ಮುಂಬೈ: ಮಹಾರಾಷ್ಟ್ರ ಸರ್ಕಾರದ ಬಿಕ್ಕಟ್ಟು ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ನಾಳೆಯೇ ಬಹುಮತ ಸಾಬೀತುಪಡಿಸಬೇಕು ಎಂದು ಉದ್ಧವ್ ಠಾಕ್ರೆಗೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರು ಮುಂಬೈಗೆ ಆಗಮಿಸಲು ಸಿದ್ಧತೆ ನಡೆಸಿದ್ದಾರೆ.
ಶಿವಸೇನಾ ಬಂಡಾಯ ಶಾಸಕರು ಇಂದು ಸಾಯಂಕಾಲ ಗೋವಾಗೆ ಆಗಮಿಸಲಿದ್ದಾರೆ. ಗೋವಾದ ತಾಜ್ ಕನ್ವೆನ್ಷನ್ ಹೋಟೆಲ್ನಲ್ಲಿ ಶಾಸಕರಿಗಾಗಿ 70 ಕೊಠಡಿಗಳನ್ನು ಬುಕ್ ಮಾಡಲಾಗಿದೆ. ಇದನ್ನೂ ಓದಿ: ರೆಬೆಲ್ ಶಾಸಕರು ನಾಳೆ ಮುಂಬೈಗೆ ಎಂಟ್ರಿ
ಇಂದು ಎಲ್ಲಾ ಬಂಡಾಯ ಶಾಸಕರನ್ನು ಗೋವಾಕ್ಕೆ ಕರೆದೊಯ್ಯಲು ಸ್ಪೈಸ್ಜೆಟ್ ವಿಮಾನವು ಗುವಾಹಟಿಗೆ ತೆರಳಲಿದೆ. ಗೋವಾಗೆ ತೆರಳಲು ಬಂಡಾಯ ಶಾಸಕರಿಗೆ ಹೆಚ್ಚಿನ ಭದ್ರತೆ ಕೂಡ ಒದಗಿಸಲಾಗಿದೆ. ಏತನ್ಮಧ್ಯೆ ಇಂದು ಸಂಜೆ ಮುಂಬೈನ ತಾಜ್ ಪ್ರೆಸಿಡೆಂಟ್ ಹೋಟೆಲ್ನಲ್ಲಿ ಸಮಾವೇಶಗೊಳ್ಳುವಂತೆ ಬಿಜೆಪಿ ತನ್ನ ಶಾಸಕರಿಗೆ ಸೂಚಿಸಿದೆ.
ಮಹಾರಾಷ್ಟ್ರ ರಾಜ್ಯಪಾಲರು ಗುರುವಾರ ಬೆಳಗ್ಗೆ 11 ಗಂಟೆಗೆ ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನ ಕರೆದಿದ್ದಾರೆ. ಆ ಮೂಲಕ ಮಹತ್ತರ ಪರೀಕ್ಷೆಯನ್ನು ಎದುರಿಸಲು ಮತ್ತು ಶಿವಸೇನಾ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರ ಬಹುಮತ ಸಾಬೀತುಪಡಿಸುವಂತೆ ಠಾಕ್ರೆಗೆ ತಿಳಿಸಿದ್ದಾರೆ. ಗುರುವಾರ ಸಂಜೆ 5 ಗಂಟೆಯೊಳಗೆ ಕಲಾಪ ಪೂರ್ಣಗೊಳಿಸುವಂತೆ ರಾಜ್ಯ ಶಾಸಕಾಂಗ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ರಾಜ್ಯಪಾಲರು ಸೂಚಿಸಿದ್ದಾರೆ. ಇದನ್ನೂ ಓದಿ: ಟೈಲರ್ ಹತ್ಯೆ ಬೆನ್ನಲ್ಲೆ ನವೀನ್ ಕುಮಾರ್ ಜಿಂದಾಲ್ಗೆ ಕೊಲೆ ಬೆದರಿಕೆ
ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸೂಚಿರುವುದನ್ನು ವಿರೋಧಿಸಿ ಉದ್ಧವ್ ಠಾಕ್ರೆ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಗಳ ಬಗ್ಗೆ ಇಂದು ಸಂಜೆ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ.