2 ಶಿಕ್ಷಕ, 2 ಪದವೀಧರ ಕ್ಷೇತ್ರಗಳ ಫಲಿತಾಂಶ ಇಂದು- 3 ಪಕ್ಷಗಳ ಭವಿಷ್ಯ ನಿರ್ಧಾರ

Public TV
2 Min Read
BJP JDS CON

ಬೆಂಗಳೂರು: 2 ಶಿಕ್ಷಕ, 2 ಪದವೀಧರ ಕ್ಷೇತ್ರಗಳ ಫಲಿತಾಂಶ ಇಂದು ಪ್ರಕಟವಾಗಲಿದೆ. ಮೂರು ಪಕ್ಷಗಳಿಂದ ಒಟ್ಟು 49 ಅಭ್ಯರ್ಥಿಗಳ ಭವಿಷ್ಯ ಇಂದು ಗೊತ್ತಾಗಲಿದೆ.

ದಕ್ಷಿಣ ಪದವೀಧರ ಕ್ಷೇತ್ರವಾದ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ವಾಯವ್ಯ ಪದವೀಧರ ಕ್ಷೇತ್ರವಾದ ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರವಾದ ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡದಲ್ಲಿ ಚುನಾವಣೆ ನಡೆದಿತ್ತು.

election counting 3

ದಕ್ಷಿಣ ಪದವೀಧರ ಕ್ಷೇತದ ಮೊದಲ ಬಾರಿಗೆ ಕಾಂಗ್ರೆಸ್ ಗೆಲುವಿಗಾಗಿ ಕಾಯುತ್ತಿದ್ದರೆ, ಜೆಡಿಎಸ್ ಸ್ಥಾನ ಉಳಿಸಿಕೊಳ್ಳಲು, ಬಿಜೆಪಿ ಮರಳಿ ಕ್ಷೇತ್ರ ಪಡೆಯಲು ಹವಣಿಸುತ್ತಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿರುವ ಬಸವರಾಜ ಹೊರಟ್ಟಿ ಭವಿಷ್ಯವೂ ನಿರ್ಧಾರವಾಗಲಿದೆ.

BASAVARAJ HORATTI 2

ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಪರ ಹಣ ಹಂಚಿಕೆಯೂ ಜೋರಾಗಿತ್ತು. ಬೆಳಗ್ಗೆ 8ಕ್ಕೆ ಮತ ಎಣಿಕೆ ಶುರುವಾಗಲಿದ್ದು, ಎಣಿಕೆ ಕೇಂದ್ರಗಳ ಸುತ್ತ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮತ ಎಣಿಕೆಗಾಗಿ ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತ ಮುಂಜಾಗ್ರತಾ ಕ್ರಮವಾಗಿ ನಿಷೇದಾಜ್ಞೆ ಜಾರಿ ಆಗಿದೆ.

ಬೆಳಗ್ಗೆ ಮೊದಲು ಸಿಂಧು- ಅಸಿಂಧು ಮತಗಳ ಬೇರ್ಪಡಿಕೆ ಕಾರ್ಯ ನಡೆಯಲಿದ್ದು, ಬಳಿಕ ಸಿಬ್ಬಂದಿ ಮತಗಳ ಕ್ರೂಢೀಕರಣ ಮಾಡಲಿದ್ದಾರೆ. ಇದಾದ ಬಳಿಕ 25 ಮತಗಳ ತಲಾ ಒಂದು ಬಂಡಲ್ ಕಟ್ಟಿ ಮತ ಎಣಿಕೆ ನಡೆಯಲಿದೆ.

election counting

ಪ್ರಾಶಸ್ತ್ಯದ ಆಧಾರದ ಮೇಲೆ ಮತದಾನ ನಡೆದಿರುವ ಹಿನ್ನೆಲೆಯಿರುವುದರಿಂದ ಫಲಿತಾಂಶ ಹೊರಬೀಳಲು ಹೆಚ್ಚಿನ ಸಮಯ ಪಡೆಯುವ ಸಾಧ್ಯತೆಯಿದೆ. ವಾಯುವ್ಯ ಪದವೀಧರ ಕ್ಷೇತ್ರದಲ್ಲಿ 99,598 ಮತದಾರರ ಪೈಕಿ 65,914 ಮತ ಚಲಾವಣೆ ಆಗಿದ್ದರೆ, ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಶೇಕಡ 66.18ರಷ್ಟು ಮತದಾನವಾಗಿತ್ತು.

ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಮಧ್ಯೆ ಪೈಪೋಟಿಯಿದ್ದು, ಕಳೆದ ಬಾರಿಗಿಂತ ಈ ಬಾರಿ ದಾಖಲೆ ಪ್ರಮಾಣದಲ್ಲಿ ಮತದಾನ ನಡೆದಿದೆ. ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 25,386 ಮತದಾರರ ಪೈಕಿ 21,401 ಮತ ಚಲಾವಣೆ ಆಗಿದ್ದು, 84.30%ರಷ್ಟು ಮತದಾನವಾಗಿತ್ತು. ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 17,973 ಮತದಾರರ ಪೈಕಿ 15,577 ಮತ ಚಲಾವಣೆ ಆಗಿದ್ದು, 86.67%ರಷ್ಟು ಮತದಾನವಾಗಿತ್ತು.

bjp congress 1

ತೀವ್ರ ಜಿದ್ದಾಜಿದ್ದಿನ ಕಣವಾಗಿರುವ ವಾಯುವ್ಯ ಶಿಕ್ಷಕರ ಮತಕ್ಷೇತ್ರದಲ್ಲಿ ಕಾಂಗ್ರೆಸ್ – ಬಿಜೆಪಿ ಮಧ್ಯೆ ನೇರಾನೇರ ಹಣಾಹಣಿಯಿದೆ. ಉಭಯ ರಾಷ್ಟ್ರೀಯ ಪಕ್ಷಗಳಿಗೂ ಮತ ವಿಭಜನೆಯ ಆತಂಕ ಎದುರಾಗಿದೆ. ಕಾಂಗ್ರೆಸ್‍ನಿಂದ ಬಂಡಾಯ ಎದ್ದು ಪಕ್ಷೇತರ ಅಭ್ಯರ್ಥಿಯಾಗಿ ಎನ್.ಬಿ.ಬನ್ನೂರು ಸ್ಪರ್ಧಿಸಿದ್ದರು. ಅಷ್ಟೇ ಅಲ್ಲದೇ ಜೆಡಿಎಸ್ ಅಭ್ಯರ್ಥಿ ಚಂದ್ರಶೇಖರ ಲೋಣಿಯಿಂದ ಮತ ವಿಭಜನೆ ಆತಂಕ ಎದುರಾಗಿದ್ದು, ಮತಗಳ ವಿಭಜನೆಯಿಂದ ಯಾರಿಗೆ ಲಾಭ? ಯಾರಿಗೆ ನಷ್ಟ ಎನ್ನುವ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಇದನ್ನೂ ಓದಿ: ಇಡಿ ಇಕ್ಕಳದಲ್ಲಿ ಕಾಂಗ್ರೆಸ್ ನಾಯಕ- 3ನೇ ದಿನವೂ ವಿಚಾರಣೆ ಎದುರಿಸಲಿರುವ ರಾಹುಲ್ ಗಾಂಧಿ

ಚುನಾವಣಾ ವರ್ಷ ಹಿನ್ನೆಲೆ ಉಭಯ ರಾಷ್ಟ್ರೀಯ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದ್ದು, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ್ ಇದ್ದರೇ, ಗೆಲ್ಲುವ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಹಿರಿಯ ನಾಯಕ ಪ್ರಕಾಶ್ ಹುಕ್ಕೇರಿ ಇದ್ದಾರೆ. ಇದನ್ನೂ ಓದಿ: ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

election counting 2

ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಎಂಎಲ್‍ಸಿ ಹನುಮಂತ ನಿರಾಣಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಸಂಕ್ ಮಧ್ಯೆ ಪೈಪೋಟಿ ಇದ್ದು, ಇದೇ ಮೊದಲ ಬಾರಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಸಂಕ್ ಚುನಾವಣಾ ಕಣಕ್ಕಿಳಿದಿದ್ದಾರೆ. ವಾಯುವ್ಯ ಪದವೀಧರ ಕ್ಷೇತ್ರದಲ್ಲೂ ಕಳೆದ ಬಾರಿಗಿಂತ ಹೆಚ್ಚಿನ ಮತದಾನವಾಗಿದೆ.

Share This Article