ಕನ್ನಡ ಚಿತ್ರರಂಗದ ಪ್ರಚಂಡ ಕುಳ್ಳ ಅಂತಾನೇ ಫೇಮಸ್ ಆಗಿರುವ ದ್ವಾರಕೀಶ್ ಅವರ ಪೂರ್ಣ ಹೆಸರು ಬಂಗ್ಲೆ ಶಾಮ ರಾವ್ ದ್ವಾರಕನಾಥ್. ಹಾಸ್ಯ ನಟರಾಗಿ, ನಿರ್ಮಾಪಕರಾಗಿ, ಹಲವಾರು ಭಾಷೆಯಲ್ಲಿ ನಟಿಸಿರುವ ಇವರಿಗೆ ದ್ವಾರಕೀಶ್ (Dwarkeesh) ಅಂತ ಹೆಸರು ಇಟ್ಟಿದ್ದು ಬೇರೆ ಯಾರೂ ಅಲ್ಲ ಕನ್ನಡ ಚಿತ್ರ ನಿರ್ಮಾಪಕ, ನಿರ್ದೇಶಕ ಸಿ.ವಿ ಶಿವಶಂಕರ್.
ಕನ್ನಡ ಚಿತ್ರೋದ್ಯಮದಲ್ಲಿ ಏನಾದರೂ ಸಾಧನೆ ಮಾಡಬೇಕು ಅಂತ ಬಣ್ಣದ ಪ್ರಪಂಚಕ್ಕೆ ಬಂದ ದ್ವಾರಕೀಶ್, ಸಿನಿಮಾ ರಂಗದ ನಾನಾ ವಿಭಾಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡವರು. ಕೇವಲ ನಟರಾಗಿ ಮಾತ್ರ ಉಳಿಯದೇ ನಿರ್ದೇಶಕರಾಗಿ, ನಿರ್ಮಾಪಕರಾಗಿ ಅನೇಕ ಕಲಾವಿದರನ್ನು ಚಿತ್ರೋದ್ಯಮಕ್ಕೆ ಪರಿಚಯಿಸಿದವರು.
ಮೈಸೂರಿನ ಶಾರದಾ ವಿಲಾಸ್ ಮತ್ತು ಬಾನುಮಯ್ಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದ ದ್ವಾರಕೀಶ್, ಸಿಪಿಸಿ ಪಾಲಿಟೆಕ್ನಿಕ್ ಜೊತೆ ಡಿಪ್ಲೋಮಾ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ಮೈಸೂರಿನಲ್ಲಿ ಭಾರತ್ ಆಟೋ ಸ್ಪೇರ್ಸ್ ಅಂಗಡಿಯಿಂದ ವ್ಯಾಪಾರ ಶುರು ಮಾಡಿದ್ದರು. ಆನಂತರ ಸಿನಿಮಾ ರಂಗಕ್ಕೆ ಬಂದವರು.
ದ್ವಾರಕೀಶ್ ಅವರ ಚಿಕ್ಕಪ್ಪ ಹುಣಸೂರು ಕೃಷ್ಣಮೂರ್ತಿ ಅವರು. ಅವರನ್ನು ಒಪ್ಪಿಸುವ ಮೂಲಕ 1963ರಲ್ಲಿ ದ್ವಾರಕೀಶ್ ಸಿನಿಮಾ ರಂಗವನ್ನು ಪ್ರವೇಶ ಮಾಡಿದರು. ಹಾಸ್ಯನಟ, ಸಹನಟಾಗಿ ಕೆಲಸ ಮಾಡುತ್ತಿದ್ದವರು, ಏಕಾಏಕಿ 1966ರಲ್ಲಿ ಮಮತೆಯ ಬಂಧನ ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ನಿರ್ಮಾಪಕರಾದವರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತಿದ್ದಂತೆಯೇ ಮತ್ತೆ 1969ರಲ್ಲಿ ಮೇಯರ್ ಮುತ್ತಣ್ಣ ಚಿತ್ರವನ್ನು ತಮ್ಮದೇ ದ್ವಾರಕಾ ಫಿಲ್ಮ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದರು. ಈ ಸಿನಿಮಾದಲ್ಲಿ ಡಾ.ರಾಜ್ ಕುಮಾರ್ ಹೀರೋ, ಭಾರತಿ ನಾಯಕಿ. ಇದು ಕೂಡ ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಪ್ರದರ್ಶನ ಮಾಡಿತು.
ನಟರಾಗಿ ಜನ್ಮ ರಹಸ್ಯ, ಮಂಕುತಿಮ್ಮ, ಪೆದ್ದ ಗೆದ್ದ, ಕಿಟ್ಟು ಪುಟ್ಟಿ, ಸಿಂಗಾಪುರದಲ್ಲಿ ರಾಜಾಕುಳ್ಳ, ಮನೆ ಮನೆ ಕಥೆ, ಆಫ್ರಿಕಾದಲ್ಲಿ ಶಿಲಾ, ಆಪ್ತಮಿತ್ರ, ಭಲೇ ಹುಡುಗ, ಬಂಗಾರದ ಮನುಷ್ಯ, ಗಲಾಟೆ ಸಂಸಾರ, ಪ್ರಪಂಚ ಕುಳ್ಳ, ಗುರು ಶಿಷ್ಯರು, ಕಳ್ಳ ಕಳ್ಳು ಹೀಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.
1974ರಲ್ಲಿ ವಿಷ್ಣುವರ್ಧನ್ ಅವರ ಜೊತೆಯಾಗಿ ಸಿನಿಮಾ ಮಾಡಲು ಮುಂದಾದರು. ಕಳ್ಳ ಕುಳ್ಳ ಸಿನಿಮಾದಿಂದ ಶುರುವಾದ ಇವರ ಜರ್ನಿ ಆಪ್ತಮಿತ್ರ ಚಿತ್ರದ ತನಕವೂ ಕರೆಕೊಂಡ ಬಂದಿತ್ತು. ಈ ನಡುವೆ ವಿಷ್ಣು ಮತ್ತು ದ್ವಾಕರೀಶ್ ಗಲಾಟೆ ಮಾಡಿಕೊಂಡು ಹತ್ತು ವರ್ಷಗಳ ಕಾಲ ದೂರವಿದ್ದರು.