ಶ್ರೀನಗರ: ಮಸೀದಿಯಲ್ಲಿ ಧ್ವನಿವರ್ಧಕ ಹಾಗೂ ಹಲಾಲ್ ಮಾಂಸವನ್ನು ಯಾಕೆ ನಿಷೇಧಿಸಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಪ್ರಶ್ನಿಸಿದ್ದಾರೆ.
ಇಂದಿನ ಭಾರತವು ಜಮ್ಮು ಮತ್ತು ಕಾಶ್ಮೀರವನ್ನು ಒಪ್ಪಿಕೊಂಡ ದೇಶವಾಗಿಲ್ಲ. ಈ ದೇಶದಲ್ಲಿ ಮುಸ್ಲಿಮರ ಧಾರ್ಮಿಕ ಹಕ್ಕುಗಳು ರಕ್ಷಣೆಯಾಗುವುದಿಲ್ಲ ಎಂದು ಜನರಿಗೆ ತಿಳಿದಿದ್ದರೆ ಈ ರೀತಿಯ ಘಟನೆಗಳು ನಡೆಯುತ್ತಿರಲಿಲ್ಲ ಎಂದು ಹಿಜಬ್, ಹಲಾಲ್, ಧ್ವನಿವರ್ಧಕ ಮೊದಲಾದ ವಿಚಾರಗಳಿಗೆ ಎದ್ದಿರುವ ಕೋಮುಗಲಭೆ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಇನ್ನೂ ಮುಗಿದಿಲ್ಲ, ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಿ: ಉದ್ಧವ್ ಠಾಕ್ರೆ
ಪ್ರತಿಯೊಂದು ಧರ್ಮವನ್ನು ಸಮಾನವಾಗಿ ಪರಿಗಣಿಸುವ ದೇಶಕ್ಕೆ ನಾವು ಸೇರಿಕೊಂಡೆವು. ಒಂದು ಧರ್ಮಕ್ಕೆ ಪ್ರಾಶಸ್ತ್ಯ ಸಿಗುತ್ತದೆ ಮತ್ತು ಇತರರನ್ನು ಹತ್ತಿಕ್ಕಲಾಗುತ್ತದೆ ಎಂದು ನಮಗೆ ಆಗ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.
ಅದು ತಿಳಿದಿದ್ದರೆ ಬಹುಶಃ ನಮ್ಮ ನಿರ್ಧಾರ ಬೇರೆಯೇ ಆಗುತ್ತಿತ್ತು. ಪ್ರತಿಯೊಂದು ಧರ್ಮಕ್ಕೂ ಸಮಾನ ಹಕ್ಕಿದೆ ಎಂದು ಹೇಳಿದ ನಂತರ ಪ್ರಜ್ಞಾಪೂರ್ವಕವಾಗಿ ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೇವಾಲಯಗಳನ್ನು ಧ್ವಂಸಗೊಳಿಸಿ ಶಾಂತಿಯನ್ನು ಕದಡುತ್ತಿದೆ: ಕಾಂಗ್ರೆಸ್ ವಿರುದ್ಧವೇ ಮುಸ್ಲಿಮರಿಂದ ದೂರು
ನಾವು ಮಸೀದಿಗಳಲ್ಲಿ ಏಕೆ ಧ್ವನಿವರ್ಧಕಗಳನ್ನು ಬಳಸಬಾರದು? ಇತರ ಧಾರ್ಮಿಕ ಸ್ಥಳಗಳಿಗೆ ಅದನ್ನು ಬಳಸುವ ಹಕ್ಕಿದ್ದರೆ, ಮಸೀದಿಗಳಿಗೆ ಏಕೆ ಬಳಸಬಾರದು ಎಂದು ಪ್ರಶ್ನಿಸಿದ್ದಾರೆ.
ಹಲಾಲ್ ಮಾಂಸವನ್ನು ಮಾರಾಟ ಮಾಡಬೇಡಿ ಎಂದು ನೀವು ನಮಗೆ ಯಾಕೆ ಹೇಳುತ್ತೀರಿ? ನಮ್ಮ ಧರ್ಮವು ಹಲಾಲ್ ಮಾಂಸವನ್ನು ತಿನ್ನಲು ಹೇಳುತ್ತದೆ. ನೀವು ಅದನ್ನು ಏಕೆ ನಿಲ್ಲಿಸುತ್ತಿದ್ದೀರಿ? ಹಲಾಲ್ ತಿನ್ನುವಂತೆ ನಾವು ನಿಮ್ಮನ್ನು ಒತ್ತಾಯಿಸುತ್ತಿಲ್ಲ. ಯಾವುದೇ ಮುಸಲ್ಮಾನರು ಹಲಾಲ್ ತಿನ್ನುವಂತೆ ನಿಮ್ಮನ್ನು ಒತ್ತಾಯಿಸಿದ್ದಾರೆಯೇ? ನೀವು ತಿನ್ನಲು ಇಷ್ಟಪಡುವ ರೀತಿಯಲ್ಲಿ ನೀವು ತಿನ್ನುತ್ತೀರಿ. ನಾವು ಇಷ್ಟಪಡುವ ರೀತಿಯಲ್ಲಿ ನಾವು ಮಾಡುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆಯು ಅಲ್ಪಸಂಖ್ಯಾತರ ವಿರೋಧಿ ಕ್ರಮ: ಮುಸ್ಲಿಂ ಕಾನೂನು ಮಂಡಳಿ
ದೇವಸ್ಥಾನಗಳಲ್ಲಿ ಮೈಕ್ ಇರಬಾರದು ಎಂದು ನಾವು ನಿಮಗೆ ಹೇಳುವುದಿಲ್ಲ. ದೇವಸ್ಥಾನ, ಗುರುದ್ವಾರಗಳಲ್ಲಿ ಬಳಸುವ ಮೈಕ್ಗಳಿಗೆ ನಿಮ್ಮ ವಿರೋಧವಿಲ್ಲ. ಆದರೆ ನೀವು ನಮ್ಮ ಮೈಕ್ ವಿಚಾರವಾಗಿ ಮಾತ್ರ ಗಲಾಟೆ ಮಾಡುತ್ತೀರಿ. ನೀವು ನಮ್ಮ ಧರ್ಮದಿಂದ ಜರ್ಜರಿತರಾಗುತ್ತೀರಿ. ನಾವು ಧರಿಸುವ ರೀತಿ, ಪ್ರಾರ್ಥನೆ ಮಾಡುವ ರೀತಿ ನಿಮಗೆ ಇಷ್ಟವಾಗುವುದಿಲ್ಲ ಟೀಕಿಸಿದ್ದಾರೆ.