ಚಿತ್ರದುರ್ಗ: ಲೈಂಗಿಕ ಕಿರುಕುಳ ಆರೋಪದ ಮೇಲೆ ಮುರುಘಾ ಮಠದ ಶ್ರೀಗಳು ಜೈಲುಪಾಲಾಗಿದ್ದು, ಮಠದಲ್ಲಿ ನೀರವ ಮೌನ ಆವರಿಸಿದೆ. ಕಳೆದ ಎರಡು ದಿನಗಳಿಂದ ಶ್ರೀಗಳನ್ನು ಕಂಡಿಲ್ಲ ಎಂದು ಮಠದ ಮಕ್ಕಳು ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ.
ಶ್ರೀಗಳನ್ನು ನೋಡದೇ ಎರಡು ದಿನ ಕಳೆದಿದೆ. ಎರಡು ದಿನಗಳಿಂದ ನಮಗೆ ದೇವರ ದರ್ಶನ ಇಲ್ಲ. ಶ್ರೀಗಳು ಆರೋಪ ಮುಕ್ತರಾಗಿ ಬರುತ್ತಾರೆ ಎಂದು ಮಠದ ವಿದ್ಯಾರ್ಥಿಗಳು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮುರುಘಾ ಮಠದ ಹಾಸ್ಟೆಲ್ನಲ್ಲಿರುವ ವಿದ್ಯಾರ್ಥಿನಿಯರು ಬೇರೆಡೆಗೆ ಶಿಫ್ಟ್ – ಮಕ್ಕಳ ಆಯೋಗದಿಂದ ಮಾಹಿತಿ
ಶ್ರೀಗಳು ನೂರಾರು ಅನಾಥ ಮಕ್ಕಳಿಗೆ ಆಶ್ರಯ ಕೊಟ್ಟಿದ್ದಾರೆ. ತಂದೆ-ತಾಯಿ ಕಳೆದುಕೊಂಡವರಿಗೆ ಶ್ರೀಗಳೇ ತಂದೆ-ತಾಯಿ ಆಗಿದ್ದರು. ಮಠದ ವಿದ್ಯಾರ್ಥಿಗಳ ಬಗ್ಗೆ ಅತೀವ ಕಾಳಜಿ ತೋರಿಸುತ್ತಿದ್ದರು. ಶ್ರೀಗಳ ಪ್ರೀತಿಯನ್ನು ನಾವು ಎರಡು ದಿನಗಳಿಂದ ಕಳೆದುಕೊಂಡಿದ್ದೇವೆ ಎಂದು ದುಃಖದಿಂದ ಮಕ್ಕಳು ನುಡಿದಿದ್ದಾರೆ.
ಲೈಂಗಿಕ ಕಿರುಕುಳ ಆರೋಪದಡಿ ಮುರುಘಾ ಮಠದ ಶ್ರೀಗಳ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀಗಳನ್ನು ಗುರುವಾರ ತಡರಾತ್ರಿ ಪೊಲೀಸರು ಬಂಧಿಸಿದ್ದರು. ನಂತರ ಅವರನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಬಳಿಕ ಶ್ರೀಗಳಿಗೆ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಮತ್ತೆ ಈಗ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಮುರುಘಾ ಶ್ರೀಗಳ ಪ್ರಕರಣದಲ್ಲಿ ರಾಜಕೀಯ ಪಕ್ಷಗಳ ಎಚ್ಚರಿಕೆಯ ಹೆಜ್ಜೆ