ಬಾಗಲಕೋಟೆ: ಪ್ರಿಯಾಂಕ್ ಖರ್ಗೆ(Priyank Kharge) ಅವರು ಸದಾ ಆರ್ಎಸ್ಎಸ್(RSS) ಬಗ್ಗೆಯೇ ಮಾತನಾಡುತ್ತಾ ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿದ್ದಾರೆ. ಜನ ನಿಮ್ಮನ್ನು ಆರಿಸಿ ಕಳಿಸಿರುವುದು, ಸರ್ಕಾರ ಮಂತ್ರಿ ಮಾಡಿರುವುದು ಆರ್ಎಸ್ಎಸ್ಗೆ ಬೈಯಲು ಅಲ್ಲ ಎಂದು ಮುರುಗೇಶ್ ನಿರಾಣಿ(Murugesh Nirani) ಆಕ್ರೋಶ ಹೊರಹಾಕಿದರು.
ಆರ್ಎಸ್ಎಸ್ ಬಗ್ಗೆ ಮಾತನಾಡಲು ನಿಮಗಾಗಲಿ, ನಿಮ್ಮ ಹೈಕಮಾಂಡ್ ನಾಯಕರಾದ ಸೋನಿಯಾ ಗಾಂಧಿ(Sonia Gandhi) ಹಾಗೂ ರಾಹುಲ್ ಗಾಂಧಿಗಾಗಲಿ (Rahul Gandhi) ಯಾವುದೇ ಯೋಗ್ಯತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಪ್ರಿಯಾಂಕ್ ಖರ್ಗೆ ಅವರ ಸ್ವಕ್ಷೇತ್ರ ಹಾಗೂ ಜಿಲ್ಲೆಯ ಅಭಿವೃದ್ಧಿ ಕುರಿತು ಪ್ರಶ್ನಿಸಿದ ನಿರಾಣಿ, ಅಭಿವೃದ್ಧಿ ವಿಷಯಕ್ಕೆ ಬಂದರೆ ನಿಮ್ಮ ಜಿಲ್ಲೆ, ನಿಮ್ಮ ಕ್ಷೇತ್ರ ಹಾಗೂ ರಾಜ್ಯದ ಎಲ್ಲಾ ಸೆಕ್ಟರ್ಗಳಲ್ಲೂ ನೀವು ಕೊನೆಯ ಸ್ಥಾನದಲ್ಲಿದ್ದೀರಿ. ಮುಖ್ಯವಾಗಿ ಕಲಬುರಗಿ ಜಿಲ್ಲೆ ಇಡೀ ರಾಜ್ಯದಲ್ಲೇ ಶಿಕ್ಷಣ ವ್ಯವಸ್ಥೆಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆರ್ಎಸ್ಎಸ್ ನಿಂದಿಸುವುದನ್ನು ಬಿಟ್ಟು, ನಿಮ್ಮ ಜಿಲ್ಲೆಯ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ಸಮಯ ಮುಡುಪಾಗಿಡಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ನಮ್ಮ ದೇಶದಲ್ಲಿ ಶ್ರೀರಾಮನೇ ಲೆಕ್ಕ ಕೊಡಬೇಕು, ರಾಮನ ಹೆಸ್ರಲ್ಲಿ ರಾಜಕೀಯ ಮಾಡಿದವರು ಲೆಕ್ಕ ಕೊಡಬಾರದ?: ಪ್ರಿಯಾಂಕ್ ಖರ್ಗೆ
ಆರ್ಎಸ್ಎಸ್ ಕಾರ್ಯವೈಖರಿಯನ್ನು ಶ್ಲಾಘಿಸಿದ ಮಾಜಿ ಸಚಿವರು, ತಾಯಿ ಸ್ಥಾನದಲ್ಲಿರುವ ಪವಿತ್ರ ಸಂಸ್ಥೆ ಆರ್ಎಸ್ಎಸ್. ಅಲ್ಲಿನ ಸ್ವಯಂಸೇವಕರು ಅವಿವಾಹಿತರಾಗಿ, ತಮ್ಮ ಮನೆ-ಮನಸ್ಸುಗಳನ್ನು ತೊರೆದು ದೇಶಕ್ಕಾಗಿ ಜೀವ ಕೊಡುವಂತಹ ದೇಶಪ್ರೇಮಿಗಳು. ನಿಮ್ಮ ಕಾಂಗ್ರೆಸ್ನಲ್ಲಿ ಅಂತಹ ಒಬ್ಬರೇ ಒಬ್ಬರು ನಾಯಕರಿದ್ದಾರೆಯೇ? ಆರ್ಎಸ್ಎಸ್ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದರೆ ನನ್ನ ಘನತೆ ಹೆಚ್ಚುತ್ತದೆ ಎಂದು ಪ್ರಿಯಾಂಕ್ ಖರ್ಗೆ ಭಾವಿಸಿದ್ದರೆ, ಅವರಿಗಿಂತ ದೊಡ್ಡ ಮೂರ್ಖರು ಯಾರೂ ಇಲ್ಲ” ಎಂದು ಕಟುವಾಗಿ ಟೀಕಿಸಿದರು.
ಯಾವುದೇ ಕಾರಣಕ್ಕೂ ಇನ್ಮುಂದೆ ಆರ್.ಎಸ್.ಎಸ್ ಬಗ್ಗೆ ವೈಯಕ್ತಿಕವಾಗಿ ಮಾತನಾಡಬಾರದು. ನೀವೇನಾದರೂ ಮತ್ತೆ ಆರ್.ಎಸ್.ಎಸ್ ತಂಟೆಗೆ ಬಂದರೆ ಮುರುಗೇಶ್ ನಿರಾಣಿ ಅಥವಾ ನಮ್ಮ ಪಕ್ಷದ ಬೇರೆ ಮಾಜಿ ಮಂತ್ರಿಗಳು ಸುಮ್ಮನೆ ಕೂರುವುದಿಲ್ಲ. ಬರುವ ದಿನಗಳಲ್ಲಿ ನಿಮ್ಮ ಹೇಳಿಕೆಗಳ ವಿರುದ್ಧ ಇಡೀ ಕರ್ನಾಟಕ ರಾಜ್ಯಾದ್ಯಂತ ಉಗ್ರವಾದ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
