– ಅಂಬರೀಶ್ ಹೆಸರಿನಲ್ಲಿ ಮತ ಕೇಳುವ ಪರಿಸ್ಥಿತಿ ಬಂದಿಲ್ಲ
ಮಂಡ್ಯ: ಪಕ್ಷೇತರ ಅಭ್ಯರ್ಥಿಯೊಬ್ಬರ ಮಗ, ನನ್ನ ತಮ್ಮ ನಿನ್ನೆ ಪ್ರಚಾರದ ವೇಳೆ ಸಿಎಂ ಕುಮಾರಸ್ವಾಮಿ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ತಂದೆ, ತಾಯಿ ಸಂಸ್ಕೃತಿಯಿಂದ ಅವರನ್ನ ಬೆಳೆಸಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ ಎಂದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಅಭಿಷೇಕ್ ವಿರುದ್ಧ ಕಿಡಿಕಾರಿದ್ದಾರೆ.
ಮದ್ದೂರು ಎಳನೀರು ಮಾರುಕಟ್ಟೆಯಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ಕುಮಾರಣ್ಣ ಟವೆಲ್ ಹಿಡ್ಕೊಂಡು ಅಳುತ್ತಾರೆ ಅಂತ ವ್ಯಂಗ್ಯವಾಡಿದ್ದಾರೆ. ಸಿಎಂ ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ವಿರುದ್ಧ ಮಾತನಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಭಾವುಕರಾದರು.
ಮಾಜಿ ಸಚಿವ ಅಂಬರೀಶ್ ಅವರ ಬಗ್ಗೆ ಅತ್ಯಂತ ಗೌರವ ಹೊಂದಿದ್ದೇನೆ. ಸಿಎಂ ಕುಮಾರಸ್ವಾಮಿ ಅವರು ಕೂಡ ಚುನಾವಣೆ ಪ್ರಚಾರದ ವೇಳೆ ಅಂಬರೀಶ್ ಅವರ ಹೆಸರನ್ನು ಪದೇ ಪದೇ ಬಳಸಬೇಡಿ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಅಂಬರೀಶ್ ಅವರ ಹೆಸರನ್ನು ಬಳಿಸಿಕೊಂಡು ಮತ ಕೇಳುವ ಪರಿಸ್ಥಿತಿ ಇನ್ನೂ ನಮಗೆ ಬಂದಿಲ್ಲ ಎಂದು ಹೇಳಿದರು.
ಅಭಿಷೇಕ್ ಹೇಳಿದ್ದೇನು?:
ಮದ್ದೂರು ತಾಲೂಕಿನ ಮರಳಿಗ ಗ್ರಾಮದಲ್ಲಿ ಶುಕ್ರವಾರ ಪ್ರಚಾರದ ವೇಳೆ ಮಾತನಾಡಿದ್ದ ಅಭಿಷೇಕ್ ಅವರು, ಮೈಕ್ ಮುಂದೆ ಟವಲ್ ಹಿಡಿದುಕೊಂಡು ಅಳಬೇಕೆ? ನಾವು ಹಂಗೆಲ್ಲ ಅಳಲ್ಲ. ನೀವು ಇರುವಾಗ ನಾವು ಯಾಕೆ ಅಳಬೇಕು. ನೇರವಾಗಿ ಗೆಲ್ಲಲು ಸಾಧ್ಯವಿಲ್ಲವೆಂದು ಮೈತ್ರಿ ನಾಯಕರಿಗೆ ಅರ್ಥವಾಗಿದೆ. ಹೀಗಾಗಿ ಸುಮಲತಾ ಹೆಸರಿನ ಮೂರು ಜನ ಅಭ್ಯರ್ಥಿಗಳನ್ನು ಸ್ಪರ್ಧೆಗೆ ನಿಲ್ಲಿಸಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಅವರಿಗೆ ಟಾಂಗ್ ಕೊಟ್ಟಿದ್ದರು.