ಮೈಸೂರು: ಅಪರೂಪದ ಕಂಕಣ ಸೂರ್ಯಗ್ರಹಣ ವೀಕ್ಷಿಸಲು ಬಹಳ ಉತ್ಸಾಹಕರಾಗಿದ್ದ ಮೈಸೂರಿನ ಜನರಿಗೆ ನಿರಾಸೆ ಉಂಟಾಗಿದೆ.
ಮೈಸೂರಿನ ಓವೆಲ್ ಮೈದಾನದಲ್ಲಿ ಮೈಸೂರು ಜಿಲ್ಲಾಡಳಿತ ಸಾರ್ವಜನಿಕರು ಸೂರ್ಯ ಗ್ರಹಣ ವೀಕ್ಷಣೆಗಾಗಿ ವ್ಯವಸ್ಥೆ ಮಾಡಿತ್ತು. ಹಲವು ಶಾಲಾ ಕಾಲೇಜಿನ ಸಾವಿರಾರು ಮಕ್ಕಳು ಬಹಳ ಕೂತುಹಲದಿಂದ ಮೈದಾನಕ್ಕೆ ಆಗಮಿಸಿದ್ದರು. ಆದರೆ, ಬಂದವರಿಗೆಲ್ಲಾ ತೀವ್ರ ನಿರಾಸೆ ಉಂಟಾಯಿತು. ಗ್ರಹಣ ಆರಂಭದ ಐದತ್ತು ನಿಮಿಷ ಮಾತ್ರ ಗ್ರಹಣ ಗೋಚರವಾಯಿತು. ನಂತರ ಸಂಪೂರ್ಣವಾಗಿ ಮೋಡ ಕವಿದ ಕಾರಣ ಗ್ರಹಣವನ್ನು ವೀಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಗ್ರಹಣ ಮುಕ್ತಾಯದವರೆಗೂ ಮೋಡ ಕವಿದ ವಾತಾವರಣ ಇತ್ತು. ಹೀಗಾಗಿ, ಮೈಸೂರಿನ ಜನರಿಗೆ ತೀವ್ರ ನಿರಾಸೆ ಉಂಟಾಯಿತು.
ಮೈಸೂರಿನ ಚಾಮುಂಡಿ ಬೆಟ್ಟದ ದೇಗುಲ ಗ್ರಹಣದ ಹಿನ್ನೆಲೆಯಲ್ಲಿ ಬಂದ್ ಆಗಿತ್ತು. ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ದೇವಸ್ಥಾನದ ಬಾಗಿಲು ಬಂದ್ ಆಗಿತ್ತು. ಗ್ರಹಣದ ವೇಳೆ ಭಕ್ತರಿಗೆ ದೇಗುಲ ಪ್ರವೇಶ ನಿರ್ಬಂಧಿಸಲಾಗಿತ್ತು. ಅಲ್ಲದೆ ಪ್ರಸಾದ ವ್ಯವಸ್ಥೆಯನ್ನ ಕಡಿತಗೊಳಿಸಲಾಗಿತ್ತು. ಸೂರ್ಯಗ್ರಹಣ ಮುಕ್ತಾಯದ ಬಳಿಕ ಶುದ್ಧಿ ಕಾರ್ಯ ನಡೆಸಿ ಭಕ್ತರಿಗೆ ಚಾಮುಂಡಿ ದೇವಿಯ ದರ್ಶನ ಭಾಗ್ಯ ಕಲ್ಪಿಸಲಾಯಿತು.