ಯಾದಗಿರಿ: ಕ್ಷೇತ್ರದಲ್ಲಿ ನನ್ನನ್ನು ಬಲಿಕಾ ಬಕ್ರಾ ಮಾಡಲಾಗುತ್ತಿದೆ. ಪಕ್ಷ ಬಿಟ್ಟು ಹೋಗಲು ಸದ್ಯ ಎಲ್ಲರಿಗೂ ಒಂದು ಕಾರಣ ಬೇಕಾಗಿದ್ದಕ್ಕೆ ನನ್ನನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಮೇಶ್ ಜಾಧವ್ ಬಗ್ಗೆ ಪ್ರತಿಕ್ರಿಯೆ ನೀಡಿದರು. ಇಲ್ಲಿಯವರೆಗೆ ಉಮೇಶ್ ಜಾದವ್ ನನ್ನ ಕೈಗೆ ಸಿಕ್ಕಿಲ್ಲ ಮತ್ತು ಕರೆ ಮಾಡಿದ್ರು ಸಂಪರ್ಕ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ನಾಯಕರು ಪಕ್ಷ ಬಿಟ್ಟು ಹೋಗಲು ನನ್ನನ್ನು ಬಳಸಿಕೊಳ್ಳುತ್ತಿದ್ದಾರೆ. ನನ್ನನ್ನು ಬಲಿಕಾ ಬಕ್ರಾ ಮಾಡುತ್ತಿದ್ದಾರೆ. ಶಾಸಕರು ಕಾಂಗ್ರೆಸ್ ಬಿಟ್ಟು ಹೋಗಿರೋದಕ್ಕೆ ಅವರ ಕೆಲಸದ ಭಾರವನ್ನು ನಾವು ಹೊತ್ತುಕೊಂಡು ಕರ್ತವ್ಯ ನಿರ್ವಸುತ್ತಿದ್ದೇವೆ. ಪಕ್ಷದಿಂದ ಹೊರಹೋಗಲು ಏನಾದರೂ ಕಾರಣ ಬೇಕಲ್ಲ ಅದಕ್ಕಾಗಿ ನನ್ನನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆಗೆ ಸೋಲಿನ ಭೀತಿ ವಿಚಾರವಾಗಿ ಪ್ರತಿಕ್ರಿಯಿಸಿ, ಯಾದಗಿರಿಯಲ್ಲಿ ನಮ್ಮ ತಂದೆ ಅವರಿಗೆ ಅಪಾರ ಸಂಖ್ಯೆಯ ಬೆಂಬಲಿಗರಿದ್ದಾರೆ. ಅವರಿಗ್ಯಾಕೆ ಸೋಲಿನ ಭೀತಿ ಬರುತ್ತದೆ. ಅವರಿಂದ ಬಿಜೆಪಿಯವರಿಗೆ ಸೋಲಿನ ಭೀತಿ ಇದೆ. ಆದರಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಸಂಪುಟ ಉಪ ಸಮಿತಿ ತಂಡ ಬರ ಅಧ್ಯಯನ ಪ್ರವಾಸ ನಡೆಸುತ್ತಿದ್ದು, ಜಿಲ್ಲೆಯ ಚಕ್ರ ಗ್ರಾಮದಲ್ಲಿ ಸಚಿವ ಬಂಡೆಪ್ಪ ಕಾಂಶೆಂಪುರ, ಪ್ರಿಯಾಂಕ್ ಖರ್ಗೆ ಹಾಗೂ ರಾಜಶೇಖರ ಬಿ ಪಾಟೀಲ್ ಒಳಗೊಂಡ ಸಚಿವರ ತಂಡ ಮತ್ತು ಇತರೆ ಅಧಿಕಾರಿಗಳು ಭೇಟಿ ನೀಡಿ ಬರ ಪರಿಶೀಲನೆ ನಡೆಸಿದ್ದಾರೆ. ಚಕ್ರ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ, ಬೋರವೆಲ್, ಜೋಳದ ಬೆಳೆ ಪರಿಶೀಲಿಸಿದ ತಂಡ, ಇದೇ ಫೆ.4 ರಂದು ಬರ ಪರಿಶೀಲನೆ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಮಿತಿ ಸಲ್ಲಿಸುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv