ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ಗೃಹಿಣಿಯೊಬ್ಬರು ಗಂಡ ಬೇಕೆಂದು ಪತಿಯ ಮನೆಯ ಮುಂದೆ ಧರಣಿ ಕುಳಿತಿದ್ದಾರೆ.
ವೇದ ಎಂಬವರೇ ಪತಿ ಮನೆಯ ಮುಂದೆ ಧರಣಿ ಕುಳಿತ ಗೃಹಿಣಿ. ಹೊಳೆಗೆರೆ ಗ್ರಾಮದ ವೇದರನ್ನು ಒಂದೂವರೆ ವರ್ಷದ ಹಿಂದೆ ಶೆಟ್ಟಿಹಳ್ಳಿ ಗ್ರಾಮದ ಮಂಜುನಾಥ್ ಅವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಕೂಡ ಎರಡೂ ಗ್ರಾಮಸ್ಥರ ಗುರು-ಹಿರಿಯರ ಸಮ್ಮುಖದಲ್ಲಿಯೇ ನಡೆದಿತ್ತು.
ಆದರೆ ಮದುವೆಯಾದ 3 ತಿಂಗಳ ನಂತರ ಪತಿ ಮಂಜುನಾಥ್ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ತವರು ಮನೆ ಸೇರಿದ್ದರು. ಈ ಸಂಬಂಧ ಹಿರಿಯರ ಸಮ್ಮುಖದಲ್ಲಿ ನ್ಯಾಯ ಪಂಚಾಯ್ತಿ ಮಾಡಿದರೂ ಸಂಸಾರ ಸರಿಯಾಗಿರಲಿಲ್ಲ. ಇನ್ನು ವರದಕ್ಷಿಣೆ ತರಲು ಸಾಧ್ಯವಾಗದೇ ಇದ್ದಲ್ಲಿ ವಿಚ್ಛೇದನ ಪತ್ರಕ್ಕೆ ಸಹಿ ಹಾಕುವಂತೆ ಬೆದರಿಕೆ ಹಾಕಲಾಗುತ್ತಿದೆ. ಈ ಸಂಬಂಧ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ, ನನ್ನ ಪತಿಯೊಂದಿಗೆ ಸಂಸಾರ ನಡೆಸಲು ಅವಕಾಶ ಕಲ್ಪಿಸಬೇಕೆಂದು ದೂರು ದಾಖಲಿಸಿದ್ದೇನೆ. ಇದೂವರೆಗೂ ಪೊಲೀಸರು ಮಾತ್ರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ವೇದ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸದ್ಯ ನನಗೆ ನನ್ನ ಗಂಡ ಬೇಕೆಂದು ವೇದ ಪತಿ ಮಂಜುನಾಥ್ ಮನೆಯ ಮುಂದೆ ಧರಣಿ ಕುಳಿತಿದ್ದಾರೆ.