ಬೆಂಗಳೂರು: ಕನ್ನಡದಲ್ಲಿ ‘ಜಾಕಿ’ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರುವ ದಕ್ಷಿಣದ ಖ್ಯಾತ ತಾರೆ ಭಾವನಾ ಮೆನನ್ (Bhavana Menon) ತಮ್ಮ ವೃತ್ತಿ ಜೀವನದಲ್ಲಿ ನಡೆದ ಕಹಿ ಘಟನೆಯ ಕುರಿತು ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ. ತಮಗಾದ ದೌರ್ಜನ್ಯದ ಆ ಕರಾಳ ಅಧ್ಯಾಯವನ್ನು ಎಳೆಎಳೆಯಾಗಿ ಅವರು ಬಿಚ್ಚಿಟ್ಟಿದ್ದಾರೆ.
2017ರ ಫೆಬ್ರವರಿಯಲ್ಲಿ ಚಲಿಸುವ ಕಾರಿನಲ್ಲೇ ನಟಿ ಭಾವನಾ ಅವರ ಮೇಲೆ ದೈಹಿಕ ಹಲ್ಲೆ ಮಾಡುವುದರ ಜೊತೆಗೆ ಕಿರುಕುಳ ನೀಡಲಾಗಿದೆ ಎನ್ನುವ ಆರೋಪ ಮಲಯಾಳಂ ಸೂಪರ್ ಸ್ಟಾರ್ ದಿಲೀಪ್ ಅವರ ಮೇಲಿದೆ. ಈ ಪ್ರಕರಣದ ಮಾಸ್ಟರ್ ಮೈಂಡ್ ಅವರೇ ಎನ್ನುವ ಕಾರಣಕ್ಕಾಗಿ ದಿಲೀಪ್ ಬಂಧನ ಕೂಡ ಆಗಿದ್ದರು. ಸದ್ಯ ಪ್ರಕರಣ ನ್ಯಾಯಲಯದ ವಿಚಾರಣೆಯಲ್ಲಿದೆ. ಹಾಗಾಗಿ ಭಾವನಾ ಮಾತು ಮತ್ತೆ ಮುನ್ನೆಲೆಗೆ ಬಂದಿದೆ. ಇದನ್ನೂ ಓದಿ : ಮಹಿಳಾ ದಿನಾಚರಣೆಗಾಗಿ ವಿಶೇಷ ಪೋಸ್ಟರ್ ರಿಲೀಸ್ ಮಾಡಿದ ಕೆಜಿಎಫ್ 2 ತಂಡ
ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ “ವಿ ದಿ ವುಮೆನ್” ಕಾರ್ಯಕ್ರಮದಲ್ಲಿ ಆ ಕರಾಳ ಘಟನೆಯ ಕುರಿತು ಮೌನ ಮುರಿದಿದ್ದು, ನನ್ನ ಜೀವನದಲ್ಲಿ ಇಂಥದ್ದೊಂದು ಘಟನೆ ನಡೆಯುತ್ತದೆ ಎಂದು ಯಾವತ್ತೂ ಊಹಿಸಿರಲಿಲ್ಲ. ನಾನು ಜೀವಂತವಾಗಿ ಉಳಿದಿರುವುದೇ ಪುಣ್ಯ ಎಂದು ಭಾವನಾತ್ಮಕವಾಗಿಯೇ ಭಾವನಾ ಮಾತನಾಡಿದ್ದಾರೆ. ಕೋರ್ಟ್ನಲ್ಲಿ ಇನ್ನೂ ಪ್ರಕರಣ ನಡೆಯುತ್ತಿರುವುದರಿಂದ ಕೆಲ ವಿವರಗಳನ್ನು ಬಹಿರಂಗ ಪಡಿಸಲು ಆಗುವುದಿಲ್ಲ. ಅಂತಹ ಕರಾಳ ಘಟನೆ ಅದಾಗಿದೆ ಎಂದು 2017ರಲ್ಲಿ ನಡೆದ ದೌರ್ಜನ್ಯದ ಕುರಿತು ಮಾತನಾಡಿದ್ದಾರೆ.
ಅಪ್ಪ ಬದುಕಿದ್ದರೆ ಹೀಗೆ ಆಗುತ್ತಿರಲಿಲ್ಲ : ಘಟನೆ ನಡೆಯುವ ಎರಡು ವರ್ಷಗಳ ಮುಂಚೆ 2015ರಲ್ಲಿ ತೀರಿಕೊಂಡರು. ಒಂದು ವೇಳೆ ನನ್ನ ತಂದೆ ಬದುಕಿದ್ದರೆ, ಈ ಕಹಿ ಘಟನೆಯು ನಡೆಯುವುದಕ್ಕೆ ಸಾಧ್ಯವೇ ಇರಲಿಲ್ಲ. “ಈ ಘಟನೆ ಹೇಗಾಯಿತು? ಯಾಕಾಯಿತು? ನನಗೇ ಯಾಕಾಯಿತು ಎಂದು ಹಲವಾರು ಬಾರಿ ನನಗೆ ನಾನೇ ಪ್ರಶ್ನೆ ಮಾಡಿಕೊಂಡಿದ್ದೇನೆ. ಅವತ್ತೊಂದು ದಿನ ಶೂಟಿಂಗ್ ಇರದೇ ಇದ್ದರೆ, ಅದು ನನ್ನ ಬಾಳಿನಲ್ಲಿ ನಡೆಯುತ್ತಿರಲಿಲ್ಲ ಎಂದು ಊಹಿಸಿಕೊಂಡಿದ್ದೇನೆ. ನನ್ನ ಊಹೆಯ ಆಚೆಗೂ ನಡೆದು ಹೋಯಿತು. ಅದರಿಂದ ಆಚೆ ಬರಲು ನಾನು ಪಡಬಾರದ ಕಷ್ಟಪಟ್ಟೆ. ಸಾಮಾನ್ಯ ಜೀವನಕ್ಕೆ ಮರಳಲು ಒದ್ದಾಡಿದೆ. ಅದರ ಬಗ್ಗೆ ಯೋಚಿಸಿದರೆ ಇವತ್ತಿಗೂ ಡಿಪ್ರೆಸ್ಗೆ ಹೋಗುತ್ತೇನೆ. ಈ ಹೋರಾಟ ಯಾವ ಹುಡುಗಿಗೂ ಬರಬಾರದು” ಎಂದು ಉತ್ತರಿಸಿದ್ದಾರೆ ಭಾವನಾ. ಇದನ್ನೂ ಓದಿ : ಆ ಏರಿಯಾದಲ್ಲಿ ಪುನೀತ್ ನಟನೆಯ ಜೇಮ್ಸ್ ರಿಲೀಸ್ ಗೆ 12 ಕೋಟಿ ಕೇಳಿದ್ರಾ ವಿತರಕರು?
ಕೋರ್ಟ್ ಕಟಕಟೆಯಲ್ಲಿ 15 ದಿನ : ಈ ಘಟನೆ 2017ರಲ್ಲಿ ನಡೆದರೂ, ಆರೋಪ ಪ್ರತ್ಯಾರೋಪ ನಡೆದೇ ಇತ್ತು. ತನಿಖಾಧಿಕಾರಿಗಳು ತಮ್ಮ ಪಾಡಿಗೆ ತಾವು ತನಿಖೆ ನಡೆಸುತ್ತಿದ್ದರು. ಕೋರ್ಟ್ ವಿಚಾರಣೆ ಮಾಡುತ್ತಿತ್ತು. ನ್ಯಾಯಾಧೀಶರ ಮುಂದೆ ಘಟನೆಯ ಬಗ್ಗೆ ಹೇಳಿಕೊಳ್ಳುವಂತಹ ಅವಕಾಶ ಮತ್ತು ಕೋರ್ಟ್ ಕಟಕಟೆಯಲ್ಲಿ ವಕೀಲರ ಪ್ರಶ್ನೆಗೂ ಉತ್ತರಿಸುವಂತ ಸಮಯ ಬಂದಿದ್ದು 2020ರಲ್ಲಿ. ಒಟ್ಟು 15 ದಿನಗಳ ಕಾಲ ನಾನು ಕೋರ್ಟ್ ಸುತ್ತಿದೆ. ನನ್ನ ನೋವು ಹಂಚಿಕೊಂಡೆ. ದುರುಳರ ಅಟ್ಟಹಾಸ ಬಿಚ್ಚಿಟ್ಟೆ. ಅಲ್ಲಿಂದ ಆಚೆ ಬಂದಾಗ ಮತ್ತೊಂದು ನಿರಾಳತೆ. ನಾನೇ ಬಲಿಪಶುವಾಗುತ್ತೇನಾ ಎನ್ನುವ ಆತಂಕ. 15 ದಿನಗಳ ಹೋರಾಟದ ನಂತರ ನನ್ನಲ್ಲೂ ಛಲ ಹುಟ್ಟಿಕೊಂಡಿತು. ನನಗಾದ ಅನ್ಯಾಯಕ್ಕೆ ಮಾತ್ರವಲ್ಲ, ಬೇರೆಯವರ ಅನ್ಯಾಯದ ವಿರುದ್ಧವೂ ಧ್ವನಿ ಎತ್ತಲು ನಿರ್ಧರಿಸಿದೆ ಎಂದಿದ್ದಾರೆ ಭಾವನಾ. ಇದನ್ನೂ ಓದಿ : ಸೋನಾಕ್ಷಿ ಸಿನ್ಹಾ ಮೋಸ ಮಾಡಿದ್ರಾ? ಅಸಲಿ ಕಥೆ ಏನು?
