ಐಟಿ ವಲಯದಿಂದ ಅನೇಕ ಪ್ರತಿಭೆಗಳು ಕನ್ನಡ ಸಿನಿಮಾ ರಂಗಕ್ಕೆ ಬಂದಿವೆ. ಅವರಲ್ಲಿ ಕರಿಕಾಡ ಖ್ಯಾತಿಯ ನಟರಾಜ್ ಕೂಡ ಒಬ್ಬರು. ಕರಿಕಾಡ (Karikaada) ಚಿತ್ರದ ನಟನೆಯಿಂದ ಜನಪ್ರಿಯರಾದವರು ಇದೀಗ ಐಟಿ ವಲಯದಲ್ಲಿ ತಮ್ಮ ಕ್ರೇಜ್ ಹೆಚ್ಚಿಸಿಕೊಂಡಿದ್ದಾರೆ. ಜೂನ್ 6ರಂದು ನಟರಾಜ್ ಸಂಭ್ರಮದ ಜನ್ಮದಿನ ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಅವರು ತಮ್ಮ ಖುಷಿ ದ್ವಿಗುಣಗೊಂಡಿರುವುದರ ಕಾರಣವನ್ನು ಬಹಿರಂಗ ಪಡಿಸಿದ್ದಾರೆ.
ಕಾಡ ನಟರಾಜ್ ನಾಯಕರಾಗಿ ನಟಿಸಿ ಜನ ಮನಸೂರೆಗೊಂಡ ಚಿತ್ರ ಕರಿಕಾಡ. ಗಿಲ್ಲಿ ವೆಂಕಟೇಶ್ ನಿರ್ದೇಶನದ ಈ ಚಿತ್ರದಲ್ಲಿ ಕರಿಕಾಡನಾಗಿ ನಟರಾಜ್ ಅಭಿನಯಕ್ಕೆ ವ್ಯಾಪಕ ಪ್ರಶಂಸೆ ದೊರಕಿತ್ತು. ಅದರಲ್ಲೂ ಅಮೆಜಾನ್ ಪ್ರೈಮ್ ನಲ್ಲಿ ರಿಲೀಸಾದ ಬಳಿಕ ನಟರಾಜ್ ಅವರು ಹೆಚ್ಚು ಹೆಸರುವಾಸಿಯಾಗಿದ್ದಾರೆ. ತಮ್ಮ ಅಭಿನಯಕ್ಕೆ ದೊರಕುತ್ತಿರುವ ಪಾಸಿಟಿವ್ ಪ್ರತಿಕ್ರಿಯೆಯ ಖುಷಿಯನ್ನು ನಟರಾಜ್ ತಮ್ಮ ಬರ್ತ್ ಡೇ ಸಂಭ್ರಮದಲ್ಲಿ ಹಂಚಿಕೊಂಡು ಡಬಲ್ ಧಮಾಕದಂತಾಗಿದೆ ಎಂದಿದ್ದಾರೆ.

ಕರಿಕಾಡ ಚಿತ್ರದಲ್ಲಿ ಹಳ್ಳಿ ಯುವಕನಾಗಿ ನಟರಾಜ್ ಅದ್ಭುತ ನಟನೆ ನೀಡಿದ್ದರು. ಮೊದಲ ಚಿತ್ರದಲ್ಲೇ ನಟನೆಯೊಂದಿಗೆ ಸಾಹಸ ಸನ್ನಿವೇಶಗಳಲ್ಲಿ ಕೂಡ ಸ್ವತಃ ಭಾಗಿಯಾಗಿ ನೋಡುಗರು ಹುಬ್ಬೇರಿಸುವಂತೆ ಮಾಡಿದ್ದರು. ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಟರಾಜ್ ಇಂಥದೊಂದು ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿರುವುದು ಸಹೋದ್ಯೋಗಿಗಳಿಂದ ಹಿಡಿದು ಪರಿಚಿತ ವಲಯದಲ್ಲಿ ಅಚ್ಚರಿ ಮೂಡಿಸಿತ್ತು. ಆದರೆ ಪಾತ್ರಕ್ಕೆ ನ್ಯಾಯ ಸಲ್ಲಿಸಿರುವ ರೀತಿಗೆ ಈಗ ವ್ಯಾಪಕ ಮೆಚ್ಚುಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಚಿತ್ರವನ್ನು ಕಾಡ ನಟರಾಜ್ ಅವರೇ ನಿರ್ಮಿಸಿದ್ದರು. ಐಟಿಯಲ್ಲಿ ಕೆಲಸ ಮಾಡುತ್ತಲೇ ಸಿನಿಮಾದಲ್ಲೂ ನಾಯಕರಾದ ನಟರಾಜ್ ಅವರ ಜೊತೆಯಾಗಿ ನಿರೀಕ್ಷಾ ಶೆಟ್ಟಿ ನಾಯಕಿಯಾಗಿ ನಟಿಸಿರುವ ಕರಿಕಾಡದಲ್ಲಿ ಬಲರಾಜ್ ವಾಡಿ, ಯಶ್ ಶೆಟ್ಟಿ, ವಿಜಯ್ ಚೆಂಡೂರ್ ಮೊದಲಾದವರ ಪಾತ್ರಗಳು ಕೂಡ ಚಿತ್ರದ ಹೈಲೈಟ್ ಆಗಿತ್ತು.
