ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ ರಾಗಿಣಿ ವಿಚಾರ ಇಂದು ಪ್ರಸ್ತಾಪಗೊಂಡಿತು.
ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ಸಭೆಯಲ್ಲಿ ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಪ್ರಕರಣದ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ಕೆಲ ಶಾಸಕರು ನಟಿ ರಾಗಿಣಿ ಕಾಂಗ್ರೆಸ್ ಸೇರಲು ಸಿದ್ಧವಾಗಿದ್ದರು ವಿಷಯ ಪ್ರಸ್ತಾಪ ಮಾಡಿದರು ಎಂಬ ವಿಷಯ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.
ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿದ ಶಾಸಕರು ಈ ವಿಚಾರದ ಬಗ್ಗೆ ಮಾತನಾಡುತ್ತಿದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಮಧ್ಯ ಪ್ರವೇಶಿಸಿ, ಅಂತದ್ದು ಏನಿಲ್ಲ. ಈಶ್ವರ್ ಖಂಡ್ರೆಯನ್ನು ಭೇಟಿ ಮಾಡಿದ್ದಳಂತೆ ಅಷ್ಟೇ ಎಂದು ತಿಳಿಸಿದರು. ಇದನ್ನೂ ಓದಿ: ದಿಗಂತ್, ಐಂದ್ರಿತಾ ಮಧ್ಯರಾತ್ರಿ ದೊಡ್ಡ ಸಂಭ್ರಮಾಚರಣೆ ಮಾಡಿದ್ರು – ಸುಚೇಂದ್ರ ಪ್ರಸಾದ್
ಈ ಸಂದರ್ಭದಲ್ಲಿ ಈಶ್ವರ್ ಖಂಡ್ರೆ ಮಾತನಾಡಿ, 2-3 ತಿಂಗಳ ಹಿಂದೆ ನನ್ನನ್ನು ಬಂದು ಭೇಟಿಯಾಗಿದ್ದರು. ಪಕ್ಷ ಸೇರ್ಪಡೆಯ ಬಗ್ಗೆ ಮಾತನಾಡಿದರು. ಈಗ ನೀವು ಬಿಜೆಪಿಯಲ್ಲಿ ಇದ್ದೀರಿ ನೀವು ಅಲ್ಲೇ ಇರಿ ಎಂದು ಹೇಳಿದೆ. ಇದಕ್ಕೆ ರಾಗಿಣಿ, ಇಲ್ಲಿ ನನಗೆ ಯಾವುದೇ ಅವಕಾಶ ಇಲ್ಲ. ನಾನು ಕಾಂಗ್ರೆಸ್ ಸೇರುತ್ತೇನೆ. ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಅವಕಾಶ ಇದೆ ಅಂತ ಅವರೇ ಹೇಳಿದರು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಹಿರಿಯ ನಾಯಕರ ಅಭಿಪ್ರಾಯ ಕೇಳಿ ಹೇಳುತ್ತೇನೆ. ಕೊರೊನಾ ಕಡಿಮೆ ಆಗಲಿ ಮತ್ತೆ ನೋಡೋಣ ಎಂದಿದ್ದೆ ಎಂದು ಈಶ್ವರ್ ಖಂಡ್ರೆ ಮಾತುಕತೆಯ ವಿಚಾರವನ್ನು ನಾಯಕರ ಗಮನಕ್ಕೆ ತಂದರು
ರಾಗಿಣಿ ಬಿಜೆಪಿ ಸದಸ್ಯೆ ಎಂಬ ಸುದ್ದಿಗೆ ಈ ಹಿಂದೆ ಪ್ರತಿಕ್ರಿಯಿಸಿದ್ದ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್, ರಾಗಿಣಿ ದ್ವಿವೇದಿ ಬಿಜೆಪಿ ಸದಸ್ಯೆ ಅಲ್ಲ. ರಾಗಿಣಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು ಎಂದು ಹೇಳಿದ್ದರು.
ಬಿಜೆಪಿ ನಾಯಕರ ಜೊತೆ ರಾಗಿಣಿ ಪ್ರಚಾರ ಮಾಡುತ್ತಿರುವ ಫೋಟೋ, ವಿಡಿಯೋವನ್ನು ಕಾಂಗ್ರೆಸ್ ಬಿಟ್ಟಿದ್ದರೆ, ಬಿಜೆಪಿ ಕೈ ನಾಯಕರ ಜೊತೆ ರಾಗಿಣಿ ಇರುವ ಫೋಟೋವನ್ನು ಪ್ರಕಟಿಸಿ ತಿರುಗೇಟು ನೀಡಿತ್ತು.