ಬೆಂಗಳೂರು: ರಾಜ್ಯದ ಪುರುಷ ಪ್ರಯಾಣಿಕರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಸದ್ಯಕ್ಕೆ ಸಾರಿಗೆ ಬಸ್ ಪ್ರಯಾಣ ದರವನ್ನು ಹೆಚ್ಚಿಸುವ ಯೋಜನೆ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಸಾರಿಗೆ ಸಚಿವ ರಾಮಲಿಂಗರೆಡ್ಡಿ (Ramalinga Reddy) ಮಾತನಾಡಿ, ಈಗ ದರ ಏರಿಕೆ ಮಾಡುವ ಪ್ರಶ್ನೆಯೇ ಇಲ್ಲ, ಮುಂದಿನ ಪರಿಸ್ಥಿತಿ ನೋಡಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಕಳೆದ ವರ್ಷದ ಜನವರಿಯಲ್ಲಿ ಬಸ್ ಪ್ರಯಾಣ ದರವನ್ನು ಶೇಕಡಾ 15ರಷ್ಟು ಹೆಚ್ಚಿಸಲಾಗಿತ್ತು. ಬಳಿಕ ಪ್ರತಿವರ್ಷ ದರ ಪರಿಷ್ಕರಣೆ ಮಾಡುವ ಕುರಿತು ಚರ್ಚೆಗಳು ನಡೆದಿದ್ದವು ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಕ್ರಿಕೆಟ್ ಪಂದ್ಯದ ವೇಳೆ ಜೇನು ದಾಳಿಗೆ ಅಂಪೈರ್ ಸಾವು
ಜಲಮಂಡಳಿ, ವಿದ್ಯುತ್ ದರ ಹಾಗೂ ಮೆಟ್ರೋ ಮಾದರಿಯಲ್ಲಿ ಬಸ್ ದರ ನಿಗದಿ ಮಾಡುವ ಯೋಚನೆಯೂ ಸರ್ಕಾರದ ಮುಂದೆ ಇತ್ತು. ದರ ಏರಿಕೆ ಕುರಿತು ನಿರ್ಧಾರ ಕೈಗೊಳ್ಳಲು ಸಮಿತಿ ರಚನೆ ಮಾಡಿ, ಅದರ ಶಿಫಾರಸು ಆಧಾರದಲ್ಲಿ ದರ ಪರಿಷ್ಕರಣೆ ಮಾಡಲು ಯೋಜಿಸಲಾಗಿತ್ತು. ಆದರೆ ಇನ್ನೂ ಸಮಿತಿ ರಚನೆಯಾಗದ ಕಾರಣ ಸದ್ಯಕ್ಕೆ ದರ ಏರಿಕೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಕನಿಷ್ಠ ಮುಂದಿನ ಆರು ತಿಂಗಳು ಬಸ್ ಪ್ರಯಾಣ ದರ ಹೆಚ್ಚಳದಿಂದ ಪುರುಷ ಪ್ರಯಾಣಿಕರಿಗೆ ನಿರಾಳತೆ ದೊರೆಯಲಿದೆ. ಸಮಿತಿ ರಚನೆಯಾದ ಬಳಿಕ ಮಾತ್ರ ದರ ಏರಿಕೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

