ಬೆಂಗಳೂರು: ಬಿಜೆಪಿ ಪಕ್ಷದ ಇಬ್ಬರು ಪ್ರಭಾವಿ ನಾಯಕರಾದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ (DV Sadananda Gowda) ಮತ್ತು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ (SR Vishwanath) ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ಇದು ಈಗ ಕಾನೂನು ಹೋರಾಟ ಮತ್ತು ರಾಜಕೀಯ ನಿವೃತ್ತಿಯ ಸವಾಲಿನ ರೂಪ ಪಡೆದುಕೊಂಡಿದೆ.
ಯಲಹಂಕದಲ್ಲಿ ನಡೆದ ಕೆಂಪೇಗೌಡ ಜಯಂತಿ(Kempegowda Jayanti) ಕಾರ್ಯಕ್ರಮದ ವಿವಾದದಿಂದ ಆರಂಭವಾದ ಈ ಕಿಡಿ, ಈಗ ಗೂಂಡಾಗಿರಿ, ಭೂಗತ ಲೋಕದ ನಂಟು ಹಾಗೂ ಬಿಡಿಎ ಹಗರಣಗಳ ಆರೋಪ-ಪ್ರತ್ಯಾರೋಪಗಳಿಗೆ ಸಾಕ್ಷಿಯಾಗಿದೆ.
ಡಿವಿಎಸ್ ಹೇಳಿದ್ದೇನು?
ಯಲಹಂಕದ ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ತಮಗೆ ಆಹ್ವಾನ ನೀಡಿದರೂ, ಅಲ್ಲಿಗೆ ಹೋಗದಂತೆ ತಡೆಯಲಾಯಿತು ಎಂದು ಮಾಜಿ ಸಿಎಂ ಡಿ.ವಿ. ಸದಾನಂದಗೌಡ ಆಕ್ರೋಶ ಹೊರಹಾಕಿದ್ದಾರೆ. ಶಾಸಕ ಎಸ್.ಆರ್. ವಿಶ್ವನಾಥ್ ವಿರುದ್ಧ ನೇರ ವಾಗ್ದಾಳಿ ನಡೆಸಿರುವ ಅವರು ಹಲವು ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ:
ನನಗೆ ಯಲಹಂಕದ ಕೆಂಪೇಗೌಡ ಜಯಂತಿಗೆ ಹೋಗಬೇಡಿ ಎಂದು ಕರೆ ಮಾಡಲಾಗಿತ್ತು. ವಿಶ್ವನಾಥ್ ನನ್ನನ್ನು ಒಕ್ಕಲಿಗ ಅಲ್ಲ ಎಂದಿದ್ದಾರೆ. ಆದರೆ ನಾನು ಒಕ್ಕಲಿಗ ಅಲ್ಲ ಅನ್ನಲು ಅವರಾರು? ಎಂದು ಪ್ರಶ್ನಿಸಿದ್ದಾರೆ.
ವಿಶ್ವನಾಥ್ ಗೂಂಡಾಗಿರಿ ಮಾಡಿ ಬಂದವರು. ಅವರು ಈ ಹಿಂದೆ ಭೂಗತ ಲೋಕದ ಡಾನ್ ಮುತ್ತಪ್ಪ ರೈ ಕೈಕೆಳಗೆ ಕೆಲಸ ಮಾಡಿದವನು. ನಾನು ಅದೇ ಮುತ್ತಪ್ಪ ರೈ ವಿರುದ್ಧ ಹೋರಾಟ ಮಾಡಿ ಬಂದವನು. ವಿಶ್ವನಾಥ್ಗೆ ದುಡ್ಡಿನ ಅಮಲು ಹೆಚ್ಚಾಗಿದೆ ಎಂದು ಡಿವಿಎಸ್ ಗುಡುಗಿದ್ದಾರೆ. ಇದನ್ನೂ ಓದಿ: ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರರನ್ನ ಕೆಳಗಿಳಿಸಲು ಪ್ಲ್ಯಾನ್? – ಸದಾನಂದ ಗೌಡರದ್ದು ಎನ್ನಲಾದ ಆಡಿಯೋ ವೈರಲ್
ವಿಶ್ವನಾಥ್ ತಿರುಗೇಟು
ಡಿ.ವಿ. ಸದಾನಂದಗೌಡರ ಆರೋಪಗಳಿಗೆ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಕೋರ್ಟ್ ಮೆಟ್ಟಿಲೇರುವುದಾಗಿ ಎಚ್ಚರಿಕೆ ನೀಡಿದ್ದಾರೆ:
ನನ್ನ ಮೇಲಿನ ಆರೋಪಗಳಿಗೆ ಸದಾನಂದ ಗೌಡರು ದಾಖಲೆ ನೀಡಬೇಕು. ನನಗೂ ಮುತ್ತಪ್ಪ ರೈಗೂ ಇರುವ ಸಂಬಂಧದ ಬಗ್ಗೆ ಮತ್ತು ಬಿಡಿಎನಲ್ಲಿ ಹಣ ಹೊಡೆದಿರುವ ಬಗ್ಗೆ ಅವರು ಕೋರ್ಟ್ನಲ್ಲಿ ಸಾಬೀತುಪಡಿಸಲಿ. ನಾನು ಮುತ್ತಪ್ಪ ರೈ ಹೆಸರು ಕೇಳಿದ್ದೇನೆಯೇ ಹೊರತು ಯಾವುದೇ ಸಂಪರ್ಕ ಹೊಂದಿಲ್ಲ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದಿದ್ದಾರೆ.
