ಹಾಸನ: ಕಾಡಾನೆಯನ್ನು (Elephant) ಟ್ರ್ಯಾಕ್ ಮಾಡುತ್ತಿದ್ದ ವೇಳೆ ಕಾಫಿ ತೋಟದೊಳಗೆ ಅರಣ್ಯ ಇಲಾಖೆಯ (Forest Department) ಇಟಿಎಫ್ ಸಿಬ್ಬಂದಿಯನ್ನು ಒಂಟಿಸಲಗವೊಂದು ಹಿಮ್ಮೆಟ್ಟಿಸಿದ ಘಟನೆ ಸಕಲೇಶಪುರ (Sakleshpur) ತಾಲ್ಲೂಕಿನ, ಯಡೇಹಳ್ಳಿ ಗ್ರಾಮದಲ್ಲಿ ನಡೆದಿದೆ.
ಆನೆ ಕಾರ್ಯಪಡೆ ಸಿಬ್ಬಂದಿ ಕಾಡಾನೆಗಳ ಚಲನವಲನ ಗಮನಿಸುತ್ತಿದ್ದ ವೇಳೆ ಕರಡಿ ಹೆಸರಿನ ಒಂಟಿಸಲಗ ಘೀಳಿಡುತ್ತಾ ಇಟಿಎಫ್ ಸಿಬ್ಬಂದಿಯನ್ನು ಅಟ್ಟಿಸಿಕೊಂಡು ಹೋಗಿದೆ.
ಕೂಡಲೇ ಸ್ಕೂಟಿಯನ್ನು ಬಿಟ್ಟು ಓಡಿ ಹೋಗಿ ಇಟಿಎಫ್ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಂತರ ಕೆಲಕಾಲ ಕಾಫಿ ಗಿಡದ ಮರೆಯಲ್ಲಿ ನಿಂತ ಕಾಡಾನೆ ಮುಂದೆ ಸಾಗಿದೆ. ಮರದ ಮೇಲೆ ಕುಳಿತು ಕಾಡಾನೆಯ ವಿಡಿಯೋವನ್ನು ಇಟಿಎಫ್ ಸಿಬ್ಬಂದಿ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಇದನ್ನೂ ಓದಿ: ಮೈದಾನಕ್ಕೆ ನುಗ್ಗಿ ವಿರಾಟ್ ಪಾದ ಮುಟ್ಟಿ, ಅಪ್ಪಿಕೊಂಡ – ಭದ್ರತೆ ಉಲ್ಲಂಘಿಸಿದ ಕೊಹ್ಲಿ ಅಪ್ಪಟ ಅಭಿಮಾನಿಗೆ ಸಂಕಷ್ಟ
ಇನ್ನೊಂದೆಡೆ ಬೇಲೂರು (Beluru) ತಾಲೂಕಿನ ಮತ್ತಾವರ ಗ್ರಾಮದಲ್ಲಿ ವಸಂತ್ ಎಂಬುವವರನ್ನು ಬಲಿ ಪಡೆದಿದ್ದ ನರಹಂತಕ ಸೀಗೆ ಹೆಸರಿನ ಕಾಡಾನೆ ಸೆರೆಗೆ ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಈಗಾಗಲೇ ಅರಣ್ಯ ಇಲಾಖೆ ಆರ್ಆರ್ಟಿ ಹಾಗೂ ಇಟಿಎಫ್ ಸಿಬ್ಬಂದಿ ಕಾಡಾನೆ ಚಲನವಲನ ಗಮನಿಸುತ್ತಿದ್ದು, ಮಂಗಳವಾರದಿಂದ ಕಾಡಾನೆ ಸೆರೆ ಕಾರ್ಯಾಚರಣೆ ಮುಂದುವರೆಯಲಿದೆ.
ಶನಿವಾರದಿಂದ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭಗೊಂಡಿದ್ದು, ಭಾನುವಾರ ಮತ್ತು ಇಂದು ಎರಡು ದಿನ ಅರಣ್ಯ ಇಲಾಖೆ ಬಿಡುವು ನೀಡಿದ್ದು ಉಪಟಳ ನೀಡುತ್ತಿರುವ ಪುಂಡಾನೆಗಳನ್ನು ಸೆರೆ ಹಿಡಿಯಲು ಇಟಿಎಫ್ ಸಿಬ್ಬಂದಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ.