ಬೆಂಗಳೂರು/ಮಂಡ್ಯ: ರಾಜ್ಯಾದ್ಯಂತ ಇಂದು ಶ್ರೀರಾಮನವಮಿಯನ್ನ ಶ್ರದ್ಧಾಭಕ್ತಿಯಿಂದ ಆಚರಿಸಲಾಗ್ತಿದೆ. ಮುಂಜಾನೆಯೇ ದೇವಾಲಯಗಳಲ್ಲಿ ಭಕ್ತರು ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸ್ತಿದ್ದಾರೆ. ಬೆಂಗಳೂರು, ಮೈಸೂರು, ಮಂಡ್ಯ, ಬಳ್ಳಾರಿ, ಕಲಬುರಗಿಯಲ್ಲಿ ಜನ ಈ ಬೇಸಿಗೆಯಲ್ಲಿ ಪಾನಕ, ನೀರುಮಜ್ಜಿಗೆ, ಕೋಸಂಬರಿಯನ್ನ ಸಿದ್ಧ ಮಾಡ್ತಿದ್ದಾರೆ.
ಮಂಡ್ಯದ ಪಾಂಡವಪುರದ ಮೇಲುಕೋಟೆಯಲ್ಲಿ ಐತಿಹಾಸಿಕ ಚಲುವನಾರಾಯಣಸ್ವಾಮಿಯ ವೈರಮುಡಿ ಬ್ರಹ್ಮೋತ್ಸವ ಮನೆ ಮಾಡಿದೆ. ಉತ್ಸವಕ್ಕೆ ಸಾವಿರಾರು ಜನರು ದೇಶದ ನಾನಾ ಭಾಗಗಳಿಂದ ಆಗಮಿಸಲಿದ್ದಾರೆ. ಚಲುವನಾರಾಯಣನಿಗೆ ವೈರಮುಡಿ ಕಿರೀಟಧಾರಣ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಬೆಳಗ್ಗೆ 8 ಗಂಟೆ ಸುಮಾರಿಗೆ ಮಂಡ್ಯ ಜಿಲ್ಲಾ ಖಜಾನೆಯಲ್ಲಿರೋ ವೈರಮುಡಿ ಮತ್ತು ಆಭರಣವನ್ನ ಅಧಿಕಾರಿಗಳ ಸಮ್ಮುಖದಲ್ಲಿ ಹೊರ ತೆಗೆಯಲಾಗುತ್ತೆ. ನಂತರ ವಿಶೇಷ ಪೂಜೆ ಬಳಿಕ ಬಿಗಿ ಭದ್ರತೆಯಲ್ಲಿ ರವಾನೆಯಾಗೋ ವೈರಮುಡಿ ಸಂಜೆ ವೇಳೆಗೆ ಮೇಲುಕೋಟೆಗೆ ತಲುಪಲಿದೆ.
ಮೇಲುಕೋಟೆಗೆ ಕೊಂಡೊಯ್ಯೋ ದಾರಿಯುದ್ದಕ್ಕೂ ಗ್ರಾಮಸ್ಥರು, ಭಕ್ತರು ವೈರಮುಡಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ರಾತ್ರಿ 8 ಗಂಟೆ ಸುಮಾರಿಗೆ ವೈರಮುಡಿ ಕಿರೀಟ ಧಾರಣೆಯೊಂದಿಗೆ ಬ್ರಹ್ಮೋತ್ಸವ ನಡೆಯಲಿದೆ.