ಮುಂಬೈ: ಹಣ ಅಕ್ರಮ ವರ್ಗಾವಣೆ (Money Laundering Case) ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ (Anil Deshmukh) ಇಂದು ಬಿಡುಗಡೆಯಾಗಿದ್ದಾರೆ.
72 ವಯಸ್ಸಿನ ದೇಶ್ಮುಖ್ ಅವರು ಸತತ ಒಂದು ವರ್ಷ ಜೈಲಿನಲ್ಲಿದ್ದರು. ಮುಂಬೈನ (Mumbai) ಅರ್ಥೂರ್ ರೋಡ್ ಜೈಲಿನಿಂದ ಇಂದು ಬಿಡುಗಡೆಯಾಗುತ್ತಿದ್ದಂತೆ, ಅವರ ಬೆಂಬಲಿಗರು ವೀರೋಚಿತ ಸ್ವಾಗತ ಕೋರಿದರು. ಅನಿಲ್ ದೇಶ್ಮುಖ್ ಅವರು ಕೇಂದ್ರೀಯ ತನಿಖಾ ದಳ (CBI) ದಾಖಲಿಸಿದ್ದ ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಇದನ್ನೂ ಓದಿ: ಉತ್ತರ ಭಾರತದಲ್ಲಿ ಮಂಜಿನ ದಟ್ಟನೆ – ವಿಮಾನ ಸಂಚಾರಕ್ಕೆ ಅಡಚಣೆ
ಡಿಸೆಂಬರ್ 12 ರಂದು ದೇಶ್ಮುಖ್ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿತು. ಆದರೆ ಸಿಬಿಐ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲು ಸಮಯ ಕೋರಿದ್ದರಿಂದ ನ್ಯಾಯಾಧೀಶರು ಆದೇಶವನ್ನು 10 ದಿನಗಳವರೆಗೆ ಸ್ಥಗಿತಗೊಳಿಸಿದರು. ಸಿಬಿಐ, ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಆದರೆ ಚಳಿಗಾಲದ ರಜೆಯ ನಂತರ ಜನವರಿಯಲ್ಲಿ ಕೋರ್ಟ್ ಮತ್ತೆ ತೆರೆದ ನಂತರವೇ ಅದರ ಮೇಲ್ಮನವಿಯನ್ನು ಆಲಿಸಬಹುದು.
ಈ ಹಿಂದೆ, ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ದೇಶ್ಮುಖ್ ಅವರಿಗೆ ನೀಡಿದ್ದ ಜಾಮೀನಿನ ವಿಚಾರವಾಗಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ನಂತರ ಅಕ್ಟೋಬರ್ನಲ್ಲಿ ಜಾಮೀನು ಪಡೆದರು. ಆದರೆ ಸಿಬಿಐ ದಾಖಲಿಸಿದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಜೈಲಿನಲ್ಲೇ ಇರಬೇಕಾಯಿತು. ಇದನ್ನೂ ಓದಿ: ಟ್ರಕ್ನಲ್ಲಿ ಅಡಗಿದ್ದ ಮೂವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ
ದೇಶ್ಮುಖ್ ಅವರು ರಾಜ್ಯದ ಗೃಹ ಸಚಿವ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಕೆಲವು ಪೊಲೀಸ್ ಅಧಿಕಾರಿಗಳ ಮೂಲಕ ಮುಂಬೈನ ವಿವಿಧ ಬಾರ್ಗಳಿಂದ 4.7 ಕೋಟಿ ರೂ. ಸಂಗ್ರಹಿಸಿದ್ದಾರೆ ಎಂಬ ಗಂಭೀರ ಆರೋಪ ಹೊರಿಸಲಾಗಿತ್ತು.