ಬೆಂಗಳೂರು: ಬೆಂಗಳೂರು ವಾಸಕ್ಕೆ ಯೋಗ್ಯವಲ್ಲ ಎನ್ನುವ ಅಯೋಗ್ಯ ಜನರು ಬೆಂಗಳೂರಿಗೆ ಬರಬಾರದು. ಇವರನ್ನು ಬೆಂಗಳೂರಿಗೆ ಬನ್ನಿ ಎಂದು ಯಾರನ್ನು ಕರೆದಿಲ್ಲ ಎಂದು ಬೆಂಗಳೂರನ್ನು(Bengaluru) ಟ್ರೋಲ್ ಮಾಡುತ್ತಿರುವ ನೆಟ್ಟಿಗರನ್ನು ಸಚಿವ ಮುನಿರತ್ನ(Munirathna) ತರಾಟೆಗೆ ತೆಗೆದುಕೊಂಡಿದ್ದಾರೆ.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಬೆಂಗಳೂರನ್ನು ಬೈಯ್ಯುವ ಜನರು ತಿಂದ ತಟ್ಟೆಯಲ್ಲೇ ಹೇಸಿಗೆ ಮಾಡುತ್ತಾರೆ ಎನ್ನುವ ಗಾದೆ ರೀತಿಯೇ ಮಾಡುತ್ತಿದ್ದಾರೆ. ಅದೇ ರೀತಿ ಬೆಂಗಳೂರನ್ನು ತೆಗಳುವವರು ನೀಚ ಸಂಸ್ಕೃತಿಗೆ ಸೇರುತ್ತಾರೆ. ಬೆಂಗಳೂರಲ್ಲೇ ಇದ್ದು, ಬೆಂಗಳೂರಿನ ಅನ್ನವನ್ನೇ ತಿಂದು, ನಂತರ ಬೆಂಗಳೂರಿಗೆ ಬೈಯ್ಯುತ್ತಿದ್ದಾರೆ. ಈ ರೀತಿಯಾಗಿ ಯಾರು ಬೈಯ್ಯುತ್ತಿದ್ದಾರೋ ಅವರಿಂದಲೇ ಬೆಂಗಳೂರು ಹಾಳಾಗಿದೆ ಎಂದು ಕಿಡಿಕಾರಿದರು.
ಪ್ರಕೃತಿ ವಿಕೋಪಕ್ಕೆ ಯಾರೂ ಏನು ಮಾಡಲು ಸಾಧ್ಯವಿಲ್ಲ. ಪ್ರಕೃತಿ ವಿಕೋಪ ಇಡೀ ಬೆಂಗಳೂರಲ್ಲಿ ಆಗಿಲ್ಲ. ಒಂದೆರಡು ಕಡೆಗಳಲ್ಲಿ ಹೆಚ್ಚಾಗಿ ನೆರೆ ಬಂದಿದೆ. ಈ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶದಲ್ಲೆಲ್ಲ ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ ಎಂದರು.
ಒತ್ತುವರಿ ತೆರವುಗೊಳಿಸುವುದನ್ನು ಸರ್ಕಾರ ಮಾಡೇ ಮಾಡುತ್ತದೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಬಹಳ ಸ್ಪಷ್ಟವಾದ ಆದೇಶವನ್ನು ನೀಡಿದ್ದು, ರಾಜಕಾಲುವೆ ಹಾಗೂ ಕೆರೆಯನ್ನು(Lake) ಒತ್ತುವರಿ ಮಾಡಿಕೊಂಡವರನ್ನು ತೆರವು ಮಾಡಬೇಕೆಂದು ತಿಳಿಸಿದ್ದಾರೆ. ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಬಂದ ಮಳೆ(Rain) ಕಳೆದ 50 ವರ್ಷಗಳಲ್ಲಿ ಬಂದಿರಲಿಲ್ಲ. ಆದರೂ ಕೆಲವರು 50 ವರ್ಷಗಳಿಂದ ನಮ್ಮ ಸರ್ಕಾರ ಈ ರೀತಿ ಮಾಡಿತ್ತು, ಆ ರೀತಿ ಮಾಡಿತ್ತು ಎನ್ನುತ್ತಾರೆ. ಆದರೆ ಈ ರೀತಿ ಮಳೆ ಆಗೆಲ್ಲಾ ಬಂದಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಇಂದು ಎಲ್ಲಾ ರಾಜ್ಯಗಳಲ್ಲಿಯೂ ಮಳೆ ಬರುತ್ತಿದೆ. ಮುಂಬೈ, ಚೆನ್ನೈ, ಆಂಧ್ರ ಪ್ರದೇಶದಲ್ಲೆಲ್ಲಾ ಪ್ರವಾಹ(Flood) ಸ್ಥಿತಿ ಉಂಟಾಗಿ ಮುಳುಗಿ ಹೋಗಿತ್ತು. ಆಗೆಲ್ಲಾ ಯಾರೂ ಮಾತನಾಡಿರಲಿಲ್ಲ. ಆದರೆ ಬೆಂಗಳೂರು ಬದುಕಲು ನೆಮ್ಮದಿ ಜೀವನ ಕೊಟ್ಟಿದೆ. ಆದರೂ ಇವರು ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅರ್ಧಂಬರ್ಧ ಮೆಟ್ರೋ ಕಾಮಗಾರಿಯಿಂದಲೇ ಮುಳುಗಿತಾ ಬೆಂಗಳೂರು..?
ಬೆಂಗಳೂರು ಇತಿಹಾಸ ತಿಳಿದುಕೊಂಡು ಯಾರು ಈ ರೀತಿ ಮಾತನಾಡುವುದಿಲ್ಲ. ಯಾರೇ ಬೆಂಗಳೂರಿಗೆ ಬಂದರೂ ಮೊದಲು ಇಲ್ಲಿನ ಇತಿಹಾಸವನ್ನು ತಿಳಿದುಕೊಳ್ಳಬೇಕು. ಇಲ್ಲಿನ ಮೂಲ ಬೆಂಗಳೂರು ಯಾವುದು, ವಲಸೆ ಬೆಂಗಳೂರು ಯಾವುದು ಎನ್ನುವುದನ್ನು ತಿಳಿದುಕೊಳ್ಳಬೇಕು. ಅತಿ ಹೆಚ್ಚು ವಲಸೆ ಬಂದಿರುವವರು ಉತ್ತರ ಭಾರತದವರಾಗಿದ್ದಾರೆ ಎಂದ ಅವರು, ಕೆಟ್ಟದಾಗಿ ಟ್ವೀಟ್ ಮಾಡುವವರನ್ನು ಇಲ್ಲಿನ ಕಾನೂನು ಚೌಕಟ್ಟಿನಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಈ ಹಿಂದೆ ಹಾವಿನ ಮೊಟ್ಟೆ, ಇದೀಗ ಹಕ್ಕಿ ಗೂಡಿನಿಂದಾಗಿ ರಾ. ಹೆದ್ದಾರಿ ಕೆಲಸ ಸ್ಥಗಿತ!