ಚಿಕ್ಕಬಳ್ಳಾಪುರ: ಪ್ರಿಯತಮೆಯ ಭೇಟಿ ಮಾಡಲು ಮನೆಗೆ ನುಗ್ಗಿದ ಪ್ರಿಯಕರನನ್ನು ಆಕೆಯ ಮೈದುನ ರಾಡ್ ನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.
ನಗರರದ 31 ನೇ ವಾರ್ಡ್ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಹಿಂಭಾಗದ ಇಂದಿರಾನಗರದ ಮನೆಯೊಂದರಲ್ಲಿ ಬುಧವಾರ ಸಂಜೆ ಅಪರಿಚಿತ ವ್ಯಕ್ತಿಯನ್ನ ರಾಘವೇಂದ್ರ ಎಂಬಾತ ರಾಡ್ ನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದ. ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ (Chikkaballapur) ನಗರ ಪೊಲೀಸರು ಭೇಟಿ ಮಾಡಿ ಕೊಲೆಯಾದವನ ಗುರುತು ಪತ್ತೆ ಹಚ್ಚಿದ್ದು ಮೃತ ವ್ಯಕ್ತಿ ಸಾದಲಿ ಗ್ರಾಮದ 40 ವರ್ಷದ ಅಂಜಿನಪ್ಪ ಪೈಂಟರ್ ಕೆಲಸ ಅಂತ ತಿಳಿದುಬಂದಿದೆ.
ಘಟನೆ ನಂತರ ಕೊಲೆಗಾರ ರಾಘವೇಂದ್ರ ಹಾಗೂ ಮನೆಯಲ್ಲಿದ್ದ ಆಶಾ ಎಂಬಾಕೆಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ವಿಚಾರಣೆ ನಂತರ ಕೊಲೆಯಾದ ಅಂಜನಪ್ಪ ಹಾಗೂ ಆಶಾಳಿಗೆ ಕಳೆದ 1 ವರ್ಷದಿಂದ ಪರಿಚಯ ಸಂಬಂಧವಿರುವ ವಿಚಾರ ಬಹಿರಂಗಗೊಂಡಿದೆ. ನಿನ್ನೆ ಸಂಜೆ ಆಶಾಳನ್ನ ಭೇಟಿ ಮಾಡಲು ಮನೆಗೆ ಹೋಗಿರೋ ಅಂಜನಪ್ಪ, ನನ್ನ ಆಶಾ ಅವೈಡ್ ಮಾಡಿದ್ದು ಬಲವಂತವಾಗಿ ಮನೆಗೆ ಬಂದ ಅಂತ ಆಶಾ ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ. ಇದನ್ನೂ ಓದಿ: ಹ್ಯಾರಿಸ್ಗೆ ಸಂಕಷ್ಟ – ಚುನಾವಣಾ ತಕರಾರು ಅರ್ಜಿ ವಿಚಾರಣೆಗೆ ಹೈಕೋರ್ಟ್ ಅಸ್ತು
ಈ ವೇಳೆ ಆಶಾ ತನ್ನ ಗಂಡನಿಗೆ ಕರೆ ಮಾಡುವುದಾಗಿ ಹೇಳಿದಾಗ ಆಕೆಯ ಫೋನ್ ಕಸಿದುಕೊಂಡು ಒಡೆದು ಹಾಕಿದ್ದು, ತದನಂತರ ಬೇರೆಯವರ ಫೋನ್ ಮೂಲಕ ಮೈದುನ ರಾಘವೇಂದ್ರಗೆ ಕರೆ ಮಾಡಿ ತಿಳಿಸಿದಳಂತೆ. ಹೀಗಾಗಿ ಮನೆಗೆ ಬಂದ ಮೈದುನ ರಾಘವೇಂದ್ರ ಹಾಗೂ ಅಂಜನಪ್ಪನ ನಡುವೆ ಜಗಳ ನಡೆದು ಗಲಾಟೆಯಲ್ಲಿ ರಾಘವೇಂದ್ರ ಅಂಜನಪ್ಪನ ತಲೆಗೆ ರಾಡ್ ನಿಂದ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ. ಸದ್ಯ ಆಶಾ ಹಾಗೂ ರಾಘವೇಂದ್ರ ಇಬ್ಬರನ್ನ ಬಂಧಿಸಿದ್ದು, ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.