ಎಂದು ನಮಗೆ ಬಲವಾದ ಅನುಮಾನವಿದೆ ಎಂದು ಹೇಳಿದ್ದಾರೆ.
ಎರಡು ತಿಂಗಳ ಬಳಿಕ ಮೃತದೇಹ ಪತ್ತೆಯಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರಕರಣದ ಕುರಿತು ಫಿನ್ಲ್ಯಾಂಡ್ ಸರ್ಕಾರ ಹಲವು ಪ್ರಮುಖ ಮಾಹಿತಿಗಳನ್ನು ಮುಚ್ಚಿಡಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಪ್ರಕರಣದ ಸಮಗ್ರ ತನಿಖೆ ನಡೆಸಬೇಕು. ವಿದ್ಯಾರ್ಥಿ ಹೇಗೆ ನಾಪತ್ತೆಯಾದ, ಯಾವ ಸಂದರ್ಭಗಳಲ್ಲಿ ಮೃತಪಟ್ಟ ಎಂಬುದನ್ನು ಸಂಪೂರ್ಣವಾಗಿ ಬಹಿರಂಗಪಡಿಸಬೇಕು ಎಂದು ಕುಟುಂಬ ಆಗ್ರಹಿಸಿದೆ.
ಮೇ 29ರ ಬಳಿಕ ಸಂಪರ್ಕವೇ ಇಲ್ಲ:
ವಕೀಲರ ಪ್ರಕಾರ, ಪ್ರಕರಣ ದಾಖಲಾದ ಬಳಿಕ ಆರಂಭದಲ್ಲಿ ಫಿನ್ಲ್ಯಾಂಡ್ ಪೊಲೀಸರು ಕುಟುಂಬಕ್ಕೆ ತನಿಖೆಯ ಮಾಹಿತಿಯನ್ನು ನೀಡುತ್ತಿದ್ದರು. ಆದರೆ ಮೇ 29ರ ನಂತರ ಯಾವುದೇ ಮಾಹಿತಿ ನೀಡದೇ ಸಂಪರ್ಕವನ್ನು ಸ್ಥಗಿತಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಕುಟುಂಬ ಸಲ್ಲಿಸಿದ್ದ ಅರ್ಜಿಯ ಪ್ರಕಾರ, ಸಿಸಿಟಿವಿ ದೃಶ್ಯಗಳಲ್ಲಿ ಮನಿದೀಪ್ ರೆಡ್ಡಿ ಹೆಲ್ಸಿಂಕಿ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಸಂಜೆ 5:14ರ ಸುಮಾರಿಗೆ ಆಗಮಿಸಿರುವುದು ದಾಖಲಾಗಿತ್ತು. ಬಳಿಕ ನಗರದ ಬರ್ಗರ್ ಅಂಗಡಿಯಲ್ಲಿ ಆಹಾರ ಖರೀದಿಸಿ ಕೆಲ ಸಮಯ ಕಳೆದ ನಂತರ ಅಲ್ಲಿಂದ ತೆರಳಿರುವ ದೃಶ್ಯಗಳೂ ಲಭ್ಯವಾಗಿವೆ.
