ಎಂಬತ್ತರ ದಶಕದಲ್ಲಿ ಡಾ.ವಿಷ್ಣುವರ್ಧನ್ ಅಭಿನಯದ ’ಕೃಷ್ಣಾ ನೀ ಬೇಗನೆ ಬಾರೋ’ (Krishna Nee Begane Baaro) ಚಿತ್ರವು ಬಿಡುಗಡೆಗೊಂಡು ಸೂಪರ್ ಹಿಟ್ ಆಗಿತ್ತು. ಕಟ್ ಮಾಡಿದರೆ ಈಗ ಅದೇ ಹೆಸರಿನಲ್ಲಿ ಸಿನಿಮಾವೊಂದು ಸೆಟ್ಟೇರಿದೆ. ಪ್ರೇಮಿಗಳ ದಿನದಂದು ಬಲಮರಿ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಮುಹೂರ್ತ (Muhurta) ನಡೆಯಿತು. ನಟರಾದ ಅನೀಶ್ ತೇಜಶ್ವರ್ ಮತ್ತು ಇಶಾನ್ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿ ಶುಭ ಹಾರೈಸಿದರು.
ನಿರ್ಮಾಪಕರ ಸೋದರ ಹೈದರಬಾದ್ ಉದ್ಯಮಿ ಶ್ರೀನಿಬಾಬು ಪುಲ್ಲೆಟ್ ಕ್ಯಾಮಾರ ಆನ್ ಮಾಡಿದರು. ದುಬೈನ ಎಸ್.ನೀಲಕಂಠ ಮತ್ತು ಚಲಪತಿರಾಜು ಜಂಟಿಯಾಗಿ ನೀಲಕಂಠ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಟಾಲಿವುಡ್ನ ಜಿ.ಸೂರ್ಯತೇಜ (Surya Teja) ನಿರ್ದೇಶಕರಾಗಿ ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಕಥೆಗೆ ಪೂರಕವಾಗುವಂತೆ ಇದೇ ಶೀರ್ಷಿಕೆ ಇಡಲಾಗಿದೆ. ಪ್ರತಿ ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿದ್ದು, ಒಂದೊಂದು ಉಪಕಥೆಯು ಆಯಾ ಊರಿನಲ್ಲಿ ನಡೆಯಲಿದೆ. ಕೃಷ್ಣನಿಗೆ ಗೋಪಿಕಾ ಸ್ತ್ರೀಯರು ಇರುತ್ತಾರೆ. ಆದರೆ ನಮ್ಮ ಸಿನಿಮಾದ ಕೃಷ್ಣನಿಗೆ ಯಾವುದೇ ಹುಡುಗಿಯರು ಇರುವುದಿಲ್ಲ. ಕೃಷ್ಣ ಎನ್ನುವ ಹೆಸರಿಗೆ ಅರ್ಥವಿಲ್ಲದಂತೆ ಇರುತ್ತಾನೆ. ಹೀಗಿರುವಾಗ ನಾಲ್ಕು ಹುಡುಗೀರು ಹೇಗೆ ಕನೆಕ್ಟ್ ಆಗುತ್ತಾರೆ. ಅವರಿಗೂ ಇವನಿಗೂ ಏನು ಸಂಬಂಧ? ಮುಂದೆ ಹೀಗೆ ಇರುತ್ತಾನಾ? ಅಥವಾ ಬದಲಾವಣೆಗೊಳ್ಳುತ್ತಾನಾ? ಎಂಬುದನ್ನು ಹಾಸ್ಯದ ಮೂಲಕ ತೋರಿಸಲಾಗುತ್ತಿದೆ. ಬೆಂಗಳೂರು, ಗೋವಾ, ಕೇರಳ ಹಾಗೂ ಹಾಡಿಗಾಗಿ ವಿದೇಶಕ್ಕೆ ಹೋಗುವ ಇರಾದೆ ಇದೆ. ಕನ್ನಡ, ತೆಲುಗು, ತಮಿಳು ಮತ್ತು ಭೋಜಪುರಿ ಭಾಷೆಗಳಲ್ಲಿ ಸಿದ್ದಗೊಳ್ಳಲಿದೆ. ಭೋಜಪುರಿಯಲ್ಲಿ ಕೃಷ್ಣನ ಭಕ್ತರು ಹೆಚ್ಚಿಗೆ ಇರುವುದರಿಂದ ಅಲ್ಲಿನ ಭಾಷೆಗೆ ಡಬ್ ಮಾಡಲಾಗುತ್ತಿದೆ.
ಭಾರ್ಗವ್.ಬಿವಿ. ನಾಯಕನಾಗಿ ಏಳನೇ ಚಿತ್ರವಂತೆ. ಬಾಂಬೆ ಮೂಲದ ಊರ್ವಶಿ ಪರದೇಶಿ, ಚೈತ್ರಾ, ಪ್ರಿಯಾಂಕ, ಆಶು ರೆಡ್ಡಿ ನಾಯಕಿಯರು. ಉಳಿದಂತೆ ತಾರಾ, ಅಚ್ಯುತಕುಮಾರ್, ಬಲರಾಜವಾಡಿ, ಕಬೀರ್ ದುಹಾನ್ಸಿಂಗ್, ಅಜಯ್ರತ್ನಂ ಮುಂತಾದವರು ನಟಿಸುತ್ತಿದ್ದಾರೆ. ನಾಲ್ಕು ಹಾಡುಗಳಿಗೆ ರಾಗ ಒದಗಿಸಲು ಸಂಗೀತ ಸಂಯೋಜಕರ ಆಯ್ಕೆ ಸದ್ಯದಲ್ಲೆ ಮುಗಿಯಲಿದೆ. ಛಾಯಾಗ್ರಹಣ ಆರ್ಯ ಅವರದಾಗಿದೆ.