ನವದೆಹಲಿ: ಇಂಗ್ಲೆಂಡ್ ವಿರುದ್ಧ ಸೋತ ಭಾರತದ ಮೇಲೆ ಪಾಕ್ ಮಾಜಿ ಆಟಗಾರರು ಗರಂ ಆಗಿದ್ದಾರೆ. ಪಾಕ್ ಮಾಜಿ ನಾಯಕ ವಾಕರ್ ಯೂನಿಸ್ ಅವರು ಭಾರತದ ಕ್ರೀಡಾ ಸ್ಫೂರ್ತಿಯ ಬಗ್ಗೆ ಮಾತನಾಡಿದ್ದರು. ಈಗ ಮಾಜಿ ಆಟಗಾರ ಸಿಕಂದರ್ ಬಖ್ತ್ ಅವರು ಆಟದ ನಡುವೆ ಧರ್ಮವನ್ನು ಎಳೆದು ತಂದಿದ್ದಾರೆ.
ಭಾನುವಾರ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 31 ರನ್ ಗಳ ಅಂತರದಲ್ಲಿ ಭಾರತ ಸೋತಿತ್ತು. ಈ ಮೂಲಕ ಪಾಕಿಸ್ತಾನ ಸೆಮಿಫೈನಲ್ಗೆ ಹೋಗುವ ಹಾದಿಯನ್ನು ಕಠಿಣ ಮಾಡಿತ್ತು. ಇದರಿಂದ ಆಕ್ರೋಶಗೊಂಡ ಪಾಕ್ ಅಭಿಮಾನಿಗಳು ಮತ್ತು ಮಾಜಿ ಆಟಗಾರರು ಭಾರತದ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಪಾಕಿನ ಮಾಜಿ ಆಟಗಾರ ಸಿಕಂದರ್ ಬಖ್ತ್ ಅವರು, ಮೊಹಮ್ಮದ್ ಶಮಿ ಧರ್ಮದ ಬಗ್ಗೆ ಮಾತನಾಡಿದ್ದಾರೆ. ಭಾರತದಲ್ಲಿ ನಂಬರ್ ಒನ್ ಬೌಲರ್ ಗಳಿದ್ದಾರೆ. ಆದರೆ ಯಾರೂ ವಿಕೆಟ್ ಪಡೆಯಲು ಯಶಸ್ವಿಯಾಗುತ್ತಿಲ್ಲ. ಆದರೆ ಮೊಹಮ್ಮದ್ ಶಮಿ ಸದ್ದಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಅವರು ಮುಸ್ಲಿಂ ಎಂಬುದು ಒಳ್ಳೆಯ ಸಂಗತಿ ಎಂದು ಹೇಳಿದ್ದಾರೆ.
ಭಾರತ ತಂಡ ವಿಶ್ವಕಪ್ನಲ್ಲೇ ಒಂದು ಅತ್ಯತ್ತಮ ಬೌಲಿಂಗ್ ಪಡೆಯನ್ನು ಹೊಂದಿರುವ ತಂಡ. ಜಸ್ಪ್ರಿತ್ ಬುಮ್ರಾ ಅವರು ವಿಶ್ವದ ನಂಬರ್ ಒನ್ ಬೌಲರ್ ಆದರೆ ಅವರು ವಿಶ್ವಕಪ್ ಪಂದ್ಯದಲ್ಲಿ ವಿಕೆಟ್ ಪಡೆಯುತ್ತಿಲ್ಲ. ಯುಜ್ವೇಂದ್ರ ಚಹಲ್ ಅವರು ಭಾರತದ ವಿಕೆಟ್ ತೆಗೆದುಕೊಳ್ಳುವ ಬೌಲರ್ ಆದರೆ ಅವರು ಕೂಡ ವಿಕೆಟ್ ಪಡೆಯುತ್ತಿಲ್ಲ. ಭಾರತದ ಯಾವ ಬೌಲರ್ ಸಹ ವಿಕೆಟ್ ಪಡೆಯಲು ಆಗುತ್ತಿಲ್ಲ. ಆದರೆ ಮೊಹಮ್ಮದ್ ಶಮಿ ಅವರು ತಮ್ಮ ಕೆಲಸವನ್ನು ಸದ್ದು ಇಲ್ಲದೆ ಮಾಡುತ್ತಿದ್ದಾರೆ. ಮತ್ತು ಅವರು ಒಬ್ಬ ಮುಸ್ಲಿಂ ಎಂಬುವುದು ಒಳ್ಳೆಯ ವಿಚಾರ ಎಂದು ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮಿಂಚಿದ್ದ ಶಮಿ ಟೀಂ ಇಂಡಿಯಾ ಬೌಲರ್ ಗಳನ್ನು ಕಾಡಿದ್ದ ಬೈಸ್ರ್ಟೋವ್ ಹಾಗೂ ನಾಯಕ ಇಯಾನ್ ಮಾರ್ಗನ್ (1 ರನ್) ವಿಕೆಟ್ ಪಡೆದಿದ್ದರು. ಅಲ್ಲದೇ ಇನ್ನಿಂಗ್ಸ್ನ 44 ಓವರ್ ನ ಮೊದಲ ಎಸೆತದಲ್ಲಿ 44 ರನ್ ಗಳಿಸಿದ್ದ ಜೋ ರೂಟ್ ವಿಕೆಟ್ ಪಡೆದರು. ಅಂತಿಮ ಹಂತದಲ್ಲಿ ಬಟ್ಲರ್ (20 ರನ್) ಹಾಗೂ ವೋಕ್ಸ್ (7 ರನ್) ವಿಕೆಟ್ ಪಡೆದು ಇಂಗ್ಲೆಂಡ್ ರನ್ ವೇಗಕ್ಕೆ ಕಡಿವಾಣ ಹಾಕಿದ್ದರು. 10 ಓವರ್ ಬೌಲ್ ಮಾಡಿದ ಶಮಿ 5 ವಿಕೆಟ್ ಪಡೆದು 69 ರನ್ ಬಿಟ್ಟುಕೊಟ್ಟಿದ್ದರು.