ಕಾಸರಗೋಡು: ಕೆಲೆ ತಿಂಗಳ ಹಿಂದೆ ಹಾವಿನ ಮೊಟ್ಟೆಗೆ ಕಾವು ನೀಡುವ ಕಾರಣ, ಇದೀಗ ಪಕ್ಷಿಗಳ ಗೂಡುಗಳನ್ನು ರಕ್ಷಿಸುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿ (National Highway) ಕಾಮಗಾರಿಯನ್ನು ಸ್ಥಗಿತಗೊಳಿಸಲಾದ ಘಟನೆಯೊಂದು ನಡೆದಿದೆ.
ಹೌದು. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆಯ ಅನ್ವಯ ತಲಪಾಡಿಯಿಂದ ಚೆರ್ಕಳವರೆಗಿನ ಮೊದಲ ರೀಚ್ನ ಕಾಮಗಾರಿ ಭರದಿಂದ ಸಾಗುತ್ತಿತ್ತು. ಅಂತೆಯೇ ಚೆರ್ಕಳ ಪೇಟೆಯ ಒಂದು ಭಾಗದ ರಸ್ತೆ ಬದಿಯಲ್ಲಿ ಮರಗಳನ್ನು ಪರಿಶೀಲನೆ ನಡೆಸಿದಾಗ ಅದರಲ್ಲಿ ಹಕ್ಕಿಗಳು(Birds) ಗೂಡು ಕಟ್ಟಿರುವುದು ಬೆಳಕಿಗೆ ಬಂದಿದೆ.
ಚೆರ್ಕಳ ಜಂಕ್ಷನ್ನಲ್ಲಿರುವ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಬೃಹತ್ ಮರವೊಂದರಲ್ಲಿ ಸುಮಾರು 100ಕ್ಕೂ ಅಧಿಕ ನೀರು ಕಾಗೆಗಳು ಹಾಗೂ ಕೊಕ್ಕರೆಗಳು ಗೂಡು ಕಟ್ಟಿರುವುದು ಗೊತ್ತಾಗಿದೆ. ಹೀಗಾಗಿ ಇವುಗಳ ಸಂರಕ್ಷಣೆಗೆ 25 ದಿನ ರಸ್ತೆ ಕಾಮಗಾರಿಯನ್ನು ಸ್ಥಗಿತಗೊಳಿಸಲು ಗುತ್ತಿಗೆದಾರರ ಸೊಸೈಟಿ, ಅರಣ್ಯ ಇಲಾಖೆ ಹಾಗೂ ಪಕ್ಷಿ ತಜ್ಞರು ಸಮಾಲೋಚಿಸಿ ಈ ತೀರ್ಮಾನ ಕೈಗೊಂಡಿದ್ದಾರೆ. ಇದನ್ನೂ ಓದಿ: ಹೆದ್ದಾರಿಗಾಗಿ ಧರೆಗುರುಳಿದ ಬೃಹತ್ ಮರ- ನೂರಾರು ಹಕ್ಕಿಗಳ ಮಾರಣಹೋಮ
ವಿದ್ಯುತ್ ತಂತಿ ಬದಲಾವಣೆ ಮಾಡುವ ಸಲುವಾಗಿ 12 ಮೀಟರ್ ಎತ್ತರದ ಮರದ ರೆಂಬೆ ಕಡಿಯಲು ವಿದ್ಯುತ್ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ತಪಾಸಣೆ ನಡೆಸಿದರು. ಆಗ ಪಕ್ಷಿಗಳ ಗೂಡು ಕಂಡುಬಂದಿತ್ತು. ಕೂಡಲೇ ಸಂಸ್ಥೆಯ ಜಿ.ಎಂ ಬಾಲಸುಬ್ರಹ್ಮಣ್ಯಂ, ಸಾಮಾಜಿಕ ಅರಣ್ಯ ಇಲಾಖೆ ಡೆಪ್ಯುಟಿ ಕನ್ಸರ್ವೇಟರ್ ಪಿ.ಧನೇಶ್ ಕುಮಾರ್, ಭಕ್ತಿ ನಿರೀಕ್ಷಕ ರಾಜು ಕಿದೂ ಸ್ಥಳಕ್ಕಾಗಮಿಸಿ ಮಾಹಿತಿ ಪಡೆದುಕೊಂಡರು. ಇದನ್ನೂ ಓದಿ: ಮಿಸ್ಸಿಂಗ್ ಮಿನಿಸ್ಟರ್ಸ್ – ಬೆಂಗಳೂರು ಮಂತ್ರಿ, ಸಂಸದರ ವಿರುದ್ಧ ಕಾಂಗ್ರೆಸ್ ಕಿಡಿ
ಮೇ ತಿಂಗಳಿಂದ ಅಕ್ಟೋಬರ್ವರೆಗೆ ಕಡಲು ಕಾಗೆ, ಕೊಕ್ಕರೆಗಳು ತಮ್ಮ ಸಂತಾನೋತ್ಪತ್ತಿಯಲ್ಲಿ ತೊಡಗಿಕೊಳ್ಳುತ್ತವೆ. ಈ ಸಮಯದಲ್ಲಿ ಅವುಗಳ ಗೂಡು ತೆರವು ಮಾಡಿದರೆ ಮರಿಗಳು ಸಾಯುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ 25 ದಿನ ಕಾದು ಆ ಹಕ್ಕಿಗಳು ತಾನಾಗಿ ಗೂಡಿನಿಂದ ಹಾರಿಹೋದ ನಂತರ ಕಾಮಗಾರಿ ಆರಂಭಿಸಲು ತೀರ್ಮಾನ ಮಾಡಲಾಗಿದೆ. ಈ ಹಿಂದೆಯೂ ಇದೇ ರಸ್ತೆ ಕಾಮಗಾರಿ ಸಂದರ್ಭ ಹಾವಿನ ಮೊಟ್ಟೆಗೆ ಕಾವು ನೀಡುವ ಕಾರಣಕ್ಕಾಗಿ ಮಂಜೇಶ್ವರ ಆಸು-ಪಾಸಿನಲ್ಲಿ ತಿಂಗಳ ಕಾಲ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಇದನ್ನೂ ಓದಿ: ಕೊಡಗಿನ ಮಳೆ ಹಾನಿ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ, ಪರಿಶೀಲನೆ