ಮೈಸೂರು: ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಆಗ ನಾನು ಬಿಪಿಎಲ್ ಕಾರ್ಡ್ ಹೊಂದಿದ ಪ್ರತಿಯೊಬ್ಬರಿಗೂ 10 ಕೆ.ಜಿ. ಅಕ್ಕಿ ಕೊಡುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೆ ಅಧಿಕಾರದ ಜಪ ಮಾಡಿದ್ದಾರೆ.
ಕಣಗಲ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ಬಿಜೆಪಿಯಿಂದ ಬೇರೆ ಎಲ್ಲಿ ಹೋಗುತ್ತಾರೆ ಗೊತ್ತಿಲ್ಲ. ಕಳಂಕ ಹೊತ್ತ ವ್ಯಕ್ತಿಯನ್ನು ಶಾಸಕನನ್ನಾಗಿ ಮಾಡಬೇಕಾ, ವಿಶ್ವನಾಥ್ ಅವರಂಥವರು ಸಾರ್ವಜನಿಕ ಜೀವನದಲ್ಲಿ ಇರಬಾರದು. ಯಾವ ಪಕ್ಷದವರನ್ನೂ ವಿಶ್ವನಾಥ್ ನೆಮ್ಮದಿಯಾಗಿ ಇರಲು ಬಿಡುವುದಿಲ್ಲ. ನಾನು ಮುಖ್ಯಮಂತ್ರಿಯಾದಾಗಲೂ ನೆಮ್ಮದಿಯಾಗಿ ಇರಲು ಬಿಡಲಿಲ್ಲ. ಸಿಎಂ ಸ್ಥಾನದಿಂದ ಇಳಿಸಿ ಎಂದು ಪತ್ರ ಬರೆದಿದ್ದ. ಜೆಡಿಎಸ್ ಪಕ್ಷಕ್ಕೆ ಚೂರಿ ಹಾಕಿ ಬೇರೆ ಪಕ್ಷಕ್ಕೆ ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ದಾರಿ ಮಧ್ಯೆ ಸಾಗುವಾಗ ಬೀರತಮ್ಮನ ಹಳ್ಳಿಯಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಸಿದ್ದರಾಮಯ್ಯನವರು ಮಾತನಾಡಿಸಿದರು. ಮಕ್ಕಳು ಶಾಲೆಯಿಂದ ಮನೆಗೆ ಹೋಗುತ್ತಿದ್ದರು. ಆಗ ಸಿದ್ದರಾಮಯ್ಯ ಮಾತನಾಡಿಸಿದರು.
ಮಾತನಾಡಿಸುತ್ತಿದ್ದಂತೆಯೇ ವಿದ್ಯಾರ್ಥಿಗಳು ಹರಿದು ಹೋಗಿದ್ದ ಬ್ಯಾಗ್ ತೋರಿಸಿದರು. ಅಲ್ಲದೆ ಬ್ಯಾಗ್ ಕೊಡಿಸಿ ನಮ್ಮ ಗ್ರಾಮದ ರಸ್ತೆ ಸರಿ ಮಾಡಿಸುವಂತೆ ವಿದ್ಯಾರ್ಥಿಗಳು ಸಿದ್ದರಾಮಯ್ಯ ಬಳಿ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ಗೆ ಈ ಬಗ್ಗೆ ಗಮನಹರಿಸುವಂತೆ ಸೂಚನೆ ನೀಡಿದರು.