ಹಾಸನ: ವರದಕ್ಷಿಣೆಗಾಗಿ (Dowry) ಪತ್ನಿಯನ್ನು ಕೊಲೆ ಮಾಡಿ ನಂತರ ಮೃತದೇಹವನ್ನು ಆಸ್ಪತ್ರೆಯಲ್ಲಿ ಇಟ್ಟು ಪತಿ ಎಸ್ಕೇಪ್ ಆದ ಘಟನೆ ಚನ್ನರಾಯಪಟ್ಟಣದ (Channarayapatna) ಕಂಚಾಗಾರ ಬೀದಿಯಲ್ಲಿ ನಡೆದಿದೆ.
ಗುಲ್ಷನ್ ಬಾನು (34) ಕೊಲೆಯಾದ ಮಹಿಳೆ. ಪತಿ ಸೈಫ್ ಅಲಿಖಾನ್ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಕಳೆದ 14 ವರ್ಷಗಳ ಹಿಂದೆ ಹಾಸನದ (Hassan) ಚಿಪ್ಪಿನಕಟ್ಟೆಯ ಗುಲ್ಷನ್ ಬಾನು, ಚನ್ನರಾಯಪಟ್ಟಣದ ಸೈಫ್ ಅಲಿಖಾನ್ ಜೊತೆ ವಿವಾಹವಾಗಿದ್ದರು. ದಂಪತಿಗೆ ಎರಡು ಗಂಡು ಮಕ್ಕಳಿದ್ದು ಸೈಫ್ಅಲಿಖಾನ್ ಗಾರೆ ಕೆಲಸ ಮಾಡಿಕೊಂಡಿದ್ದ. ಹಣಕ್ಕಾಗಿ ಮಕ್ಕಳನ್ನು ಮಾರಾಟ ಮಾಡಿದ್ದ ಎಂದು ಆರೋಪಿಲಾಗಿದೆ. ಇದನ್ನೂ ಓದಿ: 20 ಲಕ್ಷ ಮೌಲ್ಯದ ಷೇರಿಗಾಗಿ ತ್ವಿಶಾ ಶರ್ಮಾಗೆ ಕಿರುಕುಳ ನೀಡಿದ್ರಾ ಅತ್ತೆ ನಿವೃತ್ತ ಜಡ್ಜ್?
ಮದುವೆ ಎರಡು ವರ್ಷ ದಂಪತಿ ಅನ್ಯೋನ್ಯವಾಗಿದ್ದರು. ನಂತರ ವರದಕ್ಷಿಣೆ ಹಣ ತರುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಪತ್ನಿಗೆ ಮನಬಂದಂತೆ ಹಲ್ಲೆ ನಡೆಸುತ್ತಿದ್ದ. ಈ ಸಂಬಂಧ ಚನ್ನರಾಯಪಟ್ಟಣ ಹಾಗೂ ಹಾಸನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೂ ಸೈಫ್ ಅಲಿಖಾನ್ ಬದಲಾಗಿರಲಿಲ್ಲ. ಮೂರ್ನಾಲ್ಕು ಬಾರಿ ಕುಟುಂಬಸ್ಥರು ರಾಜಿ ಪಂಚಾಯ್ತಿ ಮಾಡಿದ್ದರೂ ಸಹ ಹಣಕ್ಕಾಗಿ ಪೀಡಿಸುತ್ತಲೇ ಇದ್ದ.
ಮಗಳ ಸ್ಥಿತಿ ಕಂಡ ಪೋಷಕರು ಅಳಿಯನಿಗೆ 50,000 ರೂ. ಹಣ ಹಾಗೂ ಒಂದು ಆಟೋ ಕೊಡಿಸಿದ್ದರು. ಆದರೆ ಕೆಲ ದಿನಗಳ ನಂತರ ಹಣಕ್ಕಾಗಿ ಆಟೋವನ್ನು ಮಾರಾಟ ಮಾಡಿದ್ದ. ಮೇ 28 ರಂದು ಬಕ್ರಿದ್ ಹಬ್ಬವಿದೆ, ಹಬ್ಬಕ್ಕೆ ಹಣವಿಲ್ಲ ಎಂದು ಪತ್ನಿ ಜೊತೆ ಜಗಳ ತೆಗೆದಿದ್ದ. ಜಗಳ ತಾರಕಕ್ಕೇರಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ. ನಂತರ ಚನ್ನರಾಯಪಟ್ಟಣ ಆಸ್ಪತ್ರೆಗೆ ಆಟೋದಲ್ಲಿ ಮೃತದೇಹ ತಂದಿಟ್ಟು ಪರಾರಿಯಾಗಿದ್ದಾನೆ.
ಆಸ್ಪತ್ರೆಯಲ್ಲಿ ಗುಲ್ಷನ್ಬಾನು ಸಂಬಂಧಿಕರು ಮೃತದೇಹ ನೋಡಿ ಆಕೆಯ ಪೋಷಕರಿಗೆ ವಿಷಯ ತಿಳಿಸಿದ್ದರು. ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು 24 ಗಂಟೆ ಕಳೆದರು ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ ಎಂದು ಮಹಿಳೆಯ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ ಆರೋಪ – ನೇಣು ಬಿಗಿದು ಕಾನ್ಸ್ಟೇಬಲ್ ಪತ್ನಿ ಆತ್ಮಹತ್ಯೆ
