ಎರಡು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಆ್ಯಸಿಡ್ ದಾಳಿಗೆ ಒಳಗಾಗಿದ್ದ ಸಂತ್ರಸ್ತೆಯು ಇದೀಗ ಚೇತರಿಕೆ ಕಾಣುತ್ತಿದ್ದು, ಈ ನಡುವೆ ಅವರು ನಟ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಲು ಹಾತೊರೆಯುತ್ತಿದ್ದಾರೆ. ಈ ಕುರಿತು ಪಬ್ಲಿಕ್ ಟವಿ ಜೊತೆ ಮಾತನಾಡಿದ್ದ ಆ ಹುಡುಗಿಯ ಕುಟುಂಬ ತಮ್ಮ ಮಗಳು ಸುದೀಪ್ ಅವರ ದೊಡ್ಡ ಅಭಿಮಾನಿಯಾಗಿದ್ದು, ಅವರನ್ನು ಭೇಟಿ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು.
ಸಂತ್ರಸ್ತೆಯ ಬೇಡಿಕೆ ಕುರಿತು ಪಬ್ಲಿಕ್ ಟಿವಿ ಮತ್ತು ಪಬ್ಲಿಕ್ ಟಿವಿ ಡಿಜಿಟಿಲ್ ವರದಿ ಪ್ರಕಟಿಸುವುದರ ಜೊತೆಗೆ ಸುದೀಪ್ ಅವರ ಆಪ್ತರಾದ ಜಾಕ್ ಮಂಜು ಅವರನ್ನು ಸಂಪರ್ಕಿಸಲಾಯಿತು. ಈ ಕುರಿತು ಪ್ರತಿಕ್ರಿಯೆ ನೀಡಿದ ಜಾಕ್ ಮಂಜು, ‘ಆ ಯುವತಿಯು ಐಸಿಯುನಲ್ಲಿ ಇರುವುದರಿಂದ ಅವರನ್ನು ಭೇಟಿ ಮಾಡುವುದು ಕಷ್ಟವಾಗುತ್ತದೆ. ಹೀಗೆ ಭೇಟಿ ಮಾಡಿದರೆ ಅವರಿಗೆ ತೊಂದರೆ. ಹಾಗಾಗಿ ಇಂದು ಫೋನ್ನಲ್ಲಿ ಸಂತ್ರಸ್ತೆಯ ಜೊತೆ ಸುದೀಪ್ ಮಾತನಾಡುತ್ತಾರೆ. ಈ ವಾರದಲ್ಲಿ ವಿಡಿಯೋ ಕಾಲ್ ಮಾಡಿಸುವ ವ್ಯವಸ್ಥೆ ಮಾಡುತ್ತೇನೆ. ಯುವತಿಯು ಹುಷಾರಾಗಿ ಬಂದ ನಂತರ ಮನೆಯಲ್ಲಿ ಭೇಟಿ ಮಾಡಿಸುವುದಾಗಿ’ ಹೇಳಿದ್ದಾರೆ. ಇದನ್ನೂ ಓದಿ:ಆ್ಯಸಿಡ್ ಸಂತ್ರಸ್ತೆಗೆ ನಟ ಕಿಚ್ಚ ಸುದೀಪ್ ನೋಡುವಾಸೆ : ನೋವಿನ ನಡುವೆಯೂ ನಾಲ್ಕು ಬಾರಿ ಸುದೀಪ್ ಹೆಸರು ಹೇಳಿದ ಯುವತಿ
ಸದ್ಯ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ನಿಗದಿಯಂತೆ ಹಲವು ಕಾರ್ಯಕ್ರಮಗಳಲ್ಲಿ ಇಂದು ತೊಡಗಿದ್ದಾರೆ. ಈ ನಡುವೆಯೂ ಆ ಹುಡುಗಿಯ ಜೊತೆ ದೂರವಾಣಿಯ ಮೂಲಕ ಮಾತನಾಡುವುದಾಗಿ ಜಾಕ್ ಮಂಜು ತಿಳಿಸಿದ್ದಾರೆ.