ಬೆಂಗಳೂರು: ಕೊರೊನಾ ಸಂಕಷ್ಟದಿಂದಾಗಿ ಒಂದು ಹೊತ್ತಿನ ಊಟಕ್ಕೆ ಪರದಾಡುವ ಪರಿಸ್ಥಿತಿ ಇರುವಾಗ ಇಲ್ಲೊಂದು ಸಂಸ್ಥೆಯ ಪ್ರಾಣಿ ಪ್ರೀಯರು ಬೀದಿ ನಾಯಿಗಳಿಗೆ ಊಟವನ್ನು ನೀಡುತ್ತಾ ಮಾನವೀಯತೆಯನ್ನು ಮೆರೆಯುತ್ತಿದ್ದಾರೆ.
ಲಾಕ್ಡೌನ್ ಎಫೆಕ್ಟ್ ನಿಂದಾಗಿ, ಆಹಾರಕ್ಕಾಗಿ ಪ್ರಾಣಿ, ಪಕ್ಷಿಗಳು ಪರದಾಡುವಂತಾಗಿದೆ. ತುತ್ತು ಅನ್ನ, ಬೊಗಸೆ ನೀರಿಗಾಗಿ ಬೀದಿ ನಾಯಿಗಳು, ಪಕ್ಷಿಗಳು ಅಲೆದಾಡುತ್ತಿವೆ. ಬೀದಿನಾಯಿಗಳಿಗೆ ಊಟ ಹಾಕೋರು ಇಲ್ಲ. ಇದನ್ನ ಅರಿತ ರಾಷ್ಟ್ರೀಯ ಮಾನವ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯ ಸಂಸ್ಥೆ, ನಗರದ ಹಲವು ಭಾಗಗಳಿಗೆ ತೆರಳಿ ಬೀದಿ ನಾಯಿಗಳಿಗೆ ಊಟ ನೀಡುತ್ತಿದ್ದಾರೆ.
ನಗರದ ಅಗ್ರಹಾರ ದಾಸರಹಳ್ಳಿ, ರಾಜಾಜಿನಗರ ಸೇರಿದಂತೆ ಹಲವೆಡೆ ಪ್ರತಿದಿನ 150ಕ್ಯೂ ಹೆಚ್ಚು ಬೀದಿ ನಾಯಿಗಳಿಗೆ ಮೂರು ಹೊತ್ತಿನ ಊಟ ನೀಡುತ್ತಿದ್ದಾರೆ. ಜೊತೆಗೆ ಪುಟ್ಟ ಪುಟ್ಟ ನಾಯಿ ಮರಿಗಳಿಗೂ ಊಟ ವಿತರಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಡಿ ಬಾಸ್ ಮನವಿಗೆ ಭರ್ಜರಿ ಪ್ರತಿಕ್ರಿಯೆ-2 ದಿನದಲ್ಲಿ 25 ಲಕ್ಷ ಸಂಗ್ರಹ
ಮನುಷ್ಯರಿಗೆ ಊಟ ಸಿಗುತ್ತದೆ. ಆದರೆ ಬೀದಿ ನಾಯಿಗಳು ಊಟ ಸಿಗದೇ ಪರದಾಡುತ್ತಿವೆ. ಅದರಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಕೈಗಾರಿಕೆಗಳು ಆರಂಭವಾಗದೇ ಇರೋದ್ರಿಂದ ಹಸಿವಿನಿಂದ ಸಾಯುತ್ತಿವೆ. ಹೀಗಾಗಿ ಪ್ರಾಣಿಗಳಿಗೆ ಆಹಾರವನ್ನು ನೀಡುತ್ತಿದ್ದೇವೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯ ಸಂಸ್ಥೆಯ ಅಧ್ಯಕ್ಷ, ಅಭಿಷೇಕ್ ಹೇಳಿದ್ದಾರೆ.