ರಾಯಚೂರು: ಹೊಟ್ಟೆಪಾಡಿಗೆ ಜನ ಏನೆನೋ ಕೆಲಸಗಳನ್ನು ಮಾಡ್ತಾರೆ, ಕಳ್ಳತನ ಕೂಡ ಹೊಟ್ಟೆ ಪಾಡಿಗಾಗಿ ಮಾಡುವ ಜನರಿದ್ದಾರೆ. ಇದಕ್ಕೆ ನಿದರ್ಶನವೆಂಬಂತೆ ರಾಯಚೂರಿನಲ್ಲಿ ಚಿಕ್ಕಮಕ್ಕಳು, ಮಹಿಳೆಯರು ಪ್ರಾಣವನ್ನೇ ಪಣಕ್ಕಿಟ್ಟು ರೈತರು ಮಿಲ್ ಹಾಗೂ ಮಾರುಕಟ್ಟೆಗೆ ತರುವ ಹತ್ತಿಯನ್ನ ಕಳ್ಳತನ ಮಾಡುತ್ತಿದ್ದಾರೆ.
ನಗರದ ಹೈದರಾಬಾದ್ ರಸ್ತೆಯಲ್ಲಿ ಎಸ್.ಪಿ ಕಚೇರಿಯಿಂದ ಓಪೆಕ್ ಆಸ್ಪತ್ರೆವರೆಗೆ ರೈತರ ಹತ್ತಿ ಕದಿಯಲು ಮಕ್ಕಳು ಹರಸಾಹಸವನ್ನು ಮಾಡುತ್ತಿದ್ದಾರೆ. ಇಲ್ಲಿನ ಕಾಟನ್ ಮಿಲ್ ಗಳ ಮುಂದೆ ಓಡಾಡುವ ವಾಹನಗಳ ಹಿಂದೆ ಪ್ರಾಣಾಪಾಯವನ್ನೂ ಲೆಕ್ಕಿಸದೆ ಓಡಿ ಹತ್ತಿ ಕದಿಯುತ್ತಾರೆ. ಟಾಟಾ ಏಸ್, ಟಂಟಂ, ಟ್ರ್ಯಾಕ್ಟರ್ ಗಳು ಯಾವ ವಾಹನವನ್ನೂ ಬಿಡದೆ ಹಿಂದೆ ಓಡುತ್ತಾರೆ. ಆಯಾತಪ್ಪಿ ಬಿದ್ದರೆ, ಹಿಂದಿನ ವಾಹನಗಳು ಡಿಕ್ಕಿ ಹೊಡೆದರೆ ಮಕ್ಕಳಿಗೆ ಅಪಾಯ ತಪ್ಪಿದ್ದಲ್ಲ. ಚಿಂದಿ ಆಯುವವರು, ಸ್ಲಂ ಪ್ರದೇಶದ ಮಕ್ಕಳಿಂದ ಹುಚ್ಚು ಸಾಹಸ ನಡೆಯುತ್ತಿದ್ದು, ಕದ್ದ ಹತ್ತಿಯನ್ನು ಅರ್ಧ ಬೆಲೆಗೆ ವ್ಯಾಪಾರಿಗಳಿಗೆ ಮಾರಾಟ ಮಾಡಿ ಬದುಕುತ್ತಿದ್ದಾರೆ. ಇದನ್ನೂ ಓದಿ: ನಮ್ಮ ಜಗತ್ತು.. ನಮ್ಮ ವಿಶ್ವ.. ಐ ಲವ್ ಯೂ ಕಂದ
ಮಕ್ಕಳು, ಮಹಿಳೆಯರ ಜೊತೆ ಪುರುಷರು ಸಹ ಪ್ರಾಣ ಒತ್ತೆಯಿಟ್ಟು ಪ್ರತೀ ದಿನ ಕ್ವಿಂಟಾಲ್ಗಟ್ಟಲೇ ಹತ್ತಿ ಕದಿಯುತ್ತಿದ್ದಾರೆ. ಆದರೆ ಮಿಲ್ಗೆ ಹತ್ತಿ ತರುವ ರೈತರು ಹಿಂದೆ ಬರುವ ಮಕ್ಕಳು ಎಲ್ಲಿ ಅಪಾಯಕ್ಕೆ ಒಳಗಾಗುತ್ತಾರೋ ಎಂಬ ಭಯದಲ್ಲಿದ್ದಾರೆ. ಹೀಗಾಗಿ ಬಡ ಮಕ್ಕಳಿಗೆ ಅಧಿಕಾರಿಗಳು ಸರಿಯಾದ ವ್ಯವಸ್ಥೆ ಮಾಡಬೇಕು. ವಾಹನಗಳ ಹಿಂದೆ ಬಿದ್ದು ಹತ್ತಿ ಕದಿಯುವುದನ್ನ ತಪ್ಪಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಈಗ ಹತ್ತಿ ಬೆಳೆಯನ್ನ ಮಾರಾಟ ಮಾಡುವ ಸಮಯವಾಗಿರುವುದರಿಂದ ರೈತರ ಬೆಳೆ ತುಂಬಿದ ವಾಹನಗಳ ಓಡಾಟ ಹೆಚ್ಚಾಗಿರುತ್ತದೆ. ಹೀಗಾಗಿ ಬೆಳಗ್ಗೆಯಿಂದಲೇ ಮಿಲ್ ಹತ್ತಿರ ಬರುವ ಮಕ್ಕಳು ಮಹಿಳೆಯರು ವಾಹನಗಳ ಹಿಂದೆ ಬಿದ್ದು ಹತ್ತಿ ಕದಿಯುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಕ್ವಿಂಟಾಲ್ಗೆ 8,500 ವರೆಗೆ ಮಾರಾಟವಾಗುವ ಹತ್ತಿಯನ್ನು 1 ಕೆ.ಜಿ ಗೆ 30 ರೂಪಾಯಿಗೆ ಯಂತೆ ಮಾರಾಟ ಮಾಡುತ್ತಾರೆ. ಈ ಬಗ್ಗೆ ಕೂಡಲೇ ಸಂಬಂಧಪಟ್ಟವರು ಎಚ್ಚೆತ್ತು ಮಕ್ಕಳ ರಕ್ಷಣೆಗೆ ಮುಂದಾಗಬೇಕಿದೆ. ಇದನ್ನೂ ಓದಿ: ಭಾರತ Vs ಪಾಕಿಸ್ತಾನ ಮ್ಯಾಚ್ – 10 ಸೆಕೆಂಡ್ ಜಾಹೀರಾತಿಗೆ ಲಕ್ಷ ಲಕ್ಷ ರೇಟ್