ನನ್ನ ಬಗ್ಗೆಯೇ ಆರೋಪ ಮಾಡಿದರು : ಇಂತಹ ಘಟನೆ ನಡೆದಾಗ ಸಹಜವಾಗಿಯೇ ಮಹಿಳೆಯರ ವಿರುದ್ಧವೇ ಟೀಕೆ ಮಾಡುತ್ತಾರೆ. ನನಗೂ ಹಾಗೆಯೇ ಆಯಿತು. ನನ್ನ ಬಗ್ಗೆ ಇಲ್ಲಸಲ್ಲದ್ದನ್ನು ಬರೆದರು. ಸೋಷಿಯಲ್ ಮೀಡಿಯಾದಲ್ಲಿ ಅವಮಾನ ಆಗುವಂತೆ ಟೀಕಿಸಿದರು. ನಾನೇಕೆ ಅವರೊಂದಿಗೆ ಕಾರಿನಲ್ಲಿ ಹೋದೆ ಎಂದು ಪ್ರಶ್ನೆ ಮಾಡಿದರು. ತಪ್ಪಾಗಿದ್ದು ನನ್ನಿಂದಲೇ ಅಂತ ಜರಿದರು. ಅದೊಂದು ರೀತಿಯ ಅವಮಾನ. ಈ ಘಟನೆಯಿಂದ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದೇನೆ ಎನ್ನುವಷ್ಟರಲ್ಲಿ ಯಾವುದೇ ಪತ್ರಿಕೆ ಸುಳ್ಳು ಬರೆದಿರೋದು, ಇನ್ನ್ಯಾರೋ ಸಾಮಾಜಿಕ ಜಾಲತಾಣದಲ್ಲಿ ನನ್ನ ಬಗ್ಗೆಯೇ ಕೆಟ್ಟದ್ದಾಗಿ ಕಮೆಂಟ್ ಮಾಡಿರೋರು. ಮತ್ತೆ ನಾನು ಕುಸಿಯುತ್ತಿದ್ದೆ. ಇಂತಹ ವೇಳೆಯಲ್ಲಿ ನನ್ನ ಬೆಂಬಲಕ್ಕೆ ನಿಂತದ್ದು ಸ್ನೇಹಿತರು, ನನ್ನ ಕುಟುಂಬ ಮತ್ತು ಅಭಿಮಾನಿಗಳು. ಇವತ್ತು ನಾನು ಜೀವಂತವಾಗಿ ಇರುವುದಕ್ಕೆ ಅವರೇ ಕಾರಣ. ಇಲ್ಲದೇ ಇದ್ದರೆ, ನನ್ನ ಸ್ಥಿತಿ ಮೊದಲಿನಂತೆ ಆಗುತ್ತಿರಲಿಲ್ಲ ಎಂದು ಆ ಸನ್ನಿವೇಶವನ್ನೂ ಭಾವನಾ ಹಂಚಿಕೊಂಡಿದ್ದಾರೆ.
ಪ್ರಕರಣ ಕೈ ಬಿಡಬೇಕು ಎಂದುಕೊಂಡಿದ್ದೆ : ಸೋಷಿಯಲ್ ಮೀಡಿಯಾ ಓಪನ್ ಮಾಡಿದರೆ ಸಾಕು ಕೆಟ್ಟ ಕೆಟ್ಟದ್ದಾಗಿ ಬರೆಯುತ್ತಿದ್ದರು. ನೀನೇಕೆ ಸತ್ತು ಹೋಗಬಾರದು ಅನ್ನುವ ಕಾಮೆಂಟ್ಸ್ ಕೂಡ ಅದರಲ್ಲಿದ್ದವು. ಬೆದರಿಕೆಯ ಕರೆಗಳು ಬೇರೆ. ನನ್ನಿಂದಾಗಿಯೇ ಬೇರೆಯವರು ತೊಂದರೆ ಆಗುತ್ತಿದೆ ಎಂದು ಗೂಬೆ ಕೂರಿಸಿದರು. ಅವರ ವಿರುದ್ಧ ನನ್ನಿಂದ ಹೋರಾಡುವುದಕ್ಕೆ ಸಾಧ್ಯವೇ ಇಲ್ಲವೇನೋ ಎನ್ನುವಂತಹ ವಾತಾವರಣ ಸೃಷ್ಟಿಸಿದ್ದರು. ಆ ವೇಳೆಯಲ್ಲಿ ಈ ಪ್ರಕರಣದಿಂದ ನಾನು ಹಿಂದೆ ಸರಿಯಬೇಕು ಅನಿಸೋದು. ಆದರೆ, ಆಗಿರುವ ಅನ್ಯಾಯವನ್ನು ಸುಮ್ಮನೆ ಬಿಟ್ಟರೆ, ಅದರ ವಿರುದ್ಧ ಧ್ವನಿ ಎತ್ತೋರು ಯಾರು? ಅಂತ ಅನಿಸೋದು. ಹಾಗಾಗಿ ನನಗೆ ನಾನೇ ಸಮಾಧಾನ ಪಡಿಸಿಕೊಂಡು ಹೋರಾಟಕ್ಕೆ ಇಳಿದೆ. ನನ್ನ ಘನತೆಯನ್ನು ಚೂರು ಚೂರು ಮಾಡಿದ್ದಾರೆ. ಪ್ರಕರಣವನ್ನು ಗೆಲ್ಲುವ ಮೂಲಕವೇ ಆ ಘನತೆಯನ್ನು ನಾನು ಪಡೆದುಕೊಳ್ಳಬೇಕು ಎಂದು ಸಿದ್ಧವಾದೆ” ಎಂದಿದ್ದಾರೆ ಭಾವನಾ.
ಚಿತ್ರೋದ್ಯಮದಿಂದಲೇ ದೂರವಾದೆ: ಈ ಪ್ರಕರಣದ ನಂತರ ಜೀವ ಬೆದರಿಕೆ ಕರೆಗಳು ಬರುವುದಕ್ಕೆ ಶುರುವಾದವು. ಚಿತ್ರೀಕರಣಕ್ಕೆ ಹೋಗಲು ಭಯ ಆಗುವುದು. ಮಲಯಾಳಂನಲ್ಲೇ ನಟಿಸಲು ಸಾಕಷ್ಟು ಆಫರ್ಸ್ ಬಂದರೂ, ಅವುಗಳನ್ನು ಬಿಟ್ಟುಬಿಟ್ಟೆ. ನಾನು ಸಿನಿಮಾ ರಂಗದಿಂದ ದೂರವಾಗುತ್ತೇನೆ ಎನ್ನುವ ವಿಷಯ ಚಿತ್ರರಂಗ ತಲುಪಿತು. ಅಭಿಮಾನಿಗಳು ನನ್ನ ಬೆಂಬಲಕ್ಕೆ ನಿಂತರು. ಸಿನಿಮಾ ರಂಗ ಬಿಟ್ಟು ಹೋಗಬೇಡಿ ಅಂದರು. ವಾಸ್ತವ ಸ್ಥಿತಿ ನನಗೆ ಮಾತ್ರ ಗೊತ್ತಿತ್ತು. ಹಾಗಾಗಿ ಯಾವ ಸಿನಿಮಾಗಳನ್ನು ಒಪ್ಪಲಿಲ್ಲ. ಸಿನಿಮಾ ರಂಗದಿಂದ ದೂರವಾಗುವಂತಹ ಅನಿವಾರ್ಯತೆ ನನಗಿತ್ತು. ಹಾಗಾಗಿ ಚಿತ್ರೋದ್ಯಮದಿಂದ ದೂರವಾದೆ ಎನ್ನುವುದು ಭಾವನಾ ಮಾತು.