ಬೆಂಗಳೂರು: ಲೋಕಸಭಾ ಚುನಾವಣೆ (Loksabha Election) ಸಮೀಪಿಸುತ್ತಿದ್ದಂತೆಯೇ ರಾಜಕೀಯ ಪಕ್ಷಗಳ ಚಟುವಟಿಕೆಗಳು ಗರಿಗೆದರಿವೆ. ಮಾಜಿ ಸಚಿವ ವಿ.ಸೋಮಣ್ಣ ಅವರ ತುಮಕೂರು ಸ್ಪರ್ಧೆಗೆ ಗ್ರೀನ್ಸಿಗ್ನಲ್ ಸಿಕ್ಕಿದೆ. ಈ ಬೆನ್ನಲ್ಲೇ ಬಿಜೆಪಿಯ ಉಳಿದ ಮಾಜಿ ಸಚಿವರಲ್ಲೂ ನಿರೀಕ್ಷೆಗಳು ಗರಿಗೆದರಿವೆ.
ಲೋಕಸಭೆ ಟಿಕೆಟ್ಗೆ ಬಿಜೆಪಿಯ ಇನ್ನೂ ಮೂವರು ಮಾಜಿ ಮಂತ್ರಿಗಳು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಮಾಜಿ ಸಚಿವರಾದ ಸಿ.ಟಿ ರವಿ (CT ravi), ಡಾ.ಕೆಸುಧಾಕರ್ (Dr K Sudhakar) ಹಾಗೂ ಶ್ರೀರಾಮುಲು (Sri Ramulu) ಅವರು ಲೋಕ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಮೂವರು ಮಾಜಿ ಸಚಿವರು ಈಗಾಗಲೇ ಹೈಕಮಾಂಡ್ ಭೇಟಿ ಮಾಡಿ ಲೋಕಸಭಾ ಟಿಕೆಟ್ಗಾಗಿ ಮನವಿ ಮಾಡಿದ್ದಾರೆ. ಸಿಟಿ ರವಿಯವರು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸ್ಪರ್ಧೆ ಬಯಸಿದ್ದಾರೆ. ಇನ್ನು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಡಾ.ಕೆ.ಸುಧಾಕರ್ ಟಿಕೆಟ್ ಕೇಳಿದರೆ, ಇತ್ತ ಬಳ್ಳಾರಿ ಕ್ಷೇತ್ರದಿಂದ ಶ್ರೀರಾಮುಲು ಟಿಕೆಟ್ ಪಡೆಯಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: Loksabha Election: ಮಾಧುಸ್ವಾಮಿ ಬಳಿಕ ಮತ್ತೊಬ್ಬರಿಂದ ಸೋಮಣ್ಣ ಸ್ಪರ್ಧೆಗೆ ವಿರೋಧ!
ಹೈಕಮಾಂಡ್ ಗೆ ಸಮೀಪವರ್ತಿ ನಾಯಕರ ಮೂಲಕವೂ ಟಿಕೆಟ್ಗೆ ಲಾಬಿ ನಡೆಸಲಾಗುತ್ತಿದೆ. ಆದರೆ ಮಾಜಿಗಳಿಗೆ ಟಿಕೆಟ್ ಕೊಡುವ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಇನ್ನೂ ಯಾವುದೇ ಸಂದೇಶ ಕೊಟ್ಟಿಲ್ಲ. ಜೊತೆಗೆ ಲೋಕಸಭಾ ಕ್ಷೇತ್ರಗಳ ಸರ್ವೆ ಆಧರಿಸಿ ಗೆಲ್ಲುವವರಿಗೆ ಮಾತ್ರ ಟಿಕೆಟ್ ಕೊಡಲು ನಿರ್ಣಯ ಮಾಡಿದೆ. ಸರ್ವೆಗಳಲ್ಲಿ ಮಾಜಿ ಸಚಿವರ ಪರ ಮತದಾರರು ಒಲವು ತೋರಿದರೆ ಮಾತ್ರ ಟಿಕೆಟ್ ಸಿಗಲಿದೆ ಎಂಬ ಮಾಹಿತಿ ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ.