ನವದೆಹಲಿ: ಮದ್ಯ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ಕೋರ್ಟ್ 15 ದಿನ ನ್ಯಾಯಾಂಗ ಬಂಧನ (Judicial custody) ವಿಧಿಸಿದೆ.
ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ (ED) ಇಂದು ದೆಹಲಿಯ ರೋಸ್ ಅವೆನ್ಯೂ ಕೋರ್ಟ್ಗೆ ಹಾಜರು ಪಡಿಸಿತು. ಅರ್ಜಿ ವಿಚಾರಣೆ ವೇಳೆ ಇಡಿ ನಮಗೆ ಮುಂದಿನ ವಿಚಾರಣೆ ನಡೆಸುವವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಎಂದು ಮನವಿ ಮಾಡಿತು.
ನಾವು ಹೆಚ್ಚಿನ ರಿಮಾಂಡ್ ಕೇಳುತ್ತಿಲ್ಲ. ಸೆಂಥಿಲ್ ಬಾಲಾಜಿ ಪ್ರಕರಣದಲ್ಲಿ ಸುಪ್ರೀಂ ತೀರ್ಪಿನ ಪ್ರಕಾರ ಹೆಚ್ಚಿನ ಕಸ್ಟಡಿ ಕೇಳುವ ಹಕ್ಕಿಗೆ ಒಳಪಟ್ಟು ನಾವು ನ್ಯಾಯಾಂಗ ಬಂಧನವನ್ನು ಕೇಳುತ್ತಿದ್ದೇವೆ ಎಂದು ಇಡಿ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ವಿ ರಾಜು ಮನವಿ ಮಾಡಿದರು.
ಇಡಿ ಮನವಿಯನ್ನು ಪುರಸ್ಕರಿಸಿದ ಕೋರ್ಟ್ ಕೇಜ್ರಿವಾಲ್ಗೆ ಏಪ್ರಿಲ್ 15ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಪ್ರಕಟಿಸಿತು.
ಕಳೆದ ಗುರುವಾರ ಕೋರ್ಟ್ ಅರವಿಂದ ಕೇಜ್ರಿವಾಲ್ ಅವರನ್ನು 4 ದಿನ ಇಡಿ ಕಸ್ಟಡಿಗೆ ನೀಡಿತ್ತು. ಸದ್ಯ ಇಡಿ ಕಸ್ಟಡಿಯಲ್ಲಿ ಇರುವ ಕೇಜ್ರಿವಾಲ್ ಇನ್ನು ಮುಂದೆ ತಿಹಾರ್ ಜೈಲಿಗೆ ಶಿಫ್ಟ್ ಆಗಲಿದ್ದಾರೆ.