ಭುವನೇಶ್ವರ: ಇಂದಿನ ಯುವ ಪೀಳಿಗೆ ‘Gen Z’ ವಿದ್ಯಾರ್ಥಿಗಳನ್ನು ಕೆಲವರು ದಿಕ್ಕು ತಪ್ಪಿಸಲು ಯತ್ನಿಸಿದ ಕಾರಣಕ್ಕಾಗಿ ತಾವು ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಧರ್ಮೇಂದ್ರ ಪ್ರಧಾನ್(Dharmendra Pradhan) ಹೇಳಿದ್ದಾರೆ.
ನೀಟ್ (NEET-UG) ಪರೀಕ್ಷೆ ಅಕ್ರಮ ಹಾಗೂ ಪತ್ರಿಕೆ ಸೋರಿಕೆ ಪ್ರಕರಣದ ಬೆನ್ನಲ್ಲೇ ತಮ್ಮ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ಬಿಜೆಪಿ(BJP) ನಾಯಕ ಧರ್ಮೇಂದ್ರ ಪ್ರಧಾನ್ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ.
ಒಡಿಶಾದ ಭುವನೇಶ್ವರದಲ್ಲಿರುವ ಜಿ.ಎಂ. ವಿಶ್ವವಿದ್ಯಾಲಯದಲ್ಲಿ ಶನಿವಾರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಅವರು, ತಮಗೆ ಅಧಿಕಾರ ಅಥವಾ ಸಚಿವ ಸ್ಥಾನ ಎಂದಿಗೂ ಮುಖ್ಯವಾಗಿರಲಿಲ್ಲ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಳಿ ತಾವೇ ವೈಯಕ್ತಿಕವಾಗಿ ತೆರಳಿ ಕೇಂದ್ರ ಸಚಿವ ಸಂಪುಟದಿಂದ ರಾಜೀನಾಮೆ ನೀಡುವುದಾಗಿ ಪ್ರಸ್ತಾಪಿಸಿದ್ದಾಗಿ ಪ್ರಧಾನ್ ತಿಳಿಸಿದರು. ನನಗೆ ಸಚಿವ ಸ್ಥಾನ ಮುಖ್ಯವಾಗಿರಲಿಲ್ಲ. ಭಾರತವನ್ನು ‘ವಿಶ್ವಗುರು’ ಮಾಡುವುದೇ ನನ್ನ ಪ್ರಮುಖ ಆದ್ಯತೆ ಎಂದರು. ಇದನ್ನೂ ಓದಿ: ಝೆನ್-ಜಿಗಳ ಜೊತೆ ಕನೆಕ್ಟ್ ಆಗ್ತಿದ್ದಾರಾ ಮೋದಿ?; ಇನ್ಸ್ಟಾದಲ್ಲಿ ಪ್ರಧಾನಿ ಫುಲ್ ಆ್ಯಕ್ಟಿವ್ ಯಾಕೆ?
ರೇರಾಖೋಲ್ನಲ್ಲಿ ನಡೆದ ಮತ್ತೊಂದು ಸಭೆಯಲ್ಲಿ ಮಾತನಾಡಿದ ಅವರು, ಬಿಜು ಜನತಾ ದಳ (BJD) ಕಾರ್ಯಕರ್ತರು ತಮಗೆ ನಡೆಸಿದ ಪ್ರತಿಭಟನೆ ಹಾಗೂ ವಾಪಸ್ ಹೋಗಿ (Go Back) ಎಂಬ ಘೋಷಣೆಗಳಿಗೆ ತಾವು ವಿಚಲಿತರಾಗುವುದಿಲ್ಲ ಎಂದು ಮಾಜಿ ಸಿಎಂ ನವೀನ್ ಪಟ್ನಾಯಕ್ ಅವರಿಗೆ ತಿರುಗೇಟು ನೀಡಿದರು.
ಜುಲೈ 25 ರಂದು ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ವಿದ್ಯಾರ್ಥಿ ಸಂಘಟನೆಗಳ ತೀವ್ರ ಪ್ರತಿಭಟನೆಯ ನಂತರ ಧರ್ಮೇಂದ್ರ ಪ್ರಧಾನ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸದ್ಯ ಸಂಸತ್ತಿನಲ್ಲಿ ಸಂಬಲ್ಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅವರು, ಶೈಕ್ಷಣಿಕ ಕ್ಷೇತ್ರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಮುಖ್ಯ ಎಂದು ಪ್ರತಿಪಾದಿಸಿದ್ದಾರೆ.



