ಹುಬ್ಬಳ್ಳಿ: ಗರೀಬಿ ಹಠಾವೋ ಎಂದು ಸ್ವಲ್ಪ ವರ್ಷ, ನಾವು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ ಎಂದು ಸ್ವಲ್ಪ ವರ್ಷ ಕಾಂಗ್ರೆಸ್ ಆಡಳಿತ ನಡೆಸಿದೆ. ಗರೀಬಿ ಹಠಾವೋದಿಂದ ಭಾರತದಲ್ಲಿ ಎಷ್ಟು ಜನ ಬಡತನದಿಂದ ಹೊರ ಬಂದಿದ್ದಾರೆ? ಕಾಂಗ್ರೆಸ್ನ ದುರಾಡಳಿತದಿಂದ ಭಾರತ ಪ್ರಗತಿ ಕಂಡಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಕಾಂಗ್ರೆಸ್ (Congress) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 70 ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್ ಯಾರಿಗೆಲ್ಲ ಹುಚ್ಚು ಮಾಡಿದೆ ಎಂದು ಜನರಿಗೆ ಗೊತ್ತಿದೆ. ಕಾಂಗ್ರೆಸ್ ಈಗ ಇರುವ ಸೀಟ್ಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಿ. ಇಂಡಿಯಾ ಒಕ್ಕೂಟದ ನಾಯಕತ್ವವನ್ನು ಕಾಂಗ್ರೆಸ್ ತೆಗೆದುಕೊಂಡಿದೆ. ಉಳಿದ ಪಕ್ಷಗಳು ಅದನ್ನು ಕಂಟ್ರೋಲ್ ಮಾಡುತ್ತಿವೆ. ಅಲ್ಲಿ ಮಲ್ಲಿಕಾರ್ಜುನ್ ಖರ್ಗೆಯವರ ಮಾತಿಗೆ ಕಿಮ್ಮತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಇಡಿ, ಐಟಿಯನ್ನು ಮೋದಿ, ಅಮಿತ್ ಶಾ ಕಂಟ್ರೋಲ್ ಮಾಡುತ್ತಿದ್ದಾರೆ: ಮಲ್ಲಿಕಾರ್ಜುನ್ ಖರ್ಗೆ
ಕಾಂಗ್ರೆಸ್ ಅಧಿಕಾರ ಬಿಟ್ಟು ಕೊಟ್ಟಾಗ ದೇಶದ ಆರ್ಥಿಕ ಸ್ಥಿತಿ 10ನೇ ಸ್ಥಾನದಲ್ಲಿತ್ತು. ಈಗ 4ನೇ ಸ್ಥಾನದಲ್ಲಿದೆ. ಇನ್ನೂ ಎರಡು ವರ್ಷಗಳಲ್ಲಿ ಮೂರನೇ ಸ್ಥಾನಕ್ಕೆ ಬರುತ್ತದೆ. ರಾಮಮಂದಿರವನ್ನೂ ಸಹ ಕಾಂಗ್ರೆಸ್ ನಿರ್ಮಾಣ ಮಾಡೋದಕ್ಕೆ ಆಗಿಲ್ಲ. ಬಿಜೆಪಿ (BJP) ಪ್ರಣಾಳಿಕೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಾಗಿ ಹೇಳಿತ್ತು, ಈಗ ನಿರ್ಮಾಣ ಮಾಡಿದ್ದೇವೆ. ರಾಮಮಂದಿರ ಕಟ್ಟಬೇಕಾದ ಜಾಗದಲ್ಲಿ ಕಟ್ಟಿಲ್ಲ ಎನ್ನುವ ಸಚಿವ ಸಂತೋಷ್ ಲಾಡ್ ಅವರು ಯಾಕೆ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಪುಲ್ವಾಮಾ ದಾಳಿಯ ವಿಚಾರವಾಗಿ, ಕಾಂಗ್ರೆಸ್ ನಾಯಕರು ಯಾಕೆ ಆಗ ಸುಮ್ಮನಿದ್ದರು? ನೀವು ಹೇಳಿದ್ದನ್ನು ಕೇಳಲು ಜನ ಮೂರ್ಖರಲ್ಲ. ಸಾಲ ಇಲ್ಲದ ದೇಶ ಯಾವುದೂ ಇಲ್ಲ. ಬಜೆಟ್ ತಕ್ಕಂತೆ ಸಾಲವಾಗುತ್ತದೆ. ಅತೀ ಹೆಚ್ಚು ಸಾಲವಾಗಿದ್ದು ಕಾಂಗ್ರೆಸ್ ಆಡಳಿತದಲ್ಲಿ. ಅದನ್ನು ತೀರಿಸುವ ಕೆಲಸ ಮೋದಿ ಮಾಡಿದ್ದಾರೆ. 1.76 ಲಕ್ಷ ಕೋಟಿ ರೂ. ಸಾಲ ಪಡೆಯಲು ಸಿಎಂ ಸಿದ್ದರಾಮಯ್ಯ ನಿರ್ಧಾರ ಮಾಡಿದ್ದಾರೆ ಎಂದಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ. ದೇಶದೆಲ್ಲೆಡೆ ನಕ್ಸಲ್ ಹಾವಳಿ ನಿಂತಿದೆ. ಕೇಂದ್ರ ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಸರಿಯಾಗಿ ಕಾಪಾಡುತ್ತಿದೆ. ವಿಶ್ವದಲ್ಲಿ ಭಾರತಕ್ಕೆ ಮಾನ್ಯತೆ ಸಿಗಲು ಮೋದಿಯವರ (Narendra Modi) ಆಡಳಿತ ಕಾರಣ. ವಿದೇಶಾಂಗ ನೀತಿಯಲ್ಲಿ ಬದಲಾವಣೆಯಾಗಲು ಮೋದಿ ಪ್ರಭಾವ ಕಾರಣ ಎಂದಿದ್ದಾರೆ. ಇದನ್ನೂ ಓದಿ: ಚಂಡೀಗಢ ಮೇಯರ್ ಚುನಾವಣೆ: ಎಎಪಿ ಅಭ್ಯರ್ಥಿಗೆ ಗೆಲುವು ಘೋಷಿಸಿದ ಸುಪ್ರೀಂ ಕೋರ್ಟ್