– ಮಗಳ ತಲೆ ಭಾಗ, ಕಣ್ಣಿಗೆ ಹೊಡೆದ ಆರೋಪಿ
ಮಂಗಳೂರು: ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ತನ್ನ ಪತ್ನಿ ಹಾಗೂ ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿ (Belthangady) ತಾಲೂಕಿನ ಶಿಶಿಲ ಗ್ರಾಮದಲ್ಲಿ ನಡೆದಿದೆ.
ಈ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಆರೋಪಿಯನ್ನು ಶಿಶಿಲ ಕೋಟೆಬಾಗಿಲು ನಿವಾಸಿ ಸುರೇಶ್ ಗೌಡ ಎಂದು ಗುರುತಿಸಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಗೂ ಕಾಲಿಟ್ಟ ಕೊರೊನಾ ವೈರಸ್- ಗೋವಾದಿಂದ ಬಂದಿದ್ದ ಯುವಕನಲ್ಲಿ ಸೋಂಕು ಪತ್ತೆ
ಕಂಠಪೂರ್ತಿ ಕುಡಿದು ಬಂದಿರುವ ಸುರೇಶ್ ಗೌಡ, ಪತ್ನಿ ಜೊತೆ ಜಗಳ ತೆಗೆದಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಗಲಾಟೆ ತಾರಕಕ್ಕೇರಿ ಸುರೇಶ್ ಗೌಡನು ತನ್ನ ಪತ್ನಿಯ ಕಣ್ಣು ಹಾಗೂ ಕೆನ್ನೆಯನ್ನ ಕಚ್ಚಿ ಮಾಂಸ ಹೊರ ತೆಗೆದಿದ್ದಾನೆ. ಬಳಿಕ ಕೋಲಿನಿಂದ ಹೊಡೆದು ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಎಸಗಿದ್ದಾನೆ. ಪತಿಯ ಹಲ್ಲೆಯಿಂದಾಗಿ ಪತ್ನಿಯ ಎಡ ಕಣ್ಣಿಗೆ ಸಂಪೂರ್ಣ ಹಾನಿಯಾಗಿದೆ.
ಇತ್ತ ತಾಯಿಯ ಮೇಲಿನ ಹಲ್ಲೆ ಬಿಡಿಸಲು ಬಂದ ಮಗಳ ತಲೆ ಭಾಗ ಹಾಗೂ ಕಣ್ಣಿಗೂ ಆರೋಪಿ ಹೊಡೆದಿದ್ದಾನೆ. ಈ ವೇಳೆ ಆಕೆ ಪ್ರಾಣ ಉಳಿಸಿಕೊಳ್ಳಲು ತಂದೆಯಿಂದ ತಪ್ಪಿಸಿ ನೆರೆ ಹೊರೆಯವರಿಗೆ ವಿಚಾರ ತಿಳಿಸಿದಳು. ಈ ಹೊತ್ತಲ್ಲೇ ಜೀವ ಉಳಿಸಿಕೊಳ್ಳಲು ಓಡಿ ಹೋಗಿ ಇಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಹಿಳೆ ಪತ್ತೆಯಾಗಿದ್ದಾರೆ.
ನೆರೆ ಹೊರೆಯವರು ಧಾಮಿಸುತ್ತಿದಂತೆ ಆರೋಪಿ ತೋಟದೊಳಗೆ ಓಡಿ ತಪ್ಪಿಸಿಕೊಂಡಿದ್ದಾನೆ. ವಿಪರೀತ ಗಾಯಗೊಂಡ ತಾಯಿ-ಮಗಳಿಗೆ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಬೆಳ್ತಂಗಡಿಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ (Dharmasthala Police Station) ಪ್ರಕರಣ ದಾಖಲಾಗಿದೆ.