ರಾಮನಗರ: ಟ್ರಾಫಿಕ್ ದರ ಜಾಸ್ತಿಯಾದ ಬಳಿಕ ಪೊಲೀಸರು ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರದ ಸಾತನೂರು ಸರ್ಕಲ್ ಬಳಿ ಬೈಕ್ ಸವಾರನ ಮೇಲೆ ಟ್ರಾಫಿಕ್ ಪೊಲೀಸರೊಬ್ಬರು ದರ್ಪ ತೋರಿರುವ ಘಟನೆ ನಡೆದಿದೆ.
ಚನ್ನಪಟ್ಟಣದ ಆಣಿಗೆರೆ ಗ್ರಾಮದ ಕೆಂಪೇಗೌಡ ಬೈಕ್ನಲ್ಲಿ ಬರುತ್ತಿದ್ದರು. ಈ ವೇಳೆ ಟ್ರಾಫಿಕ್ ಪೊಲೀಸ್ ನಿಲ್ಲಿಸಲು ಸೂಚಿಸಿದರು. ಆದರೆ ಇದನ್ನ ಗಮನಿಸದ ಕೆಂಪೇಗೌಡ ಮುಂದೆ ಸಾಗಿದರು. ಇದರಿಂದ ಸಿಟ್ಟಿಗೆದ್ದ ಟ್ರಾಫಿಕ್ ಪೊಲೀಸ್ ಬೈಕ್ ಅಡ್ಡಗಟ್ಟಿ ಪೊಲೀಸ್ ಠಾಣೆಗೆ ನಡಿ ಎಂದು ಅವಾಜ್ ಹಾಕಿದರು.
ಈ ವೇಳೆ ಬೈಕ್ ಸವಾರ ಕೆಂಪೇಗೌಡ, ಟ್ರಾಫಿಕ್ ಪೊಲೀಸ್ ಬಳಿ ‘ಸಾರ್ ಕೈ ಮುಗಿತೀನಿ.. ಬಿಟ್ಟು ಬಿಡಿ ಅಂತ ಪರಿಪರಿಯಾಗಿ ಬೇಡಿಕೊಂಡರು. ಆದರೆ ಸವಾರ ಎಷ್ಟೇ ಅಂಗಲಾಚಿದರೂ ಟ್ರಾಫಿಕ್ ಪೊಲೀಸ್ ಕಿಂಚಿತ್ತೂ ಕರುಣೆ ತೋರಲೇ ಇಲ್ಲ. ಇತ್ತ ಬೈಕ್ ಸವಾರನ ಪರವಾಗಿ ಸಾರ್ವಜನಿಕರು ಕೂಡ ಸ್ಥಳಕ್ಕೆ ಬಂದು ಪೊಲೀಸರ ಬಳಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಇದರಿಂದ ಬೇಸರಗೊಂಡ ಸವಾರ ತನ್ನ ಬೈಕನ್ನು ಪೊಲೀಸರಿಗೇ ಕೊಟ್ಟು ನಡೆದುಕೊಂಡು ಹೋಗಿದ್ದಾರೆ.