ನಾನು ಬಿಡಿಎ ಅಧ್ಯಕ್ಷನಾಗಿದ್ದಾಗಲೇ ಲೋಕಯುಕ್ತ ದಾಳಿಯಾಗಿತ್ತು. ಅಲ್ಲಿ ಸಾಸಿವೆ ಕಾಳಷ್ಟು ತಪ್ಪು ಕೂಡ ಪತ್ತೆಯಾಗಿರಲಿಲ್ಲ. ಸದಾನಂದ ಗೌಡರು ತಮ್ಮ ಹೇಳಿಕೆಯನ್ನು ಕೋರ್ಟ್ನಲ್ಲಿ ಸಾಬೀತುಪಡಿಸಿದ ದಿನವೇ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಒಂದು ವೇಳೆ ಸಾಬೀತುಪಡಿಸದಿದ್ದರೆ ನೀವೇನು ಮಾಡ್ತೀರಾ? ಎಂದು ಸವಾಲು ಹಾಕಿದ್ದಾರೆ.
ಸದಾನಂದ ಗೌಡ ಒಕ್ಕಲಿಗ ಅಲ್ಲ ಎಂದು ನಾನು ಎಲ್ಲೂ ಹೇಳಿಲ್ಲ, ಕೆಂಪೇಗೌಡರ ವಂಶಸ್ಥರು ಎಂದಿದ್ದೆ ಅಷ್ಟೇ. ಜಯಂತಿಗೆ ಕರೆದಾಗ ಬಾರದೇ ಇದ್ದಾಗ ನೋವಾಗುವುದು ಸಹಜ. ಅವರು ಅಂದು ಮುಖ್ಯಮಂತ್ರಿ ಆಗಬೇಕು ಅಂದಾಗ 24 ಗಂಟೆ ಹೋಟೇಲ್ ಬಾಗಿಲು ಕಾದವನು ನಾನೇ ಎಂಬುದನ್ನು ನೆನಪಿಸಿಕೊಳ್ಳಲಿ ಎಂದು ತಿವಿದಿದ್ದಾರೆ.
ಕರಾವಳಿ ಭಾಗದಲ್ಲಿ ನನ್ನ ವಿರುದ್ಧ ಪ್ರತಿಭಟನೆ ಮಾಡುವಂತೆ ಮಾಡಿ ನನ್ನನ್ನು ಇಷ್ಟು ದೊಡ್ಡ ನಾಯಕನನ್ನಾಗಿ ಮಾಡಿದ್ದಕ್ಕೆ ಸದಾನಂದ ಗೌಡರಿಗೆ ಧನ್ಯವಾದಗಳು. ನಾವು ಬಾಯಿ ಬಿಚ್ಚಿದರೆ ಇನ್ನು ದೊಡ್ಡದಾಗುತ್ತದೆ. ನೀವು ಸ್ವಲ್ಪ ಸುಮ್ಮನಿದ್ದರೆ ನಿಮಗೇ ಒಳ್ಳೆಯದು ಎಂದು ತಿರುಗೇಟು ನೀಡಿದ್ದಾರೆ.
