– ಎಐ ಶೃಂಗಸಭೆಯಲ್ಲಿ ವೀರ ಸಾವರ್ಕರ್ ಸ್ಮರಿಸಿದ ಪ್ರಧಾನಿ
ನವದೆಹಲಿ: ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ (Emmanuel Macron) ಇಂದು ಭಾರತಕ್ಕೆ ಆಗಮಿಸಿದ್ದಾರೆ. ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಫ್ರೆಂಚ್ ಅಧ್ಯಕ್ಷರನ್ನ ಮಹಾರಾಷ್ಟ್ರ ರಾಜ್ಯಪಾಲ ಆಚಾರ್ಯ ದೇವವ್ರತ್ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಸ್ವಾಗತಿಸಿದರು.
ಮಧ್ಯಾಹ್ನದ ವೇಳೆಗೆ ಪ್ರಧಾನಿ ಮೋದಿ (Narendra Modi) – ಎಮ್ಯಾನುಯೆಲ್ ಮ್ಯಾಕ್ರನ್ ಮುಂಬೈನ ಲೋಕಭವನದಲ್ಲಿ ಭೇಟಿಯಾಗಿ ರಕ್ಷಣೆ, ಎಐ ಮತ್ತು ಬಾಹ್ಯಾಕಾಶ ಕ್ಷೇತ್ರಗಳ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಿದರು. ಕೃತಕ ಬುದ್ಧಿಮತ್ತೆ ಸಹಕಾರ, ಡಿಜಿಟಲ್ ತಂತ್ರಜ್ಞಾನ, ನಾವೀನ್ಯತೆ, ವಿದ್ಯಾರ್ಥಿಗಳ ಚಲನಶೀಲತೆ, ಸಂಸ್ಕೃತಿ, ರಕ್ಷಣೆ, ಭದ್ರತೆಗೆ ಸಂಬಂಧಿಸಿದಂತೆ ಹಲವು ಒಪ್ಪಂದ (India France Ties) ಮಾಡಿಕೊಳ್ಳಲಾಯಿತು. ಅಲ್ಲದೇ ಫ್ರಾನ್ಸ್ನಿಂದ 114 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವುದು ಸೇರಿದಂತೆ 20ಕ್ಕೂ ಹೆಚ್ಚು ಒಪ್ಪಂದಗಳಿಗೆ ಪ್ರಧಾನಿ ಮೋದಿ ಸಹಿ ಹಾಕಿದರು.
Addressing the joint press meet with President Emmanuel Macron.@EmmanuelMacron https://t.co/FuX0qSUyw7
— Narendra Modi (@narendramodi) February 17, 2026
ಬಳಿಕ ಮಾತಾಡಿದ ಮೋದಿ, ನನ್ನ ಆತ್ಮೀಯ ಸ್ನೇಹಿತ ಅಧ್ಯಕ್ಷ ಮ್ಯಾಕ್ರನ್ ಅವರನ್ನ ಮುಂಬೈಗೆ ಸ್ವಾಗತಿಸಲು ನನಗೆ ಸಂತೋಷವಾಗಿದೆ. ಭಾರತ-ಫ್ರಾನ್ಸ್ ನಾವೀನ್ಯತೆಯ ವರ್ಷವನ್ನ ಪ್ರಾರಂಭಿಸುವುದರೊಂದಿಗೆ, ನಾವು ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನ ಜನರ ಪಾಲುದಾರಿಕೆಯಾಗಿ ಪರಿವರ್ತಿಸುತ್ತಿದ್ದೇವೆ.
ರಕ್ಷಣೆ, ಶುದ್ಧ ಇಂಧನ, ಬಾಹ್ಯಾಕಾಶ, ಸ್ಟಾರ್ಟ್ಅಪ್, ನಿರ್ಣಾಯಕ ಖನಿಜ, ಜೈವಿಕ ತಂತ್ರಜ್ಞಾನಗಳಲ್ಲಿ ಬಲವಾದ ಸಂಪರ್ಕ ನಿರ್ಮಿಸ್ತೇವೆ. ಅದಕ್ಕಾಗಿ ಇಂಡೋ – ಫ್ರೆಂಚ್ ಸೆಂಟರ್ ಫಾರ್ ಎಐ ಇನ್ ಹೆಲ್ತ್, ಇಂಡೋ-ಫ್ರೆಂಚ್ ಸೆಂಟರ್ ಫಾರ್ ಡಿಜಿಟಲ್ ಸೈನ್ಸ್ ಅಂಡ್ ಟೆಕ್ನಾಲಜಿ ಮತ್ತು ನ್ಯಾಷನಲ್ ಸೆಂಟರ್ ಫಾರ್ ಅಲೈಯನ್ಸ್ ಫಾರ್ ಸ್ಕಿಲ್ಲಿಂಗ್ ಇನ್ ಏರೋನಾಟಿಕ್ಸ್ ಸಂಸ್ಥೆಗಳನ್ನ ಪ್ರಾರಂಭಿಸುತ್ತಿದ್ದೇವೆ. ಇವು ಕೇವಲ ಸಂಸ್ಥೆಗಳಲ್ಲ, ಅವು ಭವಿಷ್ಯವನ್ನ ನಿರ್ಮಿಸುವ ವೇದಿಕೆಗಳಾಗಿವೆ. ವಿಶ್ವವು ಈಗ ಅನಿಶ್ಚಿತತೆಯ ಅವಧಿ ಎದುರಿಸುತ್ತಿದೆ. ಈ ಪರಿಸರದಲ್ಲಿ, ಭಾರತ-ಫ್ರಾನ್ಸ್ ಪಾಲುದಾರಿಕೆಯು ಜಾಗತಿಕ ಸ್ಥಿರತೆಗೆ ಒಂದು ಶಕ್ತಿಯಾಗಿದೆ ಎಂದು ಬಣ್ಣಿಸಿದರು.
Speaking at the India-France Innovation Forum in Mumbai. https://t.co/i78YjmvrrL
— Narendra Modi (@narendramodi) February 17, 2026
ಸಾವರ್ಕರ್ ನೆನೆದ ಮೋದಿ
ಕಳೆದ ವರ್ಷ ಮ್ಯಾಕ್ರನ್ ಅವರು ಫ್ರಾನ್ಸ್ನಲ್ಲಿ ನಡೆದ ಎಐ ಕ್ರಿಯಾ ಸಮಿತಿ ಶೃಂಗಸಭೆಗೆ ನನ್ನನ್ನ ಆಹ್ವಾನಿಸಿದ್ದರು. ಆ ಸಮಯದಲ್ಲಿ, ನಾವು ಫ್ರಾನ್ಸ್ನ ಅತಿದೊಡ್ಡ ಬಂದರು, ಫ್ರಾನ್ಸ್ ಮತ್ತು ಇಡೀ ಯುರೋಪ್ಗೆ ಪ್ರಮುಖ ದ್ವಾರವಾದ ಮಾರ್ಸಿಲ್ಲೆಗೆ ಭೇಟಿ ನೀಡಿದ್ದೇವು. ಮೊದಲ ಮಹಾಯುದ್ಧದ ಸಮಯದಲ್ಲಿ ನಮ್ಮ ಭಾರತೀಯ ಸೈನಿಕರು ಯುರೋಪಿನಲ್ಲಿ ಕಾಲಿಟ್ಟ ನಗರ ಮಾರ್ಸಿಲ್ಲೆ. ಅವರ ಶೌರ್ಯದ ಕಥೆಯನ್ನ ಯುರೋಪಿನ ಅನೇಕ ಭಾಗಗಳಲ್ಲಿ ಇನ್ನೂ ಸ್ಮರಿಸಲಾಗುತ್ತಿದೆ. ಮತ್ತು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಬ್ರಿಟಿಷರಿಂದ ತಪ್ಪಿಸಿಕೊಳ್ಳಲು ಸಮುದ್ರಕ್ಕೆ ಹಾರಿದ ಅದೇ ನಗರ ಇದು. ಅವರ ಕ್ರಿಯೆಯು ಭಾರತದ ಸ್ವಾತಂತ್ರ್ಯಕ್ಕಾಗಿ ಅವರ ಅಚಲ ಸಂಕಲ್ಪವನ್ನ ಸಂಕೇತಿಸುತ್ತದೆ. ಕಳೆದ ವರ್ಷ ಮಾರ್ಸಿಲ್ಲೆಯಲ್ಲಿ ಅವರನ್ನ ನೆನಪಿಸಿಕೊಳ್ಳುವ ಮತ್ತು ಅವರಿಗೆ ನನ್ನ ಗೌರವ ಸಲ್ಲಿಸುವ ಅವಕಾಶ ನನಗೆ ಸಿಕ್ಕಿತು. ಈ ಬಾರಿ ಮ್ಯಾಕ್ರನ್ ಅವರು ಎಐ ಇಂಪ್ಯಾಕ್ಟ್ ಶೃಂಗ ಸಭೆಗಾಗಿ ಭಾರತದಲ್ಲಿದ್ದಾರೆ ಎಂದು ನುಡಿದರು.
ಫ್ರಾನ್ಸ್ ಮತ್ತು ಭಾರತದ ಸಹಭಾಗಿತ್ವದಲ್ಲಿ ವಿಶ್ವಾಸಾರ್ಹ ತಂತ್ರಜ್ಞಾನಗಳನ್ನ ಅಭಿವೃದ್ಧಿಪಡಿಸುತ್ತಿದ್ದೇವೆ. ಅಂತಾರಾಷ್ಟ್ರೀಯ ಸೌರ ಒಕ್ಕೂಟ, ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಮತ್ತು ಜಂಟಿ ಅಭಿವೃದ್ಧಿ ಯೋಜನೆಗಳ ಮೂಲಕ ಮಾನವ ಅಭಿವೃದ್ಧಿಯನ್ನ ನಾವು ಖಚಿತಪಡಿಸುತ್ತೇವೆ. ಬಹುಪಕ್ಷೀಯತೆ, ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಸ್ಥಿರತೆ ಮತ್ತು ಸಮೃದ್ಧಿಗಾಗಿ ಪ್ರಯತ್ನಗಳನ್ನ ಬಲಪಡಿಸುವುದನ್ನು ಮುಂದುವರಿಸುತ್ತೇವೆ ಎಂದು ಭರವಸೆ ನೀಡಿದರು.
ಅಧ್ಯಕ್ಷ ಮ್ಯಾಕ್ರನ್ ಮಾತಾಡಿ, 4ನೇ ಬಾರಿ ಆತ್ಮೀಯ ಸ್ವಾಗತಕ್ಕಾಗಿ ನಿಮಗೆ ಧನ್ಯವಾದಗಳು ಸಲ್ಲಿಸುತ್ತೇನೆ. ಭಾರತ ಮತ್ತು ಫ್ರಾನ್ಸ್ ನಡುವಿನ ದ್ವಿಪಕ್ಷೀಯ ಸಂಬಂಧವು ನಿಜವಾಗಿಯೂ ಗಮನಾರ್ಹ ಮತ್ತು ವಿಶಿಷ್ಟವಾಗಿರಲಿದೆ ಅಂದರು.

