– ಬಂದ ಹಣವನ್ನು ಸಿನಿಮಾದಲ್ಲಿ ಹೂಡಿಕೆ
– ಖಾದರ್ ಭೇಟಿಗೆ ಅವಕಾಶ ನೀಡದ ಐಟಿ ಅಧಿಕಾರಿಗಳು
ಬೆಂಗಳೂರು: ಮಾಜಿ ಡಿಸಿಎಂ ಪರಮೇಶ್ವರ್ ಅವರ ಅಣ್ಣನ ಮಗ ಸೀಟ್ ಬ್ಲಾಕ್ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಹೌದು. ಪರಮೇಶ್ವರ್ ಸಹೋದರ ಶಿವಪ್ರಸಾದ್ ಅವರ ಮಗ ಆನಂದ್ ನೇತೃತ್ವದಲ್ಲೇ ಸೀಟ್ ಬ್ಲಾಕ್ ದಂಧೆ ನಡೆಯುತಿತ್ತು. ಸರ್ಕಾರಕ್ಕೆ ಮರೆಮಾಚಿ ಅಕ್ರಮವಾಗಿ ಮೆಡಿಕಲ್ ಸೀಟ್ ಹಂಚಿಕೆ ಮಾಡುತ್ತಿದ್ದ ಆನಂದ್ ಬಂದ ಹಣವನ್ನು ಸಿನಿಮಾದಲ್ಲಿ ಹೂಡಿಕೆ ಮಾಡುತ್ತಿದ್ದರು ಎಂಬ ಆರೋಪ ಈಗ ಬಂದಿದೆ. ಇದನ್ನು ಓದಿ: ಇಬ್ಬರು ವಿದ್ಯಾರ್ಥಿಗಳಿಂದಾಗಿ ಪರಮೇಶ್ವರ್ ಮೇಲೆ ದಾಳಿ – ಸೀಟ್ ಬ್ಲಾಕ್ ಹೇಗೆ ಮಾಡಲಾಗುತ್ತೆ?
ಅಕ್ರಮವಾಗಿ ಮೆಡಿಕಲ್ ಸೀಟು ಹಂಚಿಕೆಯಾಗುತ್ತಿರುವುದನ್ನು ಕಂಡು ಹಣ ನೀಡಲು ಸಾಧ್ಯವಾಗದ ಪೋಷಕರು ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದರು. ಈ ಕಾರಣಕ್ಕಾಗಿಯೇ ಪರಮೇಶ್ವರ್ ನಿವಾಸದ ಮೇಲೆ ದಾಳಿ ನಡೆದಿದ್ದು, ಆನಂದ್ ಅವರನ್ನು ಐಟಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.
ಎಕೆ 56 ಸಿನಿಮಾದಲ್ಲೂ ಆನಂದ್ ಹೀರೋ ಆಗಿ ನಟಿಸಿದ್ದರು. ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಸಿನಿಮಾ 2012ರಲ್ಲಿ ತೆರೆ ಕಂಡಿತ್ತು.
ವಿಚಾರಣೆ ಮುಂದುವರಿಕೆ:
ಸದಾಶಿವನಗರ ಮನೆಯಲ್ಲೇ ನಾಲ್ಕು ಮಂದಿ ಐಟಿ ಅಧಿಕಾರಿಗಳು ಠಿಕಾಣಿ ಹೂಡಿದ್ದು ಇಂದು ಮತ್ತೆ ವಿಚಾರಣೆ ನಡೆಸುತ್ತಿದ್ದಾರೆ. ಮಧ್ಯರಾತ್ರಿ 12.30ರ ವರೆಗೂ ವಿಚಾರಣೆ ನಡೆಸಿ ಪರಮೇಶ್ವರ್ ನಿವಾಸದಲ್ಲೇ ಈ ಅಧಿಕಾರಿಗಳು ನಿದ್ದೆ ಮಾಡಿದ್ದರು.
ಮೊದಲ ದಿನ 10ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಕಲೆ ಹಾಕಿದ್ದರು. ರಾತ್ರಿ ನಾಲ್ಕು ಜನರನ್ನು ಬಿಟ್ಟು ಉಳಿದ ಅಧಿಕಾರಿಗಳು ವಾಹನದಲ್ಲಿ ತೆರಳಿದ್ದರು. ಇಂದು ಮತ್ತೆ 5 ಮಂದಿ ಅಧಿಕಾರಿಗಳು ಪರಮೇಶ್ವರ್ ನಿವಾಸಕ್ಕೆ ಆಗಮಿಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಇದನ್ನು ಓದಿ: ಗ್ರಾಮ ಪಂಚಾಯತ್ ತೆರಿಗೆ ಕಟ್ಟದ ಪರಮೇಶ್ವರ್
ಭೇಟಿಗೆ ಅವಕಾಶವಿಲ್ಲ: ಮಾಜಿ ಸಚಿವ ಯುಟಿ ಖಾದರ್ ಅವರು ಇಂದು ಬೆಳಗ್ಗೆ ಪರಮೇಶ್ವರ್ ಅವರನ್ನು ಭೇಟಿ ಮಾಡಲು ಸದಾಶಿವನಗರಕ್ಕೆ ಆಗಮಿಸಿದ್ದರು. ಆದರೆ ಅಧಿಕಾರಿಗಳು ಭೇಟಿಗೆ ಅವಕಾಶ ನೀಡಲಿಲ್ಲ.
ಬೆಂಬಲಿಗರಿಂದ ಪೂಜೆ: ರಾಜಾರಾಜೇಶ್ವರಿ ನಗರದ ದೇವಸ್ಥಾನದಲ್ಲಿ ಪರಮೇಶ್ವರ್ ಅಭಿಮಾನಿಗಳು ಇಂದು ವಿಶೇಷ ಪೂಜೆ ಮಾಡಿದ್ದರು. ಕಾಂಗ್ರೆಸ್ ಮುಖಂಡ ರಾಜ್ ಕುಮಾರ್ ಮತ್ತು ತಂಡದವರು ವಿಶೇಷ ಪೂಜೆ ಮಾಡಿಸಿದ್ದರು. ಬೆಂಬಲಿಗರು ತಂದ ಪೂಜೆಯ ಪ್ರಸಾದವನ್ನು ಪರಮೇಶ್ವರ್ ಅವರಿಗೆ ನೀಡಲು ಅನುಮತಿ ನೀಡಲಾಯಿತು.