ಮಡಿಕೇರಿ: ನಾಲ್ವರು ಮುಸ್ಲಿಂ ಯುವಕರು ಇಬ್ಬರು ಅಪ್ರಾಪ್ತ ಹಿಂದೂ ಹುಡುಗಿಯರನ್ನು ಕಾರಿನಲ್ಲಿ ಅಪಹರಿಸಿದ (Kidnap) ಘಟನೆಯೊಂದು ಕೊಡಗಿನಲ್ಲಿ (Kodagu) ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಹುಡುಗಿಯರನ್ನು ರಕ್ಷಿಸಲಾಗಿದ್ದು, ನಾಲ್ವರು ಯುವಕರನ್ನು ಬಂಧಿಸಲಾಗಿದೆ. ಈ ನಡುವೆ ರಕ್ಷಿಸಲ್ಪಟ್ಟವರಲ್ಲಿ ಒಬ್ಬ ಹುಡುಗಿ ಆತ್ಮಹತ್ಯೆಗೆ (Suicide) ಪ್ರಯತ್ನಿಸಿದ್ದು, ಆಕೆಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಹರಣಕ್ಕೆ ಒಳಗಾದ ಹುಡುಗಿಯರು ಮಡಿಕೇರಿಯ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾರೆ. ಅಪಹರಣ ಮಾಡಿದ ಯುವಕರನ್ನು ನಿಜಾಮಿಲ್, ಸಮದ್, ತಪ್ಸಿರ್ ಹಾಗೂ ಇರ್ಫಾನ್ ಎಂದು ಗುರುತಿಸಲಾಗಿದೆ. ಇವರು ಮಡಿಕೇರಿಯಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದು, ಆರೋಪಿಗಳನ್ನು ಪೊಲೀಸರು ಮೈಸೂರಿನ ಮಂಡಿ ಮೊಹಲ್ಲಾದಲ್ಲಿ ಬಂಧಿಸಿದ್ದಾರೆ.
ಅಪಹರಣ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್: ಈ ಅಪಹರಣ ಶುಕ್ರವಾರ ಬೆಳಗ್ಗೆ ನಡೆದು ಮಧ್ಯಾಹ್ನದ ಹೊತ್ತಿಗೆ ಹುಡುಗಿಯರು ಮನೆ ಸೇರಿಯೂ ಆಗಿದೆ. ಆರೋಪಿಗಳನ್ನು ಬಂಧಿಸಿಯೂ ಆಗಿದೆ. ಅಂದರೆ ಈ ಪ್ರಕರಣದಲ್ಲಿ ಕ್ಷಣಕ್ಷಣವೂ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಂಭವಿಸಿದೆ. ಮಡಿಕೇರಿ ಹೊರವಲಯದ ಇಬ್ಬರು ಪಿಯು ವಿದ್ಯಾರ್ಥಿನಿಯರು ಎಂದಿನಂತೆ ಮಡಿಕೇರಿಯ ಸರ್ಕಾರಿ ಕಾಲೇಜಿಗೆ ಬರುತ್ತಿದ್ದರು. ಆಗ ಕಾರಿನಲ್ಲಿ ಬಂದ ನಾಲ್ವರು ಯುವಕರು ಅವರನ್ನು ಬಲವಂತವಾಗಿ ಕಾರಿಗೆ ಹಾಕಿಕೊಂಡು ಹೋಗಿದ್ದಾರೆ ಎಂಬ ಸುದ್ದಿ ಒಮ್ಮಿಂದೊಮ್ಮೆಗೆ ಹರಡಿತ್ತು. ಇದನ್ನೂ ಓದಿ: ತಿರುಪತಿ ದರ್ಶನ ಮುಗಿಸಿ ವಾಪಸಾಗುತ್ತಿದ್ದಾಗ ಭೀಕರ ಅಪಘಾತ – ಒಂದೇ ಕುಟುಂಬದ ಐವರು ಕನ್ನಡಿಗರು ಸಾವು
ಕಾಲೇಜಿಗೆ ಹೋಗುವ ದಾರಿಯಲ್ಲೇ ಘಟನೆ ನಡೆದಿದ್ದರಿಂದ ಹಲವು ಜನರು ಹುಡುಗಿಯರು ಕಾರಿನೊಳಗೆ ಹೋಗುವುದನ್ನು ನೋಡಿದ್ದಾರೆ. ಮತ್ತು ಹುಡುಗಿಯರೂ ಪರಿಚಯದವರೇ ಆಗಿದ್ದರಿಂದ ತಕ್ಷಣವೇ ಅದರ ವಿಚಾರ ಗ್ರಾಮದೆಲ್ಲೆಡೆ ಹಬ್ಬಿತು. ಇತರ ವಿದ್ಯಾರ್ಥಿಗಳು ಕೂಡಲೆ ಕಾಲೇಜಿನ ಶಿಕ್ಷಕರಿಗೆ ತಿಳಿಸಿದ್ದಾರೆ.
ತಕ್ಷಣ ಕಾಲೇಜಿನ ಶಿಕ್ಷಕರು ಪೋಲಿಸರಿಗೆ ಹಾಗೂ ಪೋಷಕರಿಗೆ ಮಾಹಿತಿ ನೀಡಿದ್ದು ಕಾಣೆಯಾದ ಹುಡುಗಿಯರ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಎಲ್ಲಾ ಕಡೆ ಹುಡುಕಾಟಕ್ಕೆ ಸೂತ್ರ ಹೆಣೆದರು. ಎಲ್ಲಾ ಕಡೆ ತಪಾಸಣೆಗೆ ಸೂಚಿಸಿದರು. ಮಡಿಕೇರಿಯಲ್ಲಿ ಈ ರೀತಿ ಅಲ್ಲೋಲಕಲ್ಲೋಲ ಸಂಭವಿಸುತ್ತಿರುವ ಸಂಗತಿ ಕಾರಿನಲ್ಲಿ ಹೋಗುತ್ತಿದ್ದ ಯುವಕರಿಗೆ ವಾಟ್ಸಪ್ ಮೂಲಕ ತಿಳಿದಿದೆ. ಅಷ್ಟು ಹೊತ್ತಿಗೆ ಅವರ ಕಾರು ಕುಶಾಲನಗರ ದಾಟಿ ಮೈಸೂರು ಕಡೆಗೆ ವೇಗವಾಗಿ ಸಾಗುತ್ತಿತ್ತು. ಈ ಅಲ್ಲೋಕಕಲ್ಲೋಲಕ್ಕೆ ಬೆದರಿದ ಯುವಕರು ಇಬ್ಬರೂ ಹುಡುಗಿಯರನ್ನು ಕಾರಿನಿಂದ ಇಳಿಸಿದ್ದಾರೆ. ಯುವತಿಯರು ಕುಶಾಲನಗರದಿಂದ ಬಸ್ ಹತ್ತಿ ಮಡಿಕೇರಿಗೆ ಬಂದು ತಮ್ಮ ತಮ್ಮ ಮನೆಗಳಿಗೆ ಹೋಗಿದ್ದಾರೆ.
ಈ ನಡುವೆ ಪೊಲೀಸರು ತಮ್ಮ ಹುಡುಕಾಟದ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಮೈಸೂರು ಪೊಲೀಸರು ಮಂಡಿ ಮೊಹಲ್ಲಾಕ್ಕೆ ದಾಳಿ ಮಾಡಿ 4 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಯುವಕರ ಮೊಬೈಲ್ ಟ್ರ್ಯಾಕ್ ಮಾಡಿ ಅವರನ್ನು ಅಲ್ಲೇ ಹಿಡಿದಿದ್ದಾರೆ. ಇದೀಗ ನಾಲ್ವರು ಆರೋಪಿಗಳನ್ನು ಮಡಿಕೇರಿಗೆ ಕರೆತಂದು ಆಸ್ಪತ್ರೆಗೆ ಸೇರಿಸಲಾಗಿದೆ. ಅಲ್ಲಿ ಅವರ ಆರೋಗ್ಯ ತಪಾಸಣೆ ನಡೆಯುತ್ತಿದೆ. ಈ ನಡುವೆ ಯುವತಿಯರಿಗೂ ಯುವಕರಿಗೂ ಮೊದಲೇ ಪರಿಚಯ ಇತ್ತು ಎಂಬ ವಿಚಾರವೂ ಕೇಳಿಬರುತ್ತಿದೆ. ಇದನ್ನೂ ಓದಿ: ಸದ್ಯಕ್ಕೆ ಆಸ್ಪತ್ರೆಯಿಂದ ಚೈತ್ರಾ ಕುಂದಾಪುರ ಡಿಸ್ಚಾರ್ಜ್ ಇಲ್ಲ: ಬಾಲಾಜಿ ಪೈ
ಆತ್ಮಹತ್ಯೆಗೆ ಯತ್ನಿಸಿದ ಹುಡುಗಿ: ಈ ನಡುವೆ ಕುಶಾಲನಗರದಲ್ಲಿ ಕಾರಿನಿಂದ ಇಳಿದು ಬಸ್ ಮೂಲಕ ಮಡಿಕೇರಿಗೆ ಬಂದು ಅಲ್ಲಿಂದ ತಮ್ಮ ಮನೆಗೆ ಹೋಗಿದ್ದ ಇಬ್ಬರು ಹುಡುಗಿಯರ ಪೈಕಿ ಒಬ್ಬಾಕೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ. ಈ ಘಟನೆಯಿಂದ ತನಗೆ ಅಪಮಾನವಾಗಿದೆ ಎಂದು ಬೇಸರ ಮಾಡಿಕೊಂಡ ಆಕೆ ಪ್ರಾಣ ಕಳೆದುಕೊಳ್ಳಲು ಮುಂದಾಗಿದ್ದಾಳೆ. ಕೂಡಲೆ ವಿಷಯ ತಿಳಿದ ಮನೆಯವರು ಆಕೆಯನ್ನು ಮಂಗಳೂರು ಆಸ್ಪತ್ರೆ ಸೇರಿಸಿದ್ದಾರೆ. ಆಕೆಯ ಸ್ಥಿತಿ ಗಂಭೀರವಾಗಿದೆ. ಘಟನೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
Web Stories