ನಾಪತ್ತೆಯಾದ ಬಳಿಕವೂ ಯೂನಿವರ್ಸಿಟಿ ಖಾತೆಗೆ ಲಾಗಿನ್:
ಕುಟುಂಬದ ಅನುಮಾನಕ್ಕೆ ಮತ್ತೊಂದು ಕಾರಣವೆಂದರೆ, ವಿದ್ಯಾರ್ಥಿ ನಾಪತ್ತೆಯಾದ ನಂತರವೂ ಅವರ ವಿಶ್ವವಿದ್ಯಾಲಯದ ಖಾತೆಗೆ ಲಾಗಿನ್ ಆಗಿರುವುದು. ಮೇ 9 ಹಾಗೂ ಮೇ 10ರಂದು ಅವರ ಯೂನಿವರ್ಸಿಟಿ ಖಾತೆಗೆ ಯಶಸ್ವಿಯಾಗಿ ಪ್ರವೇಶ ಮಾಡಲಾಗಿದೆ ಎಂದು ಫಿನ್ಲ್ಯಾಂಡ್ ಅಧಿಕಾರಿಗಳು ಕುಟುಂಬಕ್ಕೆ ಮಾಹಿತಿ ನೀಡಿದ್ದರು. ಯಾವ ಸಾಧನ ಹಾಗೂ ಯಾವ ಐಪಿ ವಿಳಾಸದಿಂದ ಈ ಲಾಗಿನ್ ನಡೆದಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ತಾಯಿಗೆ ಕರೆ ಮಾಡಿ 6 ಸಾವಿರ ರೂ. ಕೇಳಿದ್ದ ವಿದ್ಯಾರ್ಥಿ:
ನಾಪತ್ತೆಯಾಗುವ ಮುನ್ನ ಮನಿದೀಪ್ ರೆಡ್ಡಿ ತಮ್ಮ ತಾಯಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದರು. ಆ ವೇಳೆ ತಾವು ಹೊರಗಿರುವುದಾಗಿ ಹೇಳಿ ತಮ್ಮ ಖಾತೆಗೆ 6,000 ರೂ. ವರ್ಗಾಯಿಸುವಂತೆ ಕೇಳಿದ್ದರು. ಕುಟುಂಬವು ಹಣವನ್ನು ವರ್ಗಾಯಿಸಿತ್ತು. ಆದರೆ ಬ್ಯಾಂಕ್ ದಾಖಲೆಗಳ ಪ್ರಕಾರ, ಆ ಹಣವನ್ನು ನಂತರ ಯಾವುದೇ ರೀತಿಯಲ್ಲಿ ಬಳಸಲಾಗಿಲ್ಲ ಎನ್ನಲಾಗಿದೆ.
ಫಿನ್ಲ್ಯಾಂಡ್ಗೆ ಹೋಗಲು ಪೋಷಕರಿಗೆ ವೀಸಾ ನಿರಾಕರಣೆ:
ಮಗನಿಗಾಗಿ ಫಿನ್ಲ್ಯಾಂಡ್ಗೆ ತೆರಳಿ ಹುಡುಕಾಟದಲ್ಲಿ ಭಾಗವಹಿಸಲು ಮನಿದೀಪ್ ರೆಡ್ಡಿ ಅವರ ಪೋಷಕರು ವೀಸಾಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅಗತ್ಯ ಆರ್ಥಿಕ ದಾಖಲೆಗಳನ್ನು ಸಲ್ಲಿಸಿಲ್ಲ ಎಂಬ ಕಾರಣ ಸೇರಿದಂತೆ ಹಲವು ಕಾರಣಗಳನ್ನು ನೀಡಿ ಫಿನ್ಲ್ಯಾಂಡ್ ಅಧಿಕಾರಿಗಳು ವೀಸಾ ಅರ್ಜಿಯನ್ನು ತಿರಸ್ಕರಿಸಿದ್ದಾಗಿ ಕುಟುಂಬದ ಪರ ವಕೀಲರು ತಿಳಿಸಿದ್ದಾರೆ.
ಇದೀಗ ಮನಿದೀಪ್ ರೆಡ್ಡಿ ಸಾವಿನ ನಿಖರ ಕಾರಣ ಏನು? ನಾಪತ್ತೆಯಾದ ಬಳಿಕ ಅವರ ಯೂನಿವರ್ಸಿಟಿ ಖಾತೆಗೆ ಲಾಗಿನ್ ಮಾಡಿದವರು ಯಾರು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರೆಯಬೇಕಿದ್ದು, ಪ್ರಕರಣದ ಸಮಗ್ರ ತನಿಖೆಗೆ ಕುಟುಂಬ ಒತ್ತಾಯಿಸಿದೆ.
