ತುಮಕೂರು: ಕ್ರಷರ್ ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿದ ಘಟನೆ ತಾಲೂಕಿನ ಊರ್ಡಿಗೆರೆ ಬಳಿಯ ಕುರುವಲ್ಲು ಬಳಿ ನಡೆದಿದೆ.
ತಾಲೂಕಿನ ಅರೇಬಿದ್ದನಹಳ್ಳಿ ನಿವಾಸಿ ರವಿಕುಮಾರ್ ಮೃತ ದುರ್ದೈವಿ. ಅಪಘಾತಕ್ಕೆ ಕ್ರಷರ್ ಲಾರಿಗಳ ಅತಿವೇಗವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೇ ಲಾರಿ-ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ. ಪರಿಣಾಮ ಬೆಂಗಳೂರು-ಕೊರಟಗೆರೆ ಹೆದ್ದಾರಿಯಲ್ಲಿ ಸುಮಾರು 3 ಕಿ.ಮೀ ಸಂಚಾರ ಅಸ್ತವ್ಯಸ್ತವಾಗಿತ್ತು. ಕ್ಯಾತ್ಸಂದ್ರ ಪೊಲೀಸ್ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಊರ್ಡಿಗೆರೆ ಹಾಗೂ ಕುರುವಲ್ಲು ಸುತ್ತಮುತ್ತ ಅಕ್ರಮ ಗಣಿಗಾರಿಕೆ ಹೆಚ್ಚಾಗಿದ್ದು ಸಾರ್ವಜನಿಕರ ಪ್ರಾಣಕ್ಕೆ ಸಂಚಕಾರ ತಂದೊಡ್ಡುತ್ತಿದೆ. ಜಿಲ್ಲಾಡಳಿತ ಈ ಭಾಗದ ಕ್ರಷರ್ ಗಳ ಪರವಾನಗಿ ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ.