ಜೈಪುರ: ರಾಜಸ್ಥಾನದಲ್ಲಿ ನಡೆದ ಹಿಂದೂ ದೇವಾಲಯಗಳ ಧ್ವಂಸ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಕಾಂಗ್ರೆಸ್ ನಾಯಕರೊಬ್ಬರು ಈ ಪ್ರದೇಶದಲ್ಲಿ ಗಲಭೆಗಳನ್ನು ಪ್ರಚೋದಿಸಲು ದ್ವೇಷದ ಭಾಷಣ ಹಾಗೂ ಪ್ರಚೋದನೆಯನ್ನು ನೀಡಿದ್ದಾರೆ ಎಂದು ಮುಸ್ಲಿಂ ಗುಂಪು ಇದೀಗ ಆರೋಪಿಸಿದೆ.
ಕಾಂಗ್ರೆಸ್ ಜಿಲ್ಲಾ ಮುಖ್ಯಸ್ಥ ಯೋಗೇಶ್ ಮಿಶ್ರಾ ವಿರುದ್ಧ ಪ್ರಕರಣ ದಾಖಲಿಸಿರುವ ಮುಸ್ಲಿಂ ಸಮುದಾಯ, ರಾಜ್ಗಢದ ವಾತಾವರಣವನ್ನು ಹಾಳು ಮಾಡಲು ಮುಂದಾಗಿದ್ದು, ದೇವಾಲಯಗಳನ್ನು ಧ್ವಂಸಗೊಳಿಸುವ ಉಪಾಯವನ್ನು ಬಳಸಿಕೊಂಡಿದೆ ಎಂದು ಆರೋಪಿಸಿದೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ಬೀದಿಗಿಳಿದ ಬುಲ್ಡೋಜರ್ – 300 ವರ್ಷ ಹಳೆಯ ಶಿವಮಂದಿರ ನೆಲಸಮ
ರಾಜ್ಗಢದಲ್ಲಿ ದೇವಾಲಯಗಳನ್ನು ಧ್ವಂಸಗೊಳಿಸಿರುವುದರ ಹಿಂದೆ ಕಾಂಗ್ರೆಸ್ನ ಸಂಪೂರ್ಣ ಪಾತ್ರವಿದೆ. ಒಬ್ಬ ಕಾಂಗ್ರೆಸ್ ಶಾಸಕನ ಹೊಣೆಗಾರಿಕೆ ಇದೆ. ಈ ಪ್ರಕರಣಕ್ಕೂ ಮುಸ್ಲಿಮರಿಗೂ ಯಾವುದೇ ಸಂಬಂಧವಿಲ್ಲ. ದೇವಸ್ಥಾನಗಳನ್ನು ಕೆಡವಲು ನಾವು ಬಯಸುವುದಿಲ್ಲ. ಇದಕ್ಕೆ ಕಾಂಗ್ರೆಸ್ ನೇರ ಕಾರಣ ಎಂದು ಸ್ಥಳೀಯ ಮುಸ್ಲಿಂ ಯುವಕರು ಹೇಳಿದ್ದಾರೆ.
ಯೋಗೇಶ್ ಮಿಶ್ರಾ ಬಗ್ಗೆ ದೂರು ನೀಡಿರುವ ವ್ಯಕ್ತಿ ಸಾಹೂನ್ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ದೇವಾಲಯಗಳನ್ನು ಕೆಡವಿರುವ ವಿಚಾರಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಾಹೂನ್ ಕಾಂಗ್ರೆಸ್ ಜಿಲ್ಲಾ ಮುಖ್ಯಸ್ಥ ಯೋಗೇಶ್ ಮಿಶ್ರಾ ಅಸಾಂವಿಧಾನಿಕ ಹಾಗೂ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ನೀವು ಮಾಡಿರುವ ತಪ್ಪಿಗೆ ನಮ್ಮನ್ನು ದೋಷಿಸಬೇಡಿ – ಮೋದಿ ವಿರುದ್ಧ ಠಾಕ್ರೆ ಕಿಡಿ
ಅಭಿವೃದ್ಧಿಯ ನೆಪದಲ್ಲಿ ರಾಜಸ್ಥಾನ ಸರ್ಕಾರ ಕಳೆದ ಶುಕ್ರವಾರ ಅಲ್ವಾರ್ನ ರಾಜ್ಗಢದಲ್ಲಿರುವ 300 ವರ್ಷಗಳಷ್ಟು ಹಳೆಯ ಶಿವಮಂದಿರ ಸೇರಿದಂತೆ ನಿವಾಸಗಳು ಹಾಗೂ ಇತರ 3 ದೇವಾಲಯಗಳನ್ನು ಬುಲ್ಡೋಜರ್ ಮೂಲಕ ನೆಲಸಮ ಮಾಡಿತ್ತು. ಸ್ಥಳೀಯರು ದೇವಾಲಯಗಳನ್ನು ಧ್ವಂಸಗೊಳಿಸದಂತೆ ಮನವಿ ಮಾಡಿದ್ದರೂ ಅದಕ್ಕೆ ಕಿವಿಗೊಡದೆ ಕೆಡವಲಾಯಿತು. ಇದರಿಂದ ಗ್ರಾಮಸ್ಥರು ಆಕ್ರೋಶಗೊಂಡು ಶಾಸಕರ ವಿರುದ್ಧ ದೂರು ನೀಡಿದ್ದರು.