ದಾವಣಗೆರೆ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಪುತ್ರ ಪ್ರಶಾಂತ್ (V Prashant Madal) ಲೋಕಾಯುಕ್ತ ದಾಳಿಗೊಳಗಾಗಿದ್ದು, ಮಾಡಾಳ್ ವಿರೂಪಾಕ್ಷಪ್ಪ ಸೇರಿದ ನಿವಾಸ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಶಾಸಕರ ನಿವಾಸ ಮಾಡಾಳ್ ಗ್ರಾಮದಲ್ಲಿರುವ ನಿವಾಸಕ್ಕೆ ಲೋಕಾಯುಕ್ತ ಅಧಿಕಾರಿಗಳು ಬೆಳಗ್ಗೆಯಿಂದ ಸತತ 11 ಗಂಟೆಗಳ ಕಾಲ ನಿರಂತರವಾಗಿ ತಲಾಶ್ ನಡೆಸಿದ್ದು, ಹತ್ತು ಲಕ್ಷಕ್ಕೂ ಹೆಚ್ಚು ನಗದು ಹಾಗೂ ಆಭರಣ ಸಿಕ್ಕಿವೆ. ಬೆಂಗಳೂರಿನಲ್ಲಿ ದಾಳಿ ನಡೆಸಿದ 17 ಗಂಟೆಗಳ ನಂತರ ಶಾಸಕರ ಸ್ವ ಗ್ರಾಮದಲ್ಲಿ ದಾಳಿ ನಡೆಸಿದ್ದು, ಬೆಟ್ಟ ಬಗೆದು ಹೆಗ್ಗಣ ಹಿಡಿದಂತಾಗಿದೆ. ಅಲ್ಲದೆ ಅಪಾರ ಪ್ರಾಮಾಣದ ಬೇನಾಮಿ ಆಸ್ತಿಯ ಬಗ್ಗೆ ಹೊಗೆಯಾಡುತ್ತಿದೆ.
ಚನ್ನಗಿರಿ ಕ್ಷೇತ್ರ ಎಂದರೆ ಮಾಡಾಳ್ ವಿರೂಪಾಕ್ಷಪ್ಪ, ಮಾಡಾಳ್ ವಿರೂಪಾಕ್ಷಪ್ಪ ಎಂದರೆ ಬಿಜೆಪಿ (BJP) ಭದ್ರ ಕೋಟೆ. ಆದರೆ ಇದೀಗ ಚುನಾವಣೆ ಸಮೀಪದಲ್ಲೇ ಲೋಕಾಯುಕ್ತ (Lokayukta) ಶಾಕ್ ಕೊಟ್ಟಿದೆ. ಲಂಚ ಪಡೆಯುವಾಗಲೇ ಶಾಸಕರ ಪುತ್ರ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿರೋದು ಶಾಸಕರನ್ನು ಬುಡಮೇಲಾಗಿಸಿದೆ. ಸದ್ಯ ಈ ಎಲ್ಲಾ ಬೆಳವಣಿಗೆಗಳ ಬೆಂಗಳೂರಿನ ನಿವಾಸದಲ್ಲಿ ಕೋಟಿ ಕೋಟಿ ಹಣವನ್ನು ವಶಕ್ಕೆ ಪಡೆದ ಲೋಕಾಯುಕ್ತ ಅಧಿಕಾರಿಗಳು ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿಯ ಮಾಡಾಳು ಗ್ರಾಮದಲ್ಲಿರುವ ಮಾಡಾಳ್ ವಿರೂಪಾಕ್ಷಪ್ಪರ ನಿವಾಸದಲ್ಲೂ ತಲಾಶ್ ನಡೆಸಿದರು.
ಹಾವೇರಿ ಹಾಗೂ ದಾವಣಗೆರೆಯ ಲೋಕಾಯುಕ್ತ ಅಧಿಕಾರಿಗಳು ನಾಲ್ಕು ಕಾರುಗಳಲ್ಲಿ 20ಕ್ಕೂ ಹೆಚ್ಚು ಅಧಿಕಾರಿಗಳು ಬರೋಬ್ಬರಿ 11 ಗಂಟೆಗಳ ಕಾಲ ಇಡೀ ಮನೆಯನ್ನು ಶೋಧ ನಡೆಸಿದ್ದು, ಹಲವಾರು ದಾಖಲೆಗಳನ್ನು ಬ್ಯಾಂಕ್ ವಹಿವಾಟು ಕಡತಗನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು. ಅಲ್ಲದೆ ಇಡೀ ಮನೆ ಕಚೇರಿ, ಜಮೀನು ಸೇರಿದಂತೆ ಹಲವು ಕಡೆಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಮಾಡಾಳ್ ಲಂಚ ಕೇಸ್- ಟೆಂಡರ್ನಲ್ಲಿ ಗೋಲ್ಮಾಲ್ ಹೇಗೆ? ಎಷ್ಟು ದುಬಾರಿ ದರ?
ಸತತ 10-11 ಗಂಟೆಗಳ ಕಾಲ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಅಲ್ಲೂ ಅಪಾರ ಚಿನ್ನಾಭರಣ ಸಿಕ್ಕಿದೆ. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆಯಲ್ಲಿ 16.5 ಲಕ್ಷ ನಗದು, 2800 ಗ್ರಾಂ ಚಿನ್ನ ಹಾಗೂ 20 ಕೆ.ಜಿ ಬೆಳ್ಳಿ ಹಾಗೂ ಅಪಾರ ಪ್ರಮಾಣದ ಆಸ್ತಿ ದಾಖಲೆ ಪತ್ತೆಯಾಗಿದೆ. ಇದಕ್ಕೂ ಮೊದಲು ಚನ್ನಗಿರಿ ತಾಲೂಕಿನ ಮಾವಿನಹೊಳೆಯಲ್ಲಿನ ಮಾಡಾಳ್ ಕುಟುಂಬದ ಕ್ರಶರ್ ಕಚೇರಿ ಹಾಗೂ ಮಾವಿನಕಟ್ಟಿ ಬಳಿಯ ಮಾಡಾಳ್ ಕುಟುಂಬದ ತೋಟದ ಮತ್ತು ಖೇಣಿ ಮನೆಯಲ್ಲಿ ಶೋಧ ನಡೆಸಿದ ಅಧಿಕಾರಿಗಳು, ಮನೆಯಲ್ಲಿ ಇರುವ ಶಾಸಕ ಮಾಡಾಳ್ ಪತ್ನಿ ಲೀಲಾವತಿಗೆ ಪಟ್ಟಿಯ ಪ್ರತಿ ನೀಡಿ ಸಹಿ ಪಡೆದರು.
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬೇನಾಮಿ ಆಸ್ತಿಯನ್ನು ಹೊಂದಿರಬಹುದು ಎನ್ನುವ ಅನುಮಾನದಿಂದ ಇಂದು ಕೂಡ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಬಹುದಾದ ಸಂಭವವಿದೆ. ಒಟ್ಟಾರೆಯಾಗಿ ಮಾಡಾಳ್ ವಿರೂಪಾಕ್ಷಪ್ಪ ನಿವಾಸದ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಕೆಲ ನಗದು ಹಾಗೂ ಆಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಇಂದು ಕೂಡ ಬೇನಾಮಿ ಆಸ್ತಿ ಮೇಲೆ ಶೋಧ ನಡೆಸುವ ಸಾಧ್ಯತೆ ಇದೆ.