ಭೋಪಾಲ್: ಮಧ್ಯಪ್ರದೇಶಕ್ಕೆ ಭಾರತ್ ಜೋಡೋ ಯಾತ್ರೆ (Bharat Jodo Yatra) ಪ್ರವೇಶಿಸುವುದಕ್ಕೂ ಮುನ್ನವೇ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ (Rahul Gandhi) ಜೀವ ಬೆದರಿಕೆ ಹಾಕಲಾಗಿದೆ. ಮಧ್ಯಪ್ರದೇಶದ (Madhya Pradesh) ಇಂದೋರ್ಗೆ (Indore) ಆಗಮಿಸಿದ ತಕ್ಷಣ ಬಾಂಬ್ ಸ್ಫೋಟಿಸಿ ರಾಹುಲ್ ಗಾಂಧಿಯನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಲಾಗಿದೆ.
ಜುನಿ ಪೊಲೀಸ್ ಠಾಣೆ ವ್ಯಾಪ್ತಿಯ (Juni police station area) ಇಂದೋರ್ನ ಸಿಹಿತಿಂಡಿ ಅಂಗಡಿಯೊಂದರ ಹೊರಗೆ ರಾಹುಲ್ ಗಾಂಧಿಯನ್ನು ಕೊಲ್ಲುವುದಾಗಿ ಬೆದರಿಕೆ ಪತ್ರದಲ್ಲಿ ತಿಳಿಸಲಾಗಿದೆ. ಹೀಗಾಗಿ ಪೊಲಿಸರು ಈಗಾಗಲೇ ಅಲ್ಲಿನ ಸಿಸಿಟಿವಿ ದೃಶ್ಯಗಳನ್ನು ಸ್ಕ್ಯಾನ್ ಮಾಡಲು ಪ್ರಾರಂಭಿಸಿದ್ದಾರೆ ಮತ್ತು ಪತ್ರವನ್ನು ಸಿಹಿತಿಂಡಿ ಅಂಗಡಿಯ ಹೊರಗೆ ಬಿಟ್ಟುಹೋದ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದೀಗ ಅಪರಿಚಿತ ವ್ಯಕ್ತಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 507ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಈ ಪ್ರಕರಣದ ಆರೋಪಿ ಮೇಲೆ ಎಫ್ಐಆರ್ ಕೂಡ ದಾಖಲಿಸಬಹುದು ಎನ್ನಲಾಗುತ್ತಿದೆ. ಇದನ್ನೂ ಓದಿ: ಸಾವರ್ಕರ್ ವಿರುದ್ಧ ಹೇಳಿಕೆ – ರಾಹುಲ್ ಗಾಂಧಿ ವಿರುದ್ಧ ಪೊಲೀಸರಿಗೆ ದೂರು
ಮಹಾರಾಷ್ಟ್ರದ (Maharashtra) ಅಕೋಲಾದಲ್ಲಿ ಗುರುವಾರ ಪತ್ರಿಕಾಗೋಷ್ಠಿ ವೇಳೆ ಮಾತನಾಡಿದ ರಾಹುಲ್ ಗಾಂಧಿ, ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರಿಗೆ ಕ್ಷಮೆಯಾಚಿಸುವ ಪತ್ರಕ್ಕೆ ಸಹಿ ಹಾಕುವ ಮೂಲಕ ಸಾವರ್ಕರ್ ((Savarkar)) ಅವರು ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಸರ್ದಾರ್ ಪಟೇಲ್ ಅವರಂತಹ ನಾಯಕರಿಗೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದ ಒಂದು ದಿನದ ಬಳಿಕ ಈ ಬೆದರಿಕೆ ಪತ್ರ ಬಂದಿದೆ.
ವೀರ ಸಾವರ್ಕರ್ ಅವರು ಬ್ರಿಟಿಷರಿಗೆ ಪತ್ರ ಬರೆದಿದ್ದು, ಅದರಲ್ಲಿ ಅವರು ಬ್ರಿಟಿಷರ ವಿಧೇಯ ಸೇವಕರಾಗಿ ಉಳಿಯುತ್ತೇನೆ ಎಂದು ಬೇಡಿಕೊಂಡಿದ್ದರು. ಅವರು ಬ್ರಿಟಿಷರಿಗೆ ಸಹಾಯವನ್ನೂ ಮಾಡಿದ್ದು, ಮಹಾತ್ಮ ಗಾಂಧಿಯಂತಹ ನಾಯಕರಿಗೆ ದ್ರೋಹ ಬಗೆದಿದ್ದಾರೆ ಎಂದು ರಾಹುಲ್ ಹೇಳಿದ್ದರು. ಇದನ್ನೂ ಓದಿ: ಸಾವರ್ಕರ್ ಬ್ರಿಟಿಷರಿಗೆ ಪತ್ರ ಬರೆದು ಸೇವಕನಾಗಿರುತ್ತೇನೆ ಎಂದಿದ್ರು: ರಾಹುಲ್ ಗಾಂಧಿ