ಅಕ್ಷರಧಾಮದಂತೆ ಬೆಂಗಳೂರಿನಲ್ಲಿ 25 ಎಕ್ರೆ ಜಾಗದಲ್ಲಿ ಶರಣ ದರ್ಶನ ನಿರ್ಮಿಸಿ – ಸಿಎಂಗೆ ಸ್ವಾಮೀಜಿಗಳ ಬೇಡಿಕೆ ಏನು?

Public TV
2 Min Read
Siddaramaiah SWAMIJI 3

ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಮಠಾಧೀಶರ ನಿಯೋಗ ಕಾವೇರಿ ‌ನಿವಾಸದಲ್ಲಿ ಭೇಟಿಯಾಗಿ ಹಲವು ಬೇಡಿಕೆ ಇಟ್ಟಿದ್ದಾರೆ‌. ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿತರಾಗಿರುವ ವಿಶ್ವಗುರು ಬಸವೇಶ್ವರರ ವಿಚಾರಧಾರೆಯನ್ನು ಪರಿಣಾಮಕಾರಿಯಾಗಿ ಜನಮಾನಸಕ್ಕೆ ತಲುಪಿಸುವ ನಿಟ್ಟಿನಲ್ಲಿ ಈ ವರ್ಷದ ಬಜೆಟ್ ನಲ್ಲಿ ರೂ 100 ಕೋಟಿ ರೂ. ನೀಡುವ ಜೊತೆಗೆ, ಮುಂದಿನ ನಾಲ್ಕು ವರ್ಷಗಳ ಬಜೆಟ್‌ನಲ್ಲಿ ತಲಾ 100 ಕೋಟಿ ರೂ. ನಂತೆ ಒಟ್ಟು 500 ಕೋಟಿ ರೂ. ಅನುದಾನ ನೀಡಬೇಕು ಎಂದು ಮಠಾಧೀಶರ ನಿಯೋಗ ಮನವಿ ಮಾಡಿದೆ.

Siddaramaiah SWAMIJI 1

ಮಠಾಧೀಶರು‌ ಸಿಎಂ ಭೇಟಿಗೂ ಮುನ್ನ ಈ ಸಂಬಂಧ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ (M.B Patil) ಅವರ ರೇಸ್ ಕೋರ್ಸ್ ರಸ್ತೆಯ ಅಧಿಕೃತ ನಿವಾಸದಲ್ಲಿ ಸಮುದಾಯದ ಸಚಿವರು, ಶಾಸಕರ ಸಭೆ ನಡೆಸಿದ್ದರು. ರಾಜ್ಯದೆಲ್ಲೆಡೆಯಿಂದ ಆಗಮಿಸಿದ್ದ ಸಮುದಾಯದ ಸ್ವಾಮೀಜಿಗಳು, ಶಾಸಕರು, ಮಾಜಿ ಶಾಸಕರು ಹಾಗೂ ಸಂಘ ಸಂಸ್ಥೆಗಳ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡು ಚರ್ಚಿಸಿದರು. ನಂತರ, ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿ ಮನವಿ ಸಲ್ಲಿಸಿದ್ದಾರೆ.

ಯುವ ಪೀಳಿಗೆಗೆ ಬಸವಣ್ಣ ಅವರನ್ನು ಪರಿಚಯಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕೆಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಬೇಕೆಂದು ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ 13ನೇ ಅಖಿಲಭಾರತ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಪರಮಪೂಜ್ಯರು, ಗಣ್ಯರು, ಚಿಂತಕರು, ಅಭಿಪ್ರಾಯಪಟ್ಟಿದ್ದರು. ನಂತರದಲ್ಲಿಯೂ ಈ ಕುರಿತು ಹಲವು ಸಭೆಗಳನ್ನು ನಡೆಸಿ ಹಿಂತಚಿಂತಕರೆಲ್ಲರ ಅಭಿಪ್ರಾಯಗಳನ್ನು ಕ್ರೋಢಿಕರಿಸಲಾಗಿದೆ. ಅದರಂತೆ, ಕಾರ್ಯಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಸಕ್ತ ಸಾಲಿನ ಬಜೆಟ್‌ನಿಂದಲೇ ಅಗತ್ಯ ಅನುದಾನ ಒದಗಿಸಬೇಕು ಎಂದು ಮನವಿ‌ ಮಾಡಿದ್ದಾರೆ.

Siddaramaiah SWAMIJI 2

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಬಸವಣ್ಣನ ಬೃಹತ್ ಪ್ರತಿಮೆ ಪ್ರತಿಷ್ಠಾಪಿಸಬೇಕು. ಜೊತೆಗೆ, ಬೆಂಗಳೂರಿನಲ್ಲಿ 25 ಎಕರೆ ಪ್ರದೇಶದಲ್ಲಿ ಅಕ್ಷರಧಾಮದ ಮಾದರಿಯಲ್ಲಿ ಬೃಹತ್ ‘ಶರಣ ದರ್ಶನ’ ಕೇಂದ್ರ ಸ್ಥಾಪಿಸಿ, ಅಲ್ಲಿ, ಉದ್ಯಾನ, ಗ್ರಂಥಾಲಯ, ಅತಿಥಿಕೇಂದ್ರ, ದಾಸೋಹ ಭವನ, ಸಭಾಂಗಣ ನಿರ್ಮಿಸಿ ಪ್ರವಾಸಿ ತಾಣವನ್ನಾಗಿಸಬೇಕು ಎಂಬುದನ್ನು ಬಾಲ್ಕಿ ಮಠದ ಬಸವಲಿಂಗ ಪಟ್ಟದೇವರು ಸ್ವಾಮೀಜಿ ಅವರು ಎಲ್ಲರ ಪರವಾಗಿ ಮುಖ್ಯಮಂತ್ರಿಯವರ ಗಮನಕ್ಕೆ ತಂದರು.

ಎಲ್ಲ ಶರಣರ ಜನ್ಮ ಸ್ಥಳ, ಐಕ್ಯಸ್ಥಳ ಹಾಗೂ ಇತರೆ ಸ್ಮಾರಕಗಳ ರಕ್ಷಣೆಗಾಗಿ ‘ಪ್ರತ್ಯೇಕ ಶರಣ ಸ್ಮಾರಕ ರಕ್ಷಣೆ ಪ್ರಾಧಿಕಾರ’ ರಚಿಸಬೇಕು. ಬಸವಕಲ್ಯಾಣದಲ್ಲಿ ನಿರ್ಮಿಸುತ್ತಿರುವ ಅನುಭವ ಮಂಟಪದ ಸದ್ಬಳಕೆಯಾಗಲು ಅಲ್ಲಿಯೇ ‘ವಚನ ವಿಶ್ವವಿದ್ಯಾಲಯ’ ಮತ್ತು ಸಂಶೋಧನ ಕೇಂದ್ರ ಆರಂಭಿಸಬೇಕು. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ‘ಬಸವಭವನ’ ನಿರ್ಮಿಸಿ, ಅಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬೇಕು. ವಚನ ಸಾಹಿತ್ಯ ಸಂಗ್ರಹ, ಪ್ರಕಟಣೆ, ಮರು ಪ್ರಕಟಣೆ, ಹಸ್ತಪ್ರತಿಗಳ ದಾಖಲೀಕರಣ, ಶರಣ ಕ್ಷೇತ್ರಗಳ ಅಧ್ಯಯನ ಮತ್ತು ದಾಖಲೀಕರಣ, ವಿಚಾರಸಂಕಿರಣ, ಸಮ್ಮೇಳನಗಳು, ವಚನಾಧಾರಿತ ಸಾಂಸ್ಕೃತಿಕ ಕಾರ್ಯಕ್ರಮಗಳು ಇತ್ಯಾದಿ ಚಟುವಟಿಕೆಗಳನ್ನು ನಡೆಸಲು ಶರಣ ಸಾಹಿತ್ಯ ಮತ್ತು ಸಂಸ್ಕೃತಿ ಪ್ರಸಾರಕ್ಕಾಗಿಯೇ ಇರುವ ಸಂಸ್ಥೆಗಳಿಗೆ ಅನುದಾನ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

ಅನುದಾನ ಒದಗಿಸುವ ಮೂಲಕ ಸಾಂಸ್ಕೃತಿಕ ನಾಯಕ ಬಸವಣ್ಣನವರನ್ನು ಮುಂಬರುವ ಪೀಳಿಗೆಗಳಿಗೆ ಪರಿಚಯಿಸುವುದಕ್ಕೆ ಸಂಬಂಧಿಸಿದ ಈ ಕಾರ್ಯಯೋಜನೆಗಳಿಗೆ ಚಾಲನೆ ನೀಡಿ, ಇತಿಹಾಸ ಸದಾ ನೆನಪಿಸಿಕೊಳ್ಳುವಂತಹ ಕಾರ್ಯಕ್ಕೆ ಮುಂದಾಗಬೇಕು ಎಂದು ಮಠಾಧೀಶರು ಮನವಿ ಮಾಡಿದ್ದಾರೆ.

Share